ವೀರಾಜಪೇಟೆ ವೀರ ಯೋಧ ಅಲ್ತಾಫ್ ಹಿಮಪಾತದಡಿ ಸಿಲುಕಿ ಹುತಾತ್ಮ
ಕೊಡಗು, ಫೆಬ್ರವರಿ 25: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕೊಡಗಿನ ಯೋಧ ಅಲ್ತಾಫ್ ಹುತಾತ್ಮರಾದ ಹಿನ್ನೆಲೆ ಯೋಧನ ವಿರಾಜಪೇಟೆ ಮನೆಯಲ್ಲಿ ಶೋಕ ಮಡುಗಟ್ಟಿದೆ. ವಿರಾಜಪೇಟೆ ವೀರ ಯೋಧ ಅಲ್ತಾಫ್ ನಿನ್ನೆ ಹಿಮಪಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಅಪ್ರತಿಮ ದೇಶ ಭಕ್ತರಾಗಿದ್ದ ಅಲ್ತಾಫ್ ಅಹಮ್ಮದ್ 19 ವರ್ಷದಿಂದ ದೇಶ ಸೇವೆ ಮಾಡುತ್ತಿದ್ದರು. ಪತ್ನಿ ಮತ್ತು ತಾಯಿಯೊಂದಿಗೆ ಕಾನ್ಫರೆನ್ಸ್ ವಿಡಿಯೋ ಕಾಲ್ನಲ್ಲಿದ್ದಾಗಲೇ ಹಿಮಪಾತವಾಗಿ ಹುತಾತ್ಮರಾಗಿದ್ದಾರೆ.
ನಿವೃತ್ತಿಯಾಗಿದ್ದರೂ ಮತ್ತೆ ದೇಶ ಸೇವೆಗೆ
ಕೆಲ ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತಿಯಾಗಿದ್ದ ಅಲ್ತಾಫ್ ಮತ್ತೆ ದೇಶ ಸೇವೆಯ ಹಂಬಲದಲ್ಲಿ ಸೇನೆ ಸೇರಿದ್ದರು. ದೇಶ ಸೇವೆಯ ಹಂಬಲ ಅವರನ್ನು ಮರಳಿ ಬಾರದೂರಿಗೆ ಕರೆದೊಯ್ದಿದೆ. ಯೋಧ ಅಲ್ತಾಫ್ ಬುಧವಾರ ಬೆಳಗ್ಗೆ 8.30ಕ್ಕೆ ವಿಡಿಯೋ ಕಾಲ್ ಮಾಡಿದ್ದರು. ಜಮ್ಮುವಿನಲ್ಲಿ ವಿಪರೀತ ಹಿಮಪಾತದ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದೊಂದಿಗೆ ಮಾತಾಡುತ್ತಲೇ ಹಿಮಪಾತದಡಿ ಸಿಲುಕಿ ಮೃತರಾಗಿದ್ದಾರೆ. ಇಂದು ವಿರಾಜಪೇಟೆಗೆ ವೀರ ಯೋಧ ಅಲ್ತಾಫ್ ಅಹಮ್ಮದ್ ಅವರ ಪಾರ್ಥಿವ ಶರೀರ ಬರುವ ನಿರೀಕ್ಷೆಯಿದ್ದು, ಸೇನೆಯ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಸ್ವಂತ ಮನೆಯನ್ನೂ ಹೊಂದಿರಲಿಲ್ಲ ಯೋಧ ಅಲ್ತಾಫ್
ವಿರಾಜಪೇಟೆ ವೀರ ಯೋಧ ಅಲ್ತಾಫ್ ಸ್ವಂತಕ್ಕೆಂದು ಒಂದು ಮನೆಯನ್ನೂ ಹೊಂದಿರಲಿಲ್ಲ. ತನ್ನ ಇಬ್ಬರು ಸಹೋದರಿಯರನ್ನು ವಿವಾಹ ಮಾಡಿಕೊಟ್ಟಿದ್ದರು. ಪೆರಂಬಾಡಿ ಬಳಿ ಜಾಗ ಖರೀದಿಸಿದ್ದ ಯೋಧ ಅಲ್ತಾಫ್ ನಿವೃತಿಯ ಬಳಿಕ ಮನೆ ಕಟ್ಟುವ ಕನಸು ಕಂಡಿದ್ದರು.
ಪ್ರೇಮಿಗಳ ದಿನ ಮತ್ತು ಹಿಜಾಬ್ ಬಗ್ಗೆ ಹೇಳಿದ್ದೇನು?
ಯೋಧ ಅಲ್ತಾಫ್ ಫೆಬ್ರವರಿ 14ರಂದು ಮಾಡಿದ್ದ ಆಡಿಯೋ ಇದೀಗ ವೈರಲ್ ಆಗಿದೆ. ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಬೇಸರ ವ್ಯಕ್ತಪಡಿಸಿದ್ದ ಯೋಧ, ನಾವು ಸೈನಿಕರು ದೇಶದ ಜನತೆಗೋಸ್ಕರ ಗಡಿಯಲ್ಲಿ ಹೋರಾಡುತ್ತೇವೆ. ನೀವು ಮಾತ್ರ ಜಾತಿ- ಜಾತಿಗೋಸ್ಕರ ಬಡಿದಾಡುತ್ತೀರಾ? ನಾವೆಲ್ಲಾ ಭಾರತೀಯರೇ. ಇಲ್ಲಿ ನಮ್ಮ ಕಣ್ಣೆದುರೇ ಸೈನಿಕರು ಸಾಯುತ್ತಿದ್ದಾರೆ ಎಂದು ವಾಟ್ಸಪ್ ಆಡಿಯೋದಲ್ಲಿ ವೀರ ಯೋಧ ಅಲ್ತಾಫ್ ವಿಷಾದದ ದನಿಯಲ್ಲಿ ಹೇಳಿದ್ದರು.
ಭಾರೀ ಹಿಮಪಾತದ ವಿಡಿಯೋ ಮಾಡಿ ಕಳುಹಿಸಿದ್ದ ಯೋಧ ಅಲ್ತಾಫ್, ಫೆಬ್ರವರಿ 14 ಪ್ರೇಮಿಗಳ ದಿನವಲ್ಲ, ಅಂದು ರಾಜ್ ಗುರು, ಭಗತ್ ಸಿಂಗ್ರನ್ನು ನೇಣಿಗೇರಿಸಿದ ದಿನ. ಹಾಗಾಗಿ, ಪ್ರೇಮಿಗಳ ದಿನ ಆಚರಿಸಬಾರದೆಂದು ಯೋಧ ಅಲ್ತಾಫ್ ಕರೆ ಕೊಟ್ಟಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ವಿರಾಜಪೇಟೆ ವೀರ ಯೋಧ ಅಲ್ತಾಫ್ ಹುತಾತ್ಮರಾದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಶೋಕ ವ್ಯಕ್ತಪಡಿಸಿದ್ದಾರೆ. ಕಳೆದ 19 ವರ್ಷಗಳಿಂದ AOC ರಿಜಿಮೆಂಟ್ನಲ್ಲಿ ಹವಾಲ್ದಾರ್ ಆಗಿ ಸೇವೆಯಲ್ಲಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ವೀರ ಯೋಧ ಅಲ್ತಾಫ್ ಅಹ್ಮದ್ ಕರ್ತವ್ಯದಲ್ಲಿದ್ದಾಗಲೇ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿರುವುದು ದುಃಖ ತಂದಿದೆ. ದೇಶ ಸೇವೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ ಅಮರ ಯೋಧನಿಗೆ ಅನಂತ ಪ್ರಣಾಮಗಳು. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications