ಕಾರ್ಯಕರ್ತನಿಂದ ಯಡಿಯೂರಪ್ಪ, ಈಶ್ವರಪ್ಪರಿಗೆ ಬಹಿರಂಗ ಪತ್ರ

ಮಂಡ್ಯ, ಏಪ್ರಿಲ್ 4; ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದು, ತಳಮಟ್ಟದಿಂದ ದುಡಿದು ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಬಿ. ಎಸ್. ಯಡಿಯೂರಪ್ಪ ಮತ್ತು ಕೆ. ಎಸ್. ಈಶ್ವರಪ್ಪ ಅವರು ಇದೀಗ ಬಹಿರಂಗವಾಗಿ ಕಿತ್ತಾಡಿಕೊಳ್ಳುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಬೇಸರ ತಂದಿದೆ.

ಇಂತಹ ಸಂದರ್ಭದಲ್ಲಿ ಮಂಡ್ಯದ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ತೋಡಿಕೊಂಡಿರುವ ಅಳಲು ಕೇವಲ ಮಂಡ್ಯದ ಕಾರ್ಯಕರ್ತನದೇ ಅಲ್ಲ. ರಾಜ್ಯದಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರದ್ದೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಾನೊಬ್ಬ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತ. ಕಳೆದೊಂದು ದಶಕದಿಂದ ಪಕ್ಷದ ಕಾರ್ಯವನ್ನು ನನ್ನ ಇತಿಮಿತಿಯಲ್ಲಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಪಕ್ಷದಲ್ಲಿ ದೊಡ್ಡ ಸ್ಥಾನಮಾನವೇನೂ ಇಲ್ಲ. ನಾನು ಬಯಸಿಯೂ ಇಲ್ಲ. ಚುನಾವಣೆಗೆ ಟಿಕೆಟ್ ಸಹ ಕೇಳಿಲ್ಲ. ಆದರೆ ನೀವುಗಳು ಕೊಟ್ಟ ಕಾರ್ಯಕ್ರಮಗಳಲ್ಲಿ, ಹೋರಾಟಗಳಲ್ಲಿ ತಪ್ಪದೇ ಭಾಗವಹಿಸಿದ್ದೇನೆ.

ಪಕ್ಷದ ಸದಸ್ಯತಾ ನೋಂದಣಿ ಅಭಿಯಾನ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂದ್ದೇನೆ. ಚುನಾವಣೆಗಳಲ್ಲಿ ಪೋಸ್ಟರ್ ಅಂಟಿಸಿದ್ದೇನೆ. ಮನೆ-ಮನೆಗೆ ಹೋಗಿ ಮತಭಿಕ್ಷೆ ಬೇಡಿದ್ದೇನೆ. ಬೇರೆ ಪಾರ್ಟಿಗಳ ಕಾರ್ಯಕರ್ತರು ನಮ್ಮ ನಾಯಕರನ್ನು ಬೈದಾಗ ಜಗಳವಾಡಿದ್ದೇನೆ. ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಾಗ ನಾನೇ ಗೆದ್ದಂತೆ ಹಿಗಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಕಾರ್ಯಕರ್ತರ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ

ಕಾರ್ಯಕರ್ತರ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ

ನಮ್ಮ ಅಭ್ಯರ್ಥಿ ಚುನಾವಣೆ ಸೋತಾಗ ವಾಜಪೇಯಿಯವರು ನಮಗೆ ಕಲಿಸಿರುವಂತೆ "ನ ದೈನ್ಯಂ, ನ ಪಲಾಯನಂ' (ದೈನ್ಯತೆಯನ್ನೂ ತೋರುವುದಿಲ್ಲ, ರಣರಂಗದಿಂದ ಪಲಾಯನವೂ ಮಾಡುವುದಿಲ್ಲ) ಎಂದುಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ತೀರ್ಮಾನ ಮಾಡಿ ಮತ್ತೆ ಕೆಲಸ ಮಾಡಿದ್ದೇನೆ. ನನ್ನಂತೆಯೇ ನಮ್ಮ ಪಕ್ಷದ ಹಲವಾರು ಕಾರ್ಯಕರ್ತರು ಕಾರ್ಯೋನ್ಮುಖರಾಗಿದ್ದಾರೆ. ಆದರೆ ನಮ್ಮ ಕಾರ್ಯಕರ್ತರ ಉತ್ಸಾಹಕ್ಕೆ ಅದೆಂದಿಗೂ ಅಡ್ಡಿಯಾಗಿಲ್ಲ. 2007ರಲ್ಲಿ ಜನತಾ ದಳದವರ ವಚನಭ್ರಷ್ಟತೆಯಿಂದ ನಮ್ಮ ಪಕ್ಷ ಅಧಿಕಾರವಂಚಿತವಾದಾಗ ಕಣ್ಣೀರು ಹಾಕಿದ್ದೇನೆ ಎಂದು ನೊಂದು ಮಂಜುನಾಥ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರೆಸಾರ್ಟ್ ರಾಜಕೀಯ ನೋಡಿ ಮರುಗಿದ್ದೇನೆ

ರೆಸಾರ್ಟ್ ರಾಜಕೀಯ ನೋಡಿ ಮರುಗಿದ್ದೇನೆ

2008ರಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಧಾನಸೌಧದ ಎದುರಿಗೆ ದೂರದಲ್ಲಿ ನಿಂತು ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡು ಆನಂದದ ಕಣ್ಣಿರು ಸುರಿಸಿದ್ದೇನೆ. ಆ ಅವಧಿಯಲ್ಲಿ ಎಂದಿಗೂ ನನ್ನ ಸ್ವಂತ ಕೆಲಸಕ್ಕೆ ನಾನು ಶಾಸಕರ ಬಳಿಗೆ, ಸಂಸದರ ಮನೆಗೆ ಹೋಗಿಲ್ಲ. ಯಾವುದೇ ಲಾಭವನ್ನು ನನ್ನ ಸ್ವಂತಕ್ಕೆ ಪಡೆದಿಲ್ಲ. ಮತ್ತೆ ನಮ್ಮ ಸರ್ಕಾರದ ಸಮಯದಲ್ಲಿ ತಾವು ಕೊಟ್ಟ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಶ್ರಮ ವಹಿಸಿದ್ದೇನೆ. ಅದೇ ಸಮಯದಲ್ಲಿ ಸರ್ಕಾರವನ್ನು ದುರ್ಬಲಗೊಳಿಸಲು ನಡೆದ ರೆಸಾರ್ಟ್ ರಾಜಕೀಯವನ್ನು ಕಂಡು ಮಮ್ಮಲ ಮರುಗಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ನರೇಂದ್ರ ಮೋದಿ ಅಭಿಮಾನಿಗಳಾಗಿದ್ದಾರೆ

ನರೇಂದ್ರ ಮೋದಿ ಅಭಿಮಾನಿಗಳಾಗಿದ್ದಾರೆ

ರಾಜ್ಯದ ಬಿಜೆಪಿ ವಿದ್ಯಮಾನ ಕುರಿತು ನನ್ನನ್ನು ಅವಹೇಳನ ಮಾಡುವವರೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳೇ ಆಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಕಾಂಗ್ರೆಸ್ಸಿಗರೇ ವೈಯಕ್ತಿಕವಾಗಿ ನರೇಂದ್ರ ಮೋದಿಯವರ ಅಭಿಮಾನಿಗಳಾಗಿದ್ದಾರೆ. ಅವರು ಮಾಡುತ್ತಿರುವ ಪ್ರತಿಯೊಂದು ಕಾರ್ಯದಿಂದ ದೇಶಕ್ಕೆ ಹಿಂದೆಂದಿಗಿಂತ ಹೆಚ್ಚು ಶಕ್ತಿ-ಗೌರವ ಬರುತ್ತಿದೆ ಎಂಬುದು ನನ್ನ ಬಲವಾದ ಅನಿಸಿಕೆ. ಅಂತಹ ಎತ್ತರದ ನಾಯಕನನ್ನು ಹೊಂದಿರುವ ನಿಮ್ಮ ಪಕ್ಷ ರಾಜ್ಯದಲ್ಲಿ ಹೋಗುತ್ತಿರುವ ದಿಕ್ಕೇನು ಎಂದು ಕಾಂಗ್ರೆಸ್ಸಿಗರೇ ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾರ್ಯಕರ್ತರನ್ನು ಬಲಿಕೊಡಬೇಡಿ

ಕಾರ್ಯಕರ್ತರನ್ನು ಬಲಿಕೊಡಬೇಡಿ

ರಾಜ್ಯದಲ್ಲಿ ಕೆಟ್ಟ ಆಡಳಿತವಿದ್ದರೂ ಅದನ್ನು ಜನ ಮರೆಯುವಂತೆ ಮಾಡುತ್ತಿರುವುದು ನಿಮ್ಮ ಪಕ್ಷದ ನಾಯಕರ ನಡವಳಿಕೆ ಎಂದು ನೋವಿನಿಂದ ಕಾಂಗ್ರೆಸ್ಸಿಗರು ಮೂದಲಿಸಿದಾಗ ನನ್ನ ಸ್ಥಿತಿ ಹೇಗಾಗಿರಬಹುದು? ಪತ್ರಕರ್ತರ ಪ್ರಶ್ನೆಯಿಂದಲೂ ನಾಯಕರು ಜಾಣ್ಮೆಯ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಾರೆ. ಆದರೆ, ನನ್ನಂತಹ ಸಾಮಾನ್ಯ ಕಾರ್ಯಕರ್ತ ಮುಜುಗರದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿದೆ.

ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಇದೆ. ಬಿಸಿಲ ಬೇಗೆ ಏರುತ್ತಿದೆ. ಕುಡಿಯುವ ನೀರಿನ ಹಾಹಾಕಾರ ತಲೆದೋರುತ್ತಿದೆ. ನೀರು ಪಾತಾಳ ಸೇರಿದೆ. ಪ್ರಧಾನಿ ನರೇಂದ್ರಮೋದಿಯವರು ಜಲಮಿಷನ್ ಯೋಜನೆ ಜಾರಿಗೊಳಿಸಿ ನೀರಿನ ಸಂರಕ್ಷಣೆಗೆ ಮುಂದಾಗಿದ್ದರೆ. ರಾಜ್ಯದಲ್ಲಿ ಅಧಿಕಾರ ಸಂರಕ್ಷಣೆಗೆ ಮುಂದಾಗಿರುವುದು ಮತ್ತಷ್ಟು ನೋವು ತರಿಸಿದೆ. ನಾವು ಈಗ ಜಿ.ಪಂ., ತಾ.ಪಂ.ಚುನಾವಣಾ ಕಾಲಘಟ್ಟದಲ್ಲಿದ್ದೇವೆ. ನಾಯಕರಾದವರು ತಮ್ಮ ಬೆಂಬಲಿಗರಿಗೆ ಚುನಾವಣೆಗಳಲ್ಲಿ ಅಧಿಕಾರ ಕೊಡಿಸುವ ಬಗ್ಗೆ ಆಲೋಚನೆ ಮಾಡಬೇಕು. ಪಕ್ಷವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿಷ್ಠಾಪಿಸಬೇಕು. ಅದು ಬಿಟ್ಟು ವೈಯಕ್ತಿಕ ವರ್ಚಸ್ಸಿಗಾಗಿ ಕಾರ್ಯಕರ್ತರನ್ನು ಬಲಿಕೊಡುವುದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

Recommended Video

    ಜೈಲಿಗೆ ಹೋಗ್ಬೇಕು ಅಂತ ಹೆದರಿ ಹೊಸ ಡ್ರಾಮಾ ಶುರು ಮಾಡಿದ್ರಾ? | Jarkiholi High drama | Oneindia Kannada
    ಬಹುಮತದಿಂದ ಅಧಿಕಾರಕ್ಕೆ ಬರಲಿಲ್ಲ

    ಬಹುಮತದಿಂದ ಅಧಿಕಾರಕ್ಕೆ ಬರಲಿಲ್ಲ

    ಸುಸಂಸ್ಕೃತ ಪಕ್ಷ ಎಂದೇ ಬಿಂಬಿತವಾಗಿರುವ ಭಾರತೀಯ ಜನತಾ ಪಾರ್ಟಿಯಲ್ಲಿ ಹಲವಾರು ಪ್ರಜ್ಞಾವಂತರು, ವಿಚಾರವಂತರು, ದೂರದೃಷ್ಠಿಯುಳ್ಳವರು ಇದ್ದಾರೆ. ಆದರೆ, ಇತ್ತೀಚಿನ ಹಲವಾರು ಘಟನೆಗಳಿಂದಾಗಿ ಕಾರ್ಯಕರ್ತರಾದ ನಮಗೇ ಅತೀವ ನೋವು ತಂದಿರುವಾಗ ಇನ್ನು ಸಾಮಾನ್ಯ ಜನರು ಹೇಗೆಲ್ಲಾ ಸ್ಪಂದಿಸಬಹುದು ಎಂಬುದರ ಕುರಿತು ಯೋಚಿಸುವ ಅಗತ್ಯವಿದೆ. ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರದೆ, ಶಾಸಕರ ರಾಜೀನಾಮೆ ಕೊಡಿಸಿ ಮತ್ತೆ ಆಯ್ಕೆಯಾಗುವಂತೆ ಮಾಡಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರು, ಮುಂದೆ ಹೇಗೆಲ್ಲಾ ನಡೆದುಕೊಳ್ಳಬೇಕು, ಮುಂಬರುವ ವಿಧಾನ ಸಭೆಯಲ್ಲಿ 150 ವಿಷನ್ ಘೋಷಣೆ ಮಾಡಿದಂತೆ ಅದನ್ನು ಸಾಕಾರಗೊಳಿಸಲು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಮನ ಗೆಲ್ಲುವುದನ್ನು ಬಿಟ್ಟು ಹಿರಿಯ ದಿಗ್ಗಜರೇ ಕಿತ್ತಾಡಿಕೊಳ್ಳುತ್ತಿರುವುದರಿಂದ ರಾಜ್ಯದ ಜನತೆ ಪುಕ್ಕಟ್ಟೆ ಮನರಂಜನೆ ಪಡೆಯುತ್ತಿದ್ದಾರೆ.

    ಭಾರತೀಯ ಜನತಾ ಪಾರ್ಟಿಯಲ್ಲಿರುವ ಮೊದಲ ಸಾಲಿನ ಮತ್ತು ಎರಡನೇ ಸಾಲಿನಲ್ಲಿರುವ ನಾಯಕರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಮತ್ತು ಕಾರ್ಯಕರ್ತರನ್ನು ಬೆಳೆಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕಿದೆ. ಇಲ್ಲದಿದ್ದರೆ ರಾಜ್ಯದ ಜನತೆ ಬೇಸತ್ತು ಅವರೇ ನಿರ್ಧಾರ ಮಾಡಿಯಾರು ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+