ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಮೂವರು ಆಕಾಂಕ್ಷಿಗಳು!
Recommended Video
ಮಂಡ್ಯ, ನವೆಂಬರ್ 28 : ಚುನಾವಣೆ ಘೋಷಣೆಯಾಗುವ ಮೊದಲೇ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಮೂವರು ಆಕಾಂಕ್ಷಿಗಳಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಮತ್ತು ಬಿಜೆಪಿ ಕ್ಷೇತ್ರದ ಮೇಲೆ ಕಣ್ಣಿಟ್ಟಿವೆ.
ಮಂಡ್ಯ ರಾಜಕಾರಣ : ಬಿಜೆಪಿ ಸೇರಿದ ಕೆ.ಎಸ್.ನಂಜುಂಡೇಗೌಡ
ಮಂಡ್ಯ ಜಿಲ್ಲೆಯ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗ ಸತ್ಯ. ಅಂಬರೀಶ್ ಮತ್ತು ರಮ್ಯಾ ಇಬ್ಬರೂ ಜಿಲ್ಲೆಯ ರಾಜಕಾರಣದತ್ತ ಅಷ್ಟಾಗಿ ಗಮನ ಹರಿಸಿಲ್ಲ.
ಶ್ರೀರಂಗಪಟ್ಟಣ ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ!
ರಮ್ಯಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎನ್ನುವ ಸುದ್ದಿಗಳು ರಾಜಕೀಯ ವಲಯದಲ್ಲಿ ಹಬ್ಬಿದ್ದವು. ಆದರೆ, ಜಿಲ್ಲಾ ಜೆಡಿಎಸ್ ನಾಯಕರು ಈ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.
ರವೀಂದ್ರ ಶ್ರೀಕಂಠಯ್ಯಗೆ ಆಹ್ವಾನ ನೀಡಿದ ಎಚ್ಡಿಕೆ!
ಚನ್ನಪಟ್ಟಣ ಶಾಸಕ, ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಜಿಲ್ಲೆಯಲ್ಲಿ ಪಕ್ಷದ ನೆಲೆ ಭದ್ರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ತಂತ್ರ ರೂಪಿಸಿದ್ದಾರ.
ಕಾಂಗ್ರೆಸ್ ತೊರೆದಿದ್ದ ರವೀಂದ್ರ ಶ್ರೀಕಂಠಯ್ಯ ಅವರನ್ನು ಕುಮಾರಸ್ವಾಮಿ ಪಕ್ಷಕ್ಕೆ ಆಹ್ವಾನಿಸಿದ್ದು, ಜೆಡಿಎಸ್ ಸೇರುವುದು ಖಚಿತವಾಗಿದೆ. ಮತ್ತೊಂದು ಕಡೆ ರೈತ ಸಂಘದಲ್ಲಿದ್ದ ಕೆ.ಎಸ್.ನಂಜುಂಡೇಗೌಡರು ಬಿಜೆಪಿ ಸೇರಿದ್ದು ತಾಲೂಕಿನ ರಾಜಕೀಯಕ್ಕೆ ಹೊಸ ದಿಕ್ಕು ನೀಡಿದೆ.
ಬಂಡಾಯ ಶಾಸಕರ ನಡೆ ಎತ್ತ?
ಶ್ರೀರಂಗಪಟ್ಟಣ ಕ್ಷೇತ್ರ ಸದ್ಯ ಜೆಡಿಎಸ್ ವಶದಲ್ಲಿಯೇ ಇದೆ. ರಮೇಶ ಬಂಡಿಸಿದ್ದೇಗೌಡ ಅವರು ಕ್ಷೇತ್ರದ ಶಾಸಕರು. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಅವರು ಪಕ್ಷದಿಂದ ಅಮಾನತುಗೊಂಡಿದ್ದಾರೆ. 'ಜನವರಿಯಲ್ಲಿ ಕಾಂಗ್ರೆಸ್ ಸೇರುತ್ತೇನೆ' ಎಂದು ಅವರು ಹೇಳಿದ್ದು, ಮುಂದಿನ ಚುನಾವಣೆಯ ಮೊದಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಟಿಕೆಟ್ ಆಕಾಂಕ್ಷಿ ಎಂದ ಪುಟ್ಟೇಗೌಡ
ಕಾಂಗ್ರೆಸ್ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಎಂ.ಪುಟ್ಟೇಗೌಡ ಅವರು ಶ್ರೀರಂಪಟ್ಟಣ ಕ್ಷೇತ್ರದ ಟಿಕೆಟ್ಗಾಗಿ ಪ್ರಯತ್ನ ಪಡುತ್ತಿದ್ದಾರೆ. '2018ರ ಚುನಾವಣೆಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಲಿದ್ದೇನೆ. ಬೇರೆ ಪಕ್ಷದಿಂದ ಬಂಡೆದ್ದ ಶಾಸಕರೊಬ್ಬರು ಕಾಂಗ್ರೆಸ್ನಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಅವರನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.
ಇಂಡವಾಳು ಸಚ್ಚಿದಾನಂದ ಅವರು ಆಕಾಂಕ್ಷಿ
ಕೆಪಿಸಿಸಿ ಸದಸ್ಯ ಇಂಡವಾಳು ಸಚ್ಚಿದಾನಂದ ಅವರು ಸಹ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ವಾರ ಬೆಂಬಲಿಗರ ಸಭೆ ನಡೆಸಿದ್ದಾರೆ. 'ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಹಳ್ಳಿ-ಹಳ್ಳಿ ಸುತ್ತಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷದ ಸಮಾವೇಶಗಳನ್ನು ಯಶಸ್ವಿಯಾಗಿ ಮಾಡಿದ್ದೇನೆ. ಆದ್ದರಿಂದ, ಈ ಬಾರಿ ಟಿಕೆಟ್ ಸಿಗಲಿದೆ' ಎಂದು ಹೇಳಿದ್ದಾರೆ.
ಕೆ.ಎಸ್.ನಂಜುಂಡೇಗೌಡ ಬಿಜೆಪಿಗೆ
ರೈತ ಸಂಘದ ನಾಯಕ ಕೆ.ಎಸ್.ನಂಜುಂಡೇಗೌಡ ಬಿಜೆಪಿ ಸೇರಿದ್ದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. 2018ರ ಚುನಾವಣೆಗೆ ಅವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಆದ್ದರಿಂದ, ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ಖಂಡಿತ.
ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಅಭ್ಯರ್ಥಿ
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದು, ಡಿಸೆಂಬರ್ನಲ್ಲಿ ರವೀಂದ್ರ ಶ್ರೀಕಂಠಯ್ಯ ಪಕ್ಷ ಸೇರಲಿದ್ದಾರೆ.