ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ
ಮಂಡ್ಯ, ನವೆಂಬರ್ 26: ಶನಿವಾರ ಕೊನೆಯುಸಿರೆಳೆದ ನಟ, ರಾಜಕಾರಣಿ ಅಂಬರೀಶ್ ಅವರ ನೆನಪಿನಲ್ಲಿ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಅಂಬರೀಶ್ ಪಾರ್ಥಿವ ಶರೀರ ಇರಿಸಿದ್ದ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸೋಮವಾರ ಬೆಳಿಗ್ಗೆ ತೆರಳಿದ ಅವರು ಈ ಮಾಹಿತಿ ನೀಡಿದರು.
ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಚಿತ್ರರಂಗದಲ್ಲಿ ಸಮಕಾಲೀನರು. ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ನೆನಪಿನಲ್ಲಿ ಇರಿಸುವಂತಹ ಯೋಜನೆಗಳನ್ನು ತರಬೇಕು.

ಅದರಲ್ಲಿಯೂ ಮುಖ್ಯವಾಗಿ ಅಂಬರೀಶ್ ನನಗೆ ಆತ್ಮೀಯರು. ನನಗಿಂತ ಅವರು ಎಂಟು ವರ್ಷಗಳಷ್ಟು ದೊಡ್ಡವರು. ಚಿತ್ರರಂಗಕ್ಕೆ ಮತ್ತು ಜನಪ್ರತಿನಿಧಿಯಾಗಿ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ನೆನಪಿನಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ಹೇಳಿದರು.
ಅಂಬರೀಶ್ ಅವರ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ನಡೆಸದಂತೆ ತಡೆಯಲು ವಕೀಲರೊಬ್ಬರು ಹೈಕೋರ್ಟ್ಗೆ ಹೋಗಿದ್ದಾರೆ. ಅವರಿಗೆ ದೇವರು ಒಳ್ಳೆ ಬುದ್ಧಿ ನೀಡಲಿ ಎಂದರು.
ಅಂಬರೀಶ್ ಕಳೆದ ವಾರವಷ್ಟೇ ನನಗೆ ಕರೆ ಮಾಡಿದ್ದರು. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ 'ಹುಷಾರು ಕಣೋ' ಎಂದು ಹೇಳಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿಕೊಂಡರು.
ಮಂಡ್ಯದ ಜನತೆ, ಅಭಿಮಾನಿಗಳ ಬಯಕೆಯಂತೆ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೆಲವು ಸಮಸ್ಯೆಗಳಿದ್ದರೂ ಅಂತಿಮ ದರ್ಶನಕ್ಕೆ ಅನುವು ಮಾಡಲಾಗಿದೆ. ಭಾನುವಾರದಿಂದ 2.5 ಲಕ್ಷ ಜನರು ಅಂತಿಮ ನಮನ ಸಲ್ಲಿಸಿದ್ದಾರೆ ಎಂದ ಕುಮಾರಸ್ವಾಮಿ, ಅಹಿತಕರ ಘಟನೆಗಳು ನಡೆಯದಂತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಭಾನುವಾರ ಮೃತಪಟ್ಟ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications