ಜಪಾನ್ನಲ್ಲಿ ನಡೆಯುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಸಕ್ಕರೆ ನಾಡು ಮಂಡ್ಯದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ
ಮಂಡ್ಯ, ಏಪ್ರಿಲ್, 08: ಜಪಾನ್ ದೇಶದ ಇತಾಮಿ ನಗರದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮಂಡ್ಯದ ಸಿದ್ದಯ್ಯನಕೊಪ್ಪಲು ಗೇಟ್ ಬಳಿಯ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.
7ನೇ ತರಗತಿ ವಿದ್ಯಾಭ್ಯಾಸ ಮಾಡುವ ಕಾಳೇನಹಳ್ಳಿಯ ಸುಚಿತ್ರ ದಂಪತಿಯ ಪುತ್ರ ಶಾನ್ ಸ್ಟೀವನ್, 8ನೇ ತರಗತಿ ವಿದ್ಯಾಭ್ಯಾಸ ಮಾಡುವ ಬೇವಿನಹಳ್ಳಿಯ ಜವರೇಗೌಡ-ಭವ್ಯ ಅವರ ಪುತ್ರಿ ಧನ್ಯ ಜೆ.ಗೌಡ ಎನ್ನುವ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 43 ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ದೇಶಾದ್ಯಂತ 1,400 ಹಾಗೂ ಜಿಲ್ಲೆಯಿಂದ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಂಡ್ಯ ಜಿಲ್ಲೆಯ 40 ವಿದ್ಯಾರ್ಥಿಗಳ ಪೈಕಿ ಈ ಇಬ್ಬರು ಆಯ್ಕೆ ಆಗಿದ್ದು, ಭಾರತದ ಭಾವೈಕ್ಯತೆಯನ್ನು ವಿದೇಶದಲ್ಲಿ ವಿನಿಮಯ ಮಾಡಲಿದ್ದಾರೆ. ಇದು ಹೆಮ್ಮೆಪಡುವ ವಿಷಯವಾಗಿದೆ ಎಂದು ಶಾಲೆಯ ಅಧ್ಯಕ್ಷ ಮಂಜು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಹಿತಿ ಕೊರತೆಯಿಂದಾಗಿ ಈ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಭಾಗವಹಿಸಿರಲಿಲ್ಲ. ಮಂಡ್ಯದ ಅಚೀವರ್ಸ್, ಕಾವೇರಿ ಹಾಗೂ ನಮ್ಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ನಾಲ್ಕೈದು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
16ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ
ಇಡೀ ಕರ್ನಾಟಕದಲ್ಲಿ ವಿದೇಶಕ್ಕೆ ಆಯ್ಕೆಯಾದ ಶಾಲೆ ನಮ್ಮದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ನಮ್ಮ ಶಾಲೆಯಲ್ಲಿ ರಾಜ್ಯ ಮತ್ತು ಐಸಿಐಸಿಐ ಶಿಕ್ಷಣ ಎರಡೂ ಇದ್ದು, ಅನಾಥ ಮಕ್ಕಳಿಗೆ ಉಚಿತವಾಗಿ ಹಾಗೂ ಕಡುಬಡವರಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಎಂದರು.

ಮಹಾಮಾರಿ ಕೊರೊನಾ ವೇಳೆ ಹಲವಾರು ಮಂದಿ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡರು. ಇಂತಹ ಸುಮಾರು 16ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಜೊತೆಗೆ ಮಕ್ಕಳಿಗೆ ದೇಶದ ಸಂಸ್ಕೃತಿ ಹಾಗೂ ಹಬ್ಬಗಳ ಬಗ್ಗೆ ಹೇಳಿಕೊಡಲಾಗುತ್ತಿದೆ ಎಂದು ವಿವರಿಸಿದರು.
10ನೇ ತರಗತಿ ವಿದ್ಯಾರ್ಥಿಗಳ ವಿವರ
ನಮ್ಮ ಶಾಲೆಯು 2021-22ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು, ಮೊದಲ ವರ್ಷದಲ್ಲೇ ಉತ್ತಮ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಇಲ್ಲಿ ಎಲ್ಕೆಜಿಯಿಂದ 10ನೇ ತರಗತಿವರೆಗೆ 414 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಚಟುವಟಿಕೆ ಆಧಾರಿತವಾಗಿ ಬೋಧನೆಯನ್ನು ನೀಡುತ್ತಿದ್ದು, ಕರಾಟೆ, ಯೋಗ, ಕ್ರೀಡಾಕೂಟದಲ್ಲೂ ಸಹ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಕರಾಟೆ, ಯೋಗ, ಅಥ್ಲೆಟಿಕ್ಸ್ನಲ್ಲಿ ನಮ್ಮ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ನೃತ್ಯ, ವೇಷಭೂಷಣ ಸ್ಪರ್ಧೆ, ಕೆಸರುಗದ್ದೆ ಓಟ ಸೇರಿದಂತೆ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಮಕ್ಕಳನ್ನು ಭಾಗವಹಿಸಲು ಹುರಿದುಂಬಿಸಲಾಗುತ್ತಿದೆ ಎಂದು ಹೇಳಿದರು.
ಭಾರತದ ಸಂಸ್ಕೃತಿ, ಪ್ರವಾಸೋದ್ಯಮ, ಸೋಮನಾಥಪುರ ದೇವಾಲಯ, ಮದುವೆ, ರಾಜರ ಬಗ್ಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಲಾಯಿತು. ಇದು ನಮ್ಮ ದೇಶ ಮತ್ತು ಇತರೆ ದೇಶಗಳ ಬಾಂಧವ್ಯವನ್ನು ವೃದ್ಧಿಸಲಿದೆ. ಜಪಾನ್ನ ಇತಾಮಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಇನ್ನೂ ಹೆಚ್ಚಿನ ವಿಷಯ ಮಂಡಿಸಿ ಪ್ರಶಸ್ತಿ ಗಳಿಸಲು ನಮ್ಮ ಶಾಲೆಯ ಅಧ್ಯಕ್ಷರಾದ ಮಂಜು ಅವರು ತಯಾರು ಮಾಡುತ್ತಿದ್ದಾರೆ.
ಜಪಾನ್ ದೇಶದ ಇತಾಮಿ ಇಂಟರ್ನ್ಯಾಷನಲ್ ಕಲ್ಚರಲ್ ಸಂಸ್ಥೆಯು ಕಳೆದ 20 ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ವರ್ಷ ನಮ್ಮ ಶಾಲೆಯ ಮಕ್ಕಳು ಆಯ್ಕೆಯಾಗಬೇಕೆಂಬ ದೃಷ್ಟಿಯಿಂದ 40 ಮಕ್ಕಳನ್ನು ತಯಾರು ಮಾಡಲಾಯಿತು. ಆದರೆ ಇದರಲ್ಲಿ ಇಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಈ ತಿಂಗಳ 23ರಂದು ಜಪಾನ್ಗೆ ತೆರಳಿ 15 ದಿನ ಅಲ್ಲೇ ಇದ್ದು ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ವಿನಿಮಯ ಮಾಡಲಾಗುವುದು ಎಂದು ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರಾದ ಮಂಜು ಹೇಳಿದರು.












Click it and Unblock the Notifications