ಕಾವೇರಿ ನಾಯಕತ್ವ ಎಸ್ಸೆಂ ಕೃಷ್ಣ ವಹಿಸಲಿ : ಶಿವರಾಮೇಗೌಡ
ಮಂಡ್ಯ, ಸೆಪ್ಟೆಂಬರ್ 10 : ಕಾವೇರಿ ನದಿ ನೀರಿನ ಸಮಸ್ಯೆಗೆ ಕೇಂದ್ರ, ರಾಜ್ಯ ಸರ್ಕಾರ, ಸುಪ್ರೀಂಕೋರ್ಟ್, ನ್ಯಾಯಾಧೀಕರಣ, ಕಾವೇರಿ ಉಸ್ತುವಾರಿ ಸಮಿತಿಯಿಂದ ಪರಿಹಾರ ಕೊಡಲು ಸಾಧ್ಯವಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಒಳಿತು ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.
ಕಾವೇರಿ ಹೋರಾಟಕ್ಕೆ ಹಲವು ವರ್ಷಗಳ ಚರಿತ್ರೆ ಇದೆ. ಅಂದಿನಿಂದಲೂ ನಮಗೆ ಅನ್ಯಾಯ ಆಗುತ್ತಲೇ ಇದೆ. ಕಾವೇರಿ ಕಣಿವೆಯವರೇ ಮುಖ್ಯಮಂತ್ರಿಯಾದರೂ ಇದಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯ ಮಣ್ಣಿನ ಮಗ, ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ, ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ, ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ರಾಜಕೀಯವಾಗಿ ವಿಶ್ರಾಂತಿಯಲ್ಲಿದ್ದು, ಅವರೇ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಲು ನಾಯಕತ್ವ ವಹಿಸಿಕೊಳ್ಳಬೇಕೆಂದು ಕೋರಿದರು. [ಫಾಲಿ ಎಸ್.ನಾರಿಮನ್ ವಿರುದ್ಧ ಅಕ್ರೋಶವೇಕೆ?]
ಎಸ್.ಎಂ.ಕೃಷ್ಣ ಅವರು ರಾಜಕೀಯೇತರವಾಗಿ ಎಲ್ಲ ಪಕ್ಷದ ನಾಯಕರನ್ನು ಸಭೆ ಕರೆದು ಕಾವೇರಿ ಸಮಸ್ಯೆಯ ಬಗ್ಗೆ ಚರ್ಚಿಸಿ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭೇಟಿ ಮಾಡಿ, ನೀರಿನ ಹಂಚಿಕೆ ಸಂಬಂಧ ಪರಿಹಾರ ಕಂಡುಹಿಡಿದು ಎರಡೂ ರಾಜ್ಯದ ರೈತರಿಗೆ ನ್ಯಾಯ ದೊರಕಿಸಿಕೊಡಲಿ ಎಂದು ಮನವಿ ಮಾಡಿದರು.
ಹೋರಾಟಗಾರ ಅಸ್ವಸ್ಥ : ಕೃಷ್ಣರಾಜ ಸಾಗರ ಜಲಾಶಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಮೂರು ದಿನಗಳಿಂದ ಉಪವಾಸ ಕುಳಿತಿದ್ದ ಕರ್ನಾಟಕ ರಾಜ್ಯ ಲಂಚಮುಕ್ತ ಹೋರಾಟ ವೇದಿಕೆ ಅಧ್ಯಕ್ಷ ವೆಂಕಟೇಶ್ ಅಸ್ವಸ್ಥರಾಗಿದ್ದಾರೆ. [ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]
ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ವೆಂಕಟೇಶ್ ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ 11.30ರ ಸಮಯದಲ್ಲಿ ವೆಂಕಟೇಶ್ ತೀವ್ರ ಅಸ್ವಸ್ಥರಾಗಿ ಧರಣಿ ಸ್ಥಳದಲ್ಲೇ ಕುಸಿದುಬಿದ್ದರು. ತಕ್ಷಣ ವೆಂಕಟೇಶ್ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. [ಕನ್ನಡಿಗರ ಮಾನವೀಯತೆ ತಮಿಳ್ನಾಡಿಂದ ದುರುಪಯೋಗ : ಗೌಡ]