ಕಾವೇರಿ ನದಿ ತಟದಲ್ಲಿ ವಾಮಾಚಾರ: ಯುವತಿಯರ ವಶೀಕರಣಕ್ಕೆ ಯತ್ನ
ಮಂಡ್ಯ, ಸೆಪ್ಟೆಂಬರ್ 14: ನಿರಂತರ ಅನಾಚಾರಗಳಿಂದ ಅಪವಿತ್ರವಾಗುತ್ತಿರುವ ಕಾವೇರಿ ನದಿ ತಟದಲ್ಲಿ ವಾಮಾಚಾರ ಮಾಡಲಾಗಿದೆ. ಕಾವೇರಿ ನದಿಯ ಪಶ್ಚಿಮ ವಾಹಿನಿ ಕ್ಷೇತ್ರ ವಾಮಾಚಾರಿಗಳ ಪ್ರಸಿದ್ಧ ತಾಣವಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪವಿತ್ರ ಪಶ್ಚಿಮ ವಾಹಿನಿ ಕ್ಷೇತ್ರದಲ್ಲಿ ವಾಮಾಚಾರ ಮಾಡಿ ಹಾಡಹಗಲೇ ಯುವತಿಯರ ವಶೀಕರಣಕ್ಕೆ ಯತ್ನಿಸಲಾಗಿದೆ.
ಮಂಡಲ, ಬಲಿ ಪೂಜೆ ಮೂಲಕ ಮುಗ್ಧ ಯುವತಿಯರ ವಶೀಕರಣದ ದೃಶ್ಯ ಖಾಸಗಿ ವಾಹಿನಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಮಾಚಾರ ಮಾಡುವವರು ಕ್ಯಾಮೆರಾ ನೋಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ವಾಮಾಚಾರದ ಮೂಲಕ ಮುಗ್ಧ ಬಾಲಕಿಯರು, ಯುವತಿಯರ ವಶೀಕರಿಸುವ ಜಾಲ. ವಾಮಾಚಾರಿಗಳು ಹಾಗೂ ಅನಾಚಾರಿಗಳ ಜಾಲ ಶ್ರೀರಂಗಪಟ್ಟಣದಲ್ಲಿ ಸಕ್ರಿಯವಾಗಿದೆಯಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿದಂತಿದೆ.
ವಿವಿಧ ಪೂಜೆಗಳ ಹೆಸರಲ್ಲಿ ಮುಗ್ಧ ಜನರಿಗೆ ವಂಚನೆ ಮಾಡುತ್ತಿದ್ದು, ವಾಮಾಚಾರಕ್ಕೆ ನಿರಂತರವಾಗಿ ಹಂದಿ, ಕೋಳಿಗಳನ್ನು ಬಲಿ ಕೊಡಲಾಗುತ್ತಿದೆ. ಪ್ರಾಣಿ ಬಲಿಯಿಂದ ಪವಿತ್ರ ಕಾವೇರಿ ನದಿ ಕಲುಷಿತವಾಗುತ್ತಿದೆ.

ಹಾಡಹಗಲೇ ವಾಮಾಚಾರ ನಡೆದರೂ ಮಂಡ್ಯ ಜಿಲ್ಲಾಡಳಿತ ಸುಮ್ಮನಿರುವುದಕ್ಕೆ ಸಾರ್ವಜನಿಕ ಆಕ್ರೋಶ ಕೇಳಿಬಂದಿದೆ. ಭಾನುವಾರ, ಅಮಾವಾಸ್ಯೆ, ಹುಣ್ಣಿಮೆಯ ದಿನದಂದೇ ಅತಿ ಹೆಚ್ಚು ವಾಮಾಚಾರ ಘಟನೆ ನಡೆಯುತ್ತಿದ್ದು, ಪ್ರಶ್ನೆ ಮಾಡಿದವರಿಗೆ ಹಲ್ಲೆ, ಕೊಲೆ ಬೆದರಿಕೆ ಹಾಕಲಾಗುತ್ತದೆ.

ಈ ಎಲ್ಲವೂ ಗೊತ್ತಿದ್ದರೂ ಪುರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸುಮ್ಮನಿರುವ ಏಕೆ ಎನ್ನುವ ಪ್ರಶ್ನೆ ಮೂಡುತ್ತಿದೆ. ಶ್ರದ್ಧಾ ಕಾರ್ಯ, ಪಿಂಡ, ಅಶ್ರುತರ್ಪಣಕ್ಕೆ ಪ್ರಸಿದ್ಧವಾದ ಪಶ್ಚಿಮ ವಾಹಿನಿಯಲ್ಲಿ ವಾಮಾಚಾರ, ಅನಾಚಾರಗಳಿಂದ ಶ್ರದ್ಧಾ ಕಾರ್ಯಕ್ಕೂ ಧಕ್ಕೆಯಾಗುತ್ತಿದೆ.












Click it and Unblock the Notifications