ಮಂಡ್ಯಕ್ಕೆ ಬಿಜೆಪಿ ಲಗ್ಗೆ... ಸುಮಲತಾರ ತೀರ್ಮಾನ ಏನಿರಬಹುದು?
ಮಂಡ್ಯ, ಜುಲೈ 27: ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದ ಮಂಡ್ಯಕ್ಕೆ ಲಗ್ಗೆಯಿಡಲು ಬಿಜೆಪಿ ಹಾತೊರೆಯುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಒಂದಷ್ಟು ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಪಣ ತೊಟ್ಟಿದೆ. ಆದರೆ ಈಗಾಗಲೇ ಪಕ್ಷದಲ್ಲಿರುವ ನಾಯಕರ ಪೈಕಿ ಸ್ಪರ್ಧಿಸಿ ಗೆಲುವು ಪಡೆಯುವ ನಾಯಕರ ಕೊರತೆಯಿದ್ದು, ಹೀಗಾಗಿ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಮಾಡುತ್ತಾರಾ? ಎಂಬುದು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಅಚ್ಚರಿಯ ವಿಚಾರವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಪ್ರತ್ಯಕ್ಷವಾಗಿ ಬಿಜೆಪಿಯ ಸಹಕಾರದಿಂದ ಲೋಕಸಭಾ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದ ಸುಮಲತಾ ಅಂಬರೀಶ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ಸುಲಭವಾಗಿ ಉಳಿದಿಲ್ಲ.
ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್
ಅವತ್ತಿನ ಚುನಾವಣೆಯ ಸಂದರ್ಭ ಇದ್ದಂತಹ ಅನುಕಂಪದ ವಾತಾವರಣ ಈಗಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಸುಮಲತಾ ಅವರು ಸ್ಪರ್ಧಿಸಿದರೂ ಯಾವುದಾದರೂ ರಾಜಕೀಯ ಪಕ್ಷದ ಬೆಂಬಲ ಅನಿವಾರ್ಯವಾಗಲಿದೆ. ಏಕೆಂದರೆ ಮುಂದಿನ ಚುನಾವಣೆ ವೇಳೆಗೆ ಜನ ಕೂಡ ಸುಮಲತಾ ಅವರನ್ನು ಒಬ್ಬ ರಾಜಕಾರಣಿಯನ್ನು ನೋಡುವಂತೆಯೇ ನೋಡುವುದರಿಂದ ಮತ್ತು ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಪಟ್ಟಿಯನ್ನು ಕೇಳುವುದರಿಂದ ಅಷ್ಟು ಸುಲಭವೇನಲ್ಲ. ಜತೆಗೆ ಈ ಬಾರಿ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಪೈಪೋಟಿಯೂ ಹೆಚ್ಚಾಗುವುದರಿಂದ ಈ ಹಿಂದಿನಂತೆ ಸುಲಭ ಗೆಲುವು ಸಾಧ್ಯವಿಲ್ಲ.
ಲೋಕಸಭಾ ಚುನಾವಣೆ ನಂತರ ನಡೆದ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೂ ಬೆಂಬಲ ಸೂಚಿಸದೆ ತಟಸ್ಥವಾಗಿರುವ ಸುಮಲತಾ ಅವರು ಮುಂದೆ ಬರಲಿರುವ ವಿಧಾನಸಭಾ ಚುನಾವಣೆ ವೇಳೆಗೆ ಯಾವ ಪಕ್ಷದತ್ತ ಒಲವು ತೋರುತ್ತಾರೆ? ಅಥವಾ ಅವರೇ ಯಾವುದಾದರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರಾ ಗೊತ್ತಿಲ್ಲ. ಆದರೆ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ಪಕ್ಷ ತುದಿಗಾಲಿನಲ್ಲಿ ಕಾಯುತ್ತಿರುವುದಂತು ಸತ್ಯ.
ಬೇರೆ ಪಕ್ಷದಿಂದ ಕರೆತರುವ ಪ್ರಯತ್ನ
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಬಂದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಂತೆ ಪಕ್ಷವನ್ನು ಬೆಳೆಸುವಲ್ಲಿ, ನಾಯಕರನ್ನು ಹುಟ್ಟು ಹಾಕುವಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ತಳಮಟ್ಟದಿಂದ ಕಾರ್ಯಕರ್ತರನ್ನು ಮತ್ತು ನಾಯಕರನ್ನು ಹುಟ್ಟು ಹಾಕುವುದು ಬಿಜೆಪಿಗೆ ಸವಾಲ್ ಆಗಿ ಪರಿಣಮಿಸಿದೆ. 2023ರ ವಿಧಾನಸಭಾ ಚುನಾವಣೆ ಹೊತ್ತಿಗೆ ಒಂದಷ್ಟು ನಾಯಕರನ್ನು ಸೃಷ್ಟಿ ಮಾಡಲು ಸಾಧ್ಯವಾಗದಿದ್ದರೂ ಬೇರೆ ಪಕ್ಷದಿಂದ ಎಳೆದು ತರುವ ಪ್ರಯತ್ನವಂತು ನಡೆಯುವುದು ಖಚಿತ.
ನಾನು ಮಂಡ್ಯ ಬಿಡಲ್ಲ, ಮಂಡ್ಯ ಸಹ ನನ್ನನ್ನು ಬಿಡಲ್ಲ: ಸುಮಲತಾ
ಅಭಿಷೇಕ್ ಅಂಬರೀಷ್ ಕರೆತರುವ ಪ್ರಯತ್ನ
ಮಂಡ್ಯದಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಡಾ. ಕೆ.ಸಿ.ನಾರಾಯಣಗೌಡ ಅವರನ್ನು ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಎಳೆದು ತಂದು ಸ್ಪರ್ಧೆ ಮಾಡಿಸಿ ಗೆಲ್ಲಿಸಿ ಖಾತೆ ತೆರೆದಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇನ್ನಷ್ಟು ಕ್ಷೇತ್ರಕ್ಕೆ ವಿಸ್ತರಣೆ ಮಾಡುವ ಆಲೋಚನೆಯಲ್ಲಿದೆ. ಆದರೆ ಅದು ಅಷ್ಟು ಸುಲಭವೇನಲ್ಲ. ಹೀಗಾಗಿ ಸುಮಲತಾ ಮತ್ತು ಅವರ ಪುತ್ರ ಅಭಿಷೇಕ್ ಅವರನ್ನು ಪಕ್ಷಕ್ಕೆ ಸೆಳೆದು ಕೊಳ್ಳುವ ಆಲೋಚನೆಯೂ ಇದೆ ಎನ್ನಲಾಗುತ್ತಿದೆ.
ರಾಜ್ಯ ರಾಜಕೀಯಕ್ಕೆ ಸುಮಲತಾ ಕರೆತರುವ ಪ್ರಯತ್ನ
ಈಗಾಗಲೇ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ ಹೇಳುವುದಾದರೆ ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಗೆ ಬಿಜೆಪಿಯಿಂದ ಟಿಕೆಟ್ ನೀಡುವುದು, ಇನ್ನೊಂದೆಡೆ ಸುಮಲತಾ ಅಂಬರೀಶ್ ಅವರನ್ನು ರಾಜ್ಯ ರಾಜಕೀಯಕ್ಕೆ ಎಳೆದು ತರುವುದು. ಇದಕ್ಕೆ ಸುಮಲತಾ ಒಪ್ಪುತ್ತಾರೋ ಗೊತ್ತಿಲ್ಲ. ಈ ಬಗ್ಗೆ ಸುಮಲತಾ ಎಲ್ಲೂ ಮಾತನಾಡಿಲ್ಲ. ಆದರೂ ಇಂತಹದೊಂದು ಮಾತುಗಳು ಹರಿದಾಡುತ್ತಿವೆ. ಇದು ನಿಜವಾದರೂ ಅಚ್ಚರಿಯಿಲ್ಲ.
ಬಿಜೆಪಿ ಲೆಕ್ಕಾಚಾರ ಪ್ರಕಾರ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೇರಿದ ಕಾರ್ಯಕರ್ತರ ಪೈಕಿ ಹೆಚ್ಚಿನವರು ಅಂಬರೀಶ್ ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಅವರು ಸುಮಲತಾ ಅವರನ್ನು ಬೆಂಬಲಿಸುವ ಸಾಧ್ಯತೆಯಿರುವುದರಿಂದ ಜಿಲ್ಲೆಯಲ್ಲಿ ಬಿಜೆಪಿ ಅನುಕೂಲ ವಾತಾವರಣ ಸೃಷ್ಟಿಕೊಳ್ಳಬೇಕಾದರೆ ಅವರನ್ನು ಓಲೈಸಿಕೊಳ್ಳಬೇಕೆಂಬ ಚಿಂತನೆಯಲ್ಲಿದೆ. ಇದು ಕೇವಲ ಬಿಜೆಪಿಯ ಲೆಕ್ಕಾಚಾರವಲ್ಲ ಕಾರ್ಯಕರ್ತರ ಆಶಯವೂ ಆಗಿದೆ.
ಸುಮಲತಾ ಕೈಗೊಳ್ಳುವ ನಿರ್ಧಾರದ ಬಿಜೆಪಿ ಲೆಕ್ಕಾರ
ಬಿಜೆಪಿ ಲೆಕ್ಕಾಚಾರಗಳು ಏನಿದ್ದರೂ ಅದು ಫಲಿಸಬೇಕಾದರೆ ಸುಮಲತಾ ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಸದ್ಯಕ್ಕೆ ಸುಮಲತಾ ಅವರು ಕಾದು ನೋಡುವ ತಂತ್ರದಲ್ಲಿದ್ದು, ಮುಂದಿನ ವಿದ್ಯಮಾನಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಒಟ್ಟಾರೆ ಮಂಡ್ಯದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳು ಏನೆಲ್ಲ ಆಗುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.