ಕ್ರಿಕೆಟ್ ಬೆಟ್ಟಿಂಗ್ ಗೆ ಸ್ನೇಹಿತರಿಂದಲೇ ಬಲಿಯಾದ ಮಂಡ್ಯದ ವಿದ್ಯಾರ್ಥಿ
ಕ್ರಿಕೆಟ್ ಬೆಟ್ಟಿಂಗ್ ಗೆ ಮಂಡ್ಯದ ಕೆ.ಆರ್. ಪೇಟೆಯಲ್ಲಿ ಸ್ನೇಹಿತರಿಂದಲೇ, ಶಶಾಂಕ್ ಎಂಬ ವಿದ್ಯಾರ್ಥಿ ಕೊಲೆಯಾದ ದುರ್ಘಟನೆ ನಡೆದಿದೆ. ಇದು ಕ್ರಿಕೆಟ್ ಬೆಟ್ಟಿಂಗ್ ಕುರಿತು ಮತ್ತಷ್ಟು ಬಿಗಿ ಕಾನೂನು ಜಾರಿಯಾಗಬೇಕಾದ ಅಗತ್ಯವನ್ನು ಸಾರಿಹೇಳಿದೆ.
ಮಂಡ್ಯ, ಮೇ 22: ಕ್ರಿಕೆಟ್ ಬೆಟ್ಟಿಂಗ್ ಗೆ ಮಂಡ್ಯದ ಕೆ.ಆರ್. ಪೇಟೆಯಲ್ಲಿ ಸ್ನೇಹಿತರಿಂದಲೇ, ಶಶಾಂಕ್ ಎಂಬ ವಿದ್ಯಾರ್ಥಿ ಕೊಲೆಯಾದ ದುರ್ಘಟನೆ ನಡೆದಿದೆ. ಇದು ಕ್ರಿಕೆಟ್ ಬೆಟ್ಟಿಂಗ್ ಕುರಿತು ಮತ್ತಷ್ಟು ಬಿಗಿ ಕಾನೂನು ಜಾರಿಯಾಗಬೇಕಾದ ಅಗತ್ಯವನ್ನು ಸಾರಿಹೇಳಿದೆ.
9 ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಮತ್ತು ಡಿಪ್ಲೊಮಾ ಓದುತ್ತಿದ್ದ ಇನ್ನೋರ್ವ ಸೇರಿ ಶಶಾಂಕ್ ಜೊತೆ ಕ್ರಿಕೆಟ್ ಬೆಟ್ಟಿಂಗ್ ಮಾಡಿದ್ದರು. ಆದರೆ ಬೆಟ್ಟಿಂಗ್ ನಲ್ಲಿ ಸೋತಿದ್ದ ಶಶಾಂಕ್ ಈ ಐವರಿಗೆ 3,000 ರೂ. ನೀಡಬೇಕಿತ್ತು. ಹಣ ನೀಡಿಲ್ಲದ ಹಿನ್ನೆಲೆಯಲ್ಲಿ ಶಶಾಂಕ್ ನನ್ನು ಆತನ ಸ್ನೇಹಿತರೇ ಉಸಿರುಕಟ್ಟಿ ಸಾಯಿಸಿ, ನಂತರ ಶವವನ್ನು ಹೊಂಗೆಸೊಪ್ಪಿನಿಂದ ಮುಚ್ಚಿಟ್ಟು ಪರಾರಿಯಾಗಿದ್ದರು.[ಮಂಡ್ಯದಲ್ಲಿ ವಿಷವುಣಿಸಿ, ಉಸಿರುಗಟ್ಟಿಸಿ ವಿದ್ಯಾರ್ಥಿಯ ಕೊಲೆ]
ಕಾಣೆಯಾಗಿದ್ದ ಶಶಾಂಕ್ ಶವ ಪತ್ತೆಯಾಗುತ್ತಲೇ ಕುಟುಂಬ ವರ್ಗದ ಆಕ್ರಂದನ ಮುಗಿಲುಮುಟ್ಟಿತ್ತು. ಜೊತೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಶಶಾಂಕನ ಫೋನ್ ನಲ್ಲಿದ್ದ ಕಾಲ್ ಲಿಸ್ಟ್ ಮೂಲಕ ಆರೋಪಿಯನ್ನು ಪತ್ತೆ ಮಾಡಿದ್ದರು. ಐವರಲ್ಲಿ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಇನ್ನು ಮೂವರ ಶೋಧ ಕಾರ್ಯ ನಡೆಯುತ್ತಿದೆ.
ಇದು ಕ್ರಿಕೆಟ್ ಬೆಟ್ಟಿಂಗ್ ಗಾಗಿ ನಡೆದ ಕೊಲೆ ಎಂಬುದು ಆರೋಪಿಗಳಿಂದ ತಿಳಿದುಬಂದಿದೆ. ಈಗಿನ್ನೂ ಒಂಬತ್ತನೇ ತರಗತಿ ಓದುತ್ತಿರುವ ಮಕ್ಕಳು ಬೆಟ್ಟಿಂಗ್ ಹುಚ್ಚಿನಿಂದಾಗಿ ಕೊಲೆ ಮಾಡುವ ಮಟ್ಟಕ್ಕಿಳಿಯುತ್ತಾರೆಂದರೆ ನಿಜಕ್ಕೂ ಶೋಚನೀಯ ಸಂಗತಿ.
{promotion-urls}