ಸುಪ್ರೀಂ ಆದೇಶ ಖಂಡಿಸಿ ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ
ಮಂಡ್ಯ, ಸೆಪ್ಟೆಂಬರ್ 27 : ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಮೂರು ದಿನ ನಿತ್ಯ 6 ಸಾವಿರ ಕ್ಯೂಸೆಕ್ಸ್ ನಂತೆ 18 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡುತ್ತಿದ್ದಂತೆ ಕಾವೇರಿ ಕೊಳ್ಳದ ಮಂಡ್ಯ ನಗರದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ.
ಮಂಗಳವಾರ, ಸೆಪ್ಟೆಂಬರ್ 27ರ ಮಧ್ಯಾಹ್ನ ಸುಪ್ರೀಂ ಕೋರ್ಟ್ನ ಆದೇಶ ಹೊರಬೀಳುತ್ತಿದ್ದಂತೆ ರೊಚ್ಚಿಗೆದ್ದ ರೈತರು, ನಾಗರಿಕರು ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಮಾಯಿಸಿ ರಸ್ತೆತಡೆ ನಡೆಸಿ ಸುಪ್ರೀಂ ನ್ಯಾಯಮೂರ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. [ಕಾವೇರಿ ವಿವಾದ : ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ]

ಅಧಿಕಾರ ಬಿಟ್ರೂ ನೀರು ಬಿಡಬೇಡಿ : ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿರುವ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ ಮಾದೇಗೌಡ ಅವರು, ಸರಕಾರ ಅಧಿಕಾರ ಬಿಟ್ಟರೂ ನೀರು ಬಿಡಬಾರದು. ನಮ್ಮ ಹೋರಾಟ ಎಂದಿನಂತೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಇನ್ನೂ ತೀವ್ರತೆ ಪಡೆದುಕೊಳ್ಳಲಿದೆ ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳಲ್ಲಿ ಕೇವಲ 26 ಟಿಎಂಸಿ ಮಾತ್ರ ನೀರಿದ್ದು, ಮುಂದಿನ ಮಾರ್ಚ್ವರೆಗೆ ಕುಡಿಯಲು 28 ಟಿಎಂಸಿ ನೀರು ಬೇಕಾಗಿದೆ. ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಒಂದು ವೇಳೆ ನೀರು ಹರಿಸಿದ್ದೇಯಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೇಳಿರುವಂತೆ ಈಗಲಾದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದರು. ಸುಪ್ರೀಂ ಕೋರ್ಟ್ ನೀರು ಬಿಡಬೇಕು ಅಂದ್ರೆ ಬಿಟ್ಟುಬಿಡೋಕಾಗುತ್ತಾ? ಮೊದಲು ರಾಜ್ಯ ಸರಕಾರ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ಘೋಷಿಸಲಿ ಎಂದೂ ಮಾದೇಗೌಡರು ಆಗ್ರಹಿಸಿದರು. [ಸದನದ ತೀರ್ಮಾನ ಏನೇ ಇರ್ಲಿ, ಮೊದಲು ನೀರು ಬಿಡಿ : ಸುಪ್ರೀಂ ಆದೇಶ]
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಕುಡಿಯಲು ಮಾತ್ರ ನೀರು ಇದೆ ಎಂಬ ಅಂಕಿ-ಅಂಶ ನೀಡಿದರೂ ಸಹ ಸುಪ್ರೀಂ ನ್ಯಾಯಮೂರ್ತಿಗಳು ತಮಿಳುನಾಡಿನ ಪರ ಆದೇಶ ನೀಡುವ ಮೂಲಕ ತಮಿಳುನಾಡು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ನ ಆದೇಶಕ್ಕೆ ತಲೆಬಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಕಳೆದ ಸೆ.23ರಂದು ವಿಶೇಷ ವಿಧಾನಮಂಡಲ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಾಗಿ ರಾಜ್ಯದ ಜನತೆಯ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
ಶಂಭೂನಹಳ್ಳಿ, ಸುರೇಶ್, ಬಳ್ಳಾರಿಗೌಡ, ಕನ್ನಡ ಸೇನೆ ಮಂಜು, ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಅರವಿಂದ್, ಚಂದ್ರಶೇಖರ್, ಇತರರು ಭಾಗವಹಿಸಿದ್ದರು.












Click it and Unblock the Notifications