ಅಂತೂ ಸೆರೆ ಸಿಕ್ಕಿದವು ಎರಡು ಪುಂಡಾನೆಗಳು
ಕೊಡಗಿನ ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟದಲ್ಲಿ ವಾಸ್ತವ್ಯ ಹೂಡಿ ಬಡ ಕಾರ್ಮಿಕರನ್ನು ಕಾಡಿಸಿದ್ದ ಪುಂಡಾನೆಗಳ ಪೈಕಿ ಎರಡನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಡಿಕೇರಿ, ನವೆಂಬರ್ 15 : ಕೊಡಗಿನ ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟದಲ್ಲಿ ವಾಸ್ತವ್ಯ ಹೂಡಿ ಬಡ ಕಾರ್ಮಿಕರನ್ನು ಕಾಡಿಸಿದ್ದ ಪುಂಡಾನೆಗಳ ಪೈಕಿ ಎರಡನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಮತ್ತು ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಪುಂಡ ಕಾಡಾನೆಗಳು ಎಲ್ಲೆಂದರಲ್ಲಿ ಅಲೆಯುತ್ತಾ ಕಾಫಿ, ಬಾಳೆ, ಅಡಿಕೆ, ತೆಂಗನ್ನು ನಾಶ ಮಾಡುತ್ತಾ ಕಾರ್ಮಿಕರನ್ನು ಬಲಿಪಡೆಯುತ್ತಾ ಅಟ್ಟಹಾಸ ಮೆರೆದಿದ್ದವು. ಇವುಗಳ ಉಪಟಳದಿಂದ ಬೇಸತ್ತಿದ್ದ ಜನ ಪ್ರತಿಭಟನೆಗೆ ಇಳಿದಿದ್ದರು.
ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಪುಂಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸರ್ಕಾರ ಅನುಮತಿ ನೀಡಿದ ಮೇರೆಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿ ಎರಡು ಕಾಡಾನೆಗಳನ್ನು ಸಾಕಾನೆಗಳ ಸಹಾಯದಿಂದ ಸೆರೆಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.[ಚಾಮರಾಜನಗರ: ಕಾಡಾನೆ ದಾಳಿಗೆ ಕಾಲು ಮುರಿದುಕೊಂಡ ರೈತ]
ಅರಣ್ಯ ಅಧಿಕಾರಿಗಳ ತಂಡ, ದುಬಾರೆ ಆನೆ ಶಿಬಿರದ ಮಾವುತರು, ಆರ್ಸಿಬಿ ತಂಡ ಚೆಟ್ಟಳ್ಳಿ ವ್ಯಾಪ್ತಿಯ ಪುಂಡಾನೆಯ ಸೆರೆಗೆ ಕಾರ್ಯಾಚರಣೆ ನಡೆಸಿ ಡಾ. ಉಮಾಶಂಕರ್ ಹಾಗೂ ವಲಯ ಅರಣ್ಯಾಧಿಕಾರಿ ಕೆ. ನೆಹರು ಅವರ ಮಾರ್ಗದರ್ಶನದಂತೆ ಪುಂಡಾನೆಯನ್ನು ಪತ್ತೆ ಹಚ್ಚಿ ಅರವಳಿಕೆಯ ಗುಂಡನ್ನು ಹಾರಿಸಲಾಯಿತು. ಸುಮಾರು 500 ಮೀ. ಅರಣ್ಯದೊಳಗೆ ತೆರಳಿದ ಆನೆ ಕೆಳಕ್ಕೆ ಬಿದ್ದಿತು.
ನಂತರ ಸಾಕಾನೆಗಳಾದ ಅಭಿಮನ್ಯು, ಹರ್ಷ, ಗಜೇಂದ್ರ, ಕೃಷ್ಣ ಸೇರಿ 6 ಆನೆಗಳು ಪುಂಡಾನೆಯನ್ನು ಸುತ್ತುವರಿದು, ಅರಣ್ಯದ ಬದಿಗೆ ಎಳೆತಂದು ಲಾರಿಗೆ ಹತ್ತಿಸಲಾಯಿತು. ಬಳಿಕ ಚೆಟ್ಟಳ್ಳಿ, ಸಿದ್ದಾಪುರ ಮಾರ್ಗವಾಗಿ ದುಬಾರೆಯ ಆನೆ ಶಿಬಿರಕ್ಕೆ ತರಲಾಯಿತು. ವೈದ್ಯಕೀಯ ಪರೀಕ್ಷೆಗಳಾದ ನಂತರ ಸ್ಕ್ರಾಲ್ನೊಳಕ್ಕೆ ಹಾಕಿ ಬಂಧಿಸಲಾಗಿದ್ದು, ದುಬಾರೆಯಲ್ಲಿ ಅದನ್ನು ಪಳಗಿಸುವ ಕಾರ್ಯ ನಡೆಯಲಿದೆ. ಇದು ಮೊದಲ ಆನೆಯನ್ನು ಸೆರೆಹಿಡಿದ ಕತೆಯಾದರೆ, ಮತ್ತೊಂದು ಪುಂಡಾನೆಯನ್ನು ಸೋಮವಾರ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದೊಳಗೆ ಸೆರೆ ಹಿಡಿಯಲಾಗಿದೆ.[ಸುಂದರ ಮೈಸೂರು ದಸರಾ ಮಾವುತರ ಕರಾಳ ಬದುಕಾ ಕಂಡೀರಾ?]
ಸರ್ಕಾರದಿಂದ 4 ಕಾಡಾನೆಗಳನ್ನು ಹಿಡಿಯಲು ಅನುಮತಿ ನೀಡಲಾಗಿದ್ದು, ಮೂರು ದಿನಗಳಲ್ಲಿ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದ್ದು, ಇನ್ನು ಎರಡು ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದು ವರೆಸಿದ್ದಾರೆ.