ಸಕ್ಕರೆ ನಾಡು ಮಂಡ್ಯಕ್ಕೆ ಮುಂಬೈನಿಂದ ಅಂಟಿಕೊಂಡಿದೆ ಕೊರೊನಾ ಕಹಿ
ಮಂಡ್ಯ, ಮೇ 18: ಸಕ್ಕರೆನಾಡು ಮಂಡ್ಯ ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗುತ್ತಿದೆ. ಮುಂಬೈನಿಂದ ಮಂಡ್ಯಕ್ಕೆ ಮರಳುತ್ತಿರುವವರಿಂದ ಸೋಂಕು ಹೆಚ್ಚುತ್ತಿದ್ದು, ಭಾನುವಾರ ಒಂದೇ ದಿನ 22 ಸೋಂಕುಗಳು ದೃಢಪಟ್ಟಿದ್ದು, ಸೋಂಕಿತ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕವನ್ನುಂಟು ಮಾಡಿದೆ.
ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 72ಕ್ಕೆ ಏರಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಮುಂಬೈ ನಂಟು ಕಾರಣವಾಗಿದೆ. ಕೊರೊನಾ ಸೋಂಕು ದೃಢಪಟ್ಟ 22 ಮಂದಿ ಪೈಕಿ 17 ಮಂದಿ ಮುಂಬೈನಿಂದ ಬಂದವರಾಗಿದ್ದು, ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲೂಕಿಗೆ ಸೇರಿದವರಾಗಿದ್ದಾರೆ. ಪಿ-869ರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೆ.ಆರ್.ಪೇಟೆ-ನಾಗಮಂಗಲದವರಲ್ಲಿ ಸೋಂಕು
ಸೋಂಕಿತರಲ್ಲಿ 10 ಮಂದಿ ಪುರುಷರು, 9 ಮಂದಿ ಮಹಿಳೆಯರು, ಒಬ್ಬ ಬಾಲಕಿ, ಮತ್ತೊಬ್ಬ ಬಾಲಕ ಹಾಗೂ 1 ವರ್ಷದ ಗಂಡು ಮಗು ಸೇರಿದೆ. ಇವರಲ್ಲಿ 19 ಮಂದಿ ಕೆ.ಆರ್.ಪೇಟೆ ತಾಲೂಕಿಗೆ ಸೇರಿದವರಾಗಿದ್ದರೆ, 3 ಜನರು ನಾಗಮಂಗಲ ತಾಲೂಕಿಗೆ ಸೇರಿದ್ದಾರೆ. ಸೋಂಕಿತರ ಬಗ್ಗೆ ನೋಡುತ್ತಾ ಹೋದರೆ ಪಿ-1097 ರಿಂದ ಪಿ-1117 ಹಾಗೂ ಪಿ-1125 ಸೋಂಕಿತ ವ್ಯಕ್ತಿಗಳಾಗಿದ್ದಾರೆ. ಇವರಲ್ಲಿ ಪಿ-1108, ಪಿ-1112, ಪಿ-1113, ಪಿ-1114 ಹಾಗೂ ಪಿ-1125 ಸೋಂಕಿತರು ಪಿ-869 ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಾಗಿದ್ದಾರೆ.
ಮುಂಬೈನಿಂದ ಟಿಟಿ ವಾಹನದಲ್ಲಿ ಆಗಮಿಸಿದವರ ಪೈಕಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮೇ 11ರಂದು ಮುಂಬೈನಿಂದ ಹೊರಟು ಮೇ 12ರಂದು ಕೆ.ಆರ್.ಪೇಟೆಯ ಆನೆಗೊಳ ಚೆಕ್ಪೋಸ್ಟ್ಗೆ ಆಗಮಿಸಿದ್ದಾರೆ. ಮೇ 13ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ. ಇವರು ಮುಂಬೈನ ವಿಲೇಪಾರ್ಲೆ, ಸಾಂತಾಕ್ರೂಜ್ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ಮರುವನಹಳ್ಳಿ ವ್ಯಕ್ತಿಯಿಂದ ಹರಡಿದ ಸೋಂಕು
58 ವರ್ಷದ ಸೋಂಕಿತ ವ್ಯಕ್ತಿಯೊಬ್ಬರು ಹಲವು ದಶಕಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಝೂವೊಂದರ ತೋಟದಲ್ಲಿ ಗಾರ್ಡ್ನ್ ಆಗಿ ಕೆಲಸ ಮಾಡಿಕೊಂಡಿದ್ದು, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರೊಂದಿಗೆ ಕೆ.ಆರ್.ಪೇಟೆಗೆ ಬಂದಿದ್ದಾರೆ. 13ರಂದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಈ ವ್ಯಕ್ತಿಯ ಕುಟುಂಬಕ್ಕೆ ಸೇರಿದ 10 ಮಂದಿಗೆ ಸೋಂಕು ದೃಢಪಟ್ಟಿದೆ.
ಮುಂಬೈನಿಂದ ಬಂದಿದ್ದ ಕೆ.ಆರ್.ಪೇಟೆ ತಾಲೂಕು ಮರುವನಹಳ್ಳಿ ಗ್ರಾಮದ ವ್ಯಕ್ತಿಯಲ್ಲಿ ಮೂರನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಈತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 75, 65, 60 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ. ಈತನೊಂದಿಗೆ ಸಂಪರ್ಕಕ್ಕೆ ಬಂದಿದ್ದ, 28 ವರ್ಷದ ಯುವಕ ಬೆಂಗಳೂರಿನ ಮೂಡಲಪಾಳ್ಯದಲ್ಲಿ ಕೆಲಸ ಮಾಡಿಕೊಂಡಿದ್ದು, ಯುಗಾದಿ ಹಬ್ಬದ ಸಂದರ್ಭದಲ್ಲಿ ಕೆ.ಆರ್.ಪೇಟೆಗೆ ಆಗಮಿಸಿದ್ದರು. ಇವರೆಲ್ಲರೂ ಮರುವನಹಳ್ಳಿ ಗ್ರಾಮದವರಾಗಿದ್ದಾರೆ. ಮೇ 13ರಂದು ಇವರ ಗಂಟಲು ದ್ರವವನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ.

ಬಸ್ನಲ್ಲಿ ಪ್ರಯಾಣಿಸಿದ್ದ ಟ್ಯಾಕ್ಸಿ ಚಾಲಕ
44 ವರ್ಷದ ಸೋಂಕಿತ ವ್ಯಕ್ತಿ ಮುಂಬೈನ ಸಾಂತಾಕ್ರೂಸ್ ನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮೇ 11ರಂದು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಬಂದಿದ್ದರೆ, ಮತ್ತೊಬ್ಬ, 52 ವರ್ಷದ ಸೋಂಕಿತ ವ್ಯಕ್ತಿ ಮುಂಬೈನ ಉಲ್ಲಾಸ್ ನಗರದಲ್ಲಿ ವಾಸವಿದ್ದ. ಈತ ಬಿರ್ಲಾ ಕಂಪನಿಯಲ್ಲಿ ಗಾರ್ಡ್ನ್ ಆಗಿ ಕೆಲಸ ಮಾಡಿಕೊಂಡಿದ್ದನು. ಇವರು ಮೇ 13ರಂದು ಬಸ್ನಲ್ಲಿ 26 ಮಂದಿ ಸಹ ಪ್ರಯಾಣಿಕರೊಂದಿಗೆ ಆಗಮಿಸಿದ್ದರು. ಸೋಂಕಿತ 35 ವರ್ಷದ ಗೃಹಿಣಿ ಮುಂಬೈನ ಸಾಂತಾಕ್ರೂಜ್ ವಾಸಿಯಾಗಿದ್ದಾರೆ. ಮತ್ತೊಬ್ಬ ಸೋಂಕಿತೆ 32 ವರ್ಷದ ಗೃಹಿಣಿಯಾಗಿದ್ದು ಮುಂಬೈನ ಜಾಧವನಗರ ನಿವಾಸಿಯಾಗಿದ್ದಾರೆ. ಇವರಿಬ್ಬರೂ ಟಿಟಿ ವಾಹನದಲ್ಲಿ ಆಗಮಿಸಿದ್ದು, ಪಿ-1115ರ ಮಹಿಳೆ ನಾಗಮಂಗಲಕ್ಕೆ ಮೇ 12ರಂದು ಆಗಮಿಸಿದ್ದರು.

ಕ್ಯಾಮರಾಮನ್ ಸಹಾಯಕನಿಗೆ ಸೋಂಕು
ಸೋಂಕಿತ 39 ವರ್ಷದ ಯುವಕನಾಗಿದ್ದ, ಮುಂಬೈನ ಕಮಾನಿಕುರಲಾದಲ್ಲಿ ಕ್ಯಾಮರಾಮನ್ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದರು. ಪಿ-1117 ಸೋಂಕಿತ 2 ವರ್ಷದ ಮಗು ಪಿ-1116ರ ಮಗನಾಗಿದ್ದಾನೆ. ತಂದೆ-ಮಗು ಕಾರಿನ ಮೂಲಕ ಮೇ 12ರಂದು ಬೆಳ್ಳೂರು ಚೆಕ್ಪೋಸ್ಟ್ಗೆ ಬಂದಿದ್ದು, 13ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇದೀಗ ಸೋಂಕು ಇರುವುದು ದೃಢಪಟ್ಟಿದೆ.
ಅತ್ತ ರಾಮನಗರ ಇತ್ತ ಮೈಸೂರು ಜಿಲ್ಲೆಗಳು ಗ್ರೀನ್ ಝೋನ್ನಲ್ಲಿದ್ದು, ಮೈಸೂರಿನಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ಯಾವುದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿರಲಿಲ್ಲ. ಆದರೆ ಯಾವಾಗ ಮುಂಬೈಗೆ ಕೆಲಸಕ್ಕೆ ಹೋಗಿದ್ದ ಮಂಡ್ಯದ ಜನ ಮರಳಿ ತಮ್ಮ ಊರಿಗೆ ಬರಲು ಆರಂಭಿಸಿದರೋ ಆಗಿನಿಂದಲೇ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಭಯದ ವಾತಾವರಣವನ್ನುಂಟು ಮಾಡಿದೆ.











Click it and Unblock the Notifications