ಕರಗಪೂಜೆಯೊಂದಿಗೆ ಇಂದಿನಿಂದ ಮಡಿಕೇರಿ ದಸರಾ ಆರಂಭ
ಮಡಿಕೇರಿ, ಸೆಪ್ಟೆಂಬರ್ 21 : ಕೊಡಗಿನ ಬೆಡಗಿನ ಮಡಿಕೇರಿ ದಸರಾಗೆ ಇಂದು ಸೆ.21 (ಗುರುವಾರ) ಸಂಜೆ ನಗರದ ಸೋಮವಾರಪೇಟೆ ರಸ್ತೆಯಲ್ಲಿರುವ ಪಂಪಿನ ಕೆರೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಲಿದೆ.
ನಾಲ್ಕು ಶಕ್ತಿದೇವತೆಗಳಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯಗಳ ಕರಗಗಳು ಸಾಂಪ್ರದಾಯಿಕ ಪೂಜೆಯೊಂದಿಗೆ ಹೊರಡಲಿದ್ದು, ಶುಕ್ರವಾರದಿಂದ ನಗರ ಪ್ರದಕ್ಷಿಣೆ ನಡೆಸಲಿವೆ.
ನವರಾತ್ರಿಯ ಮೊದಲ ದಿನ (ಮಹಾಲಯ ಅಮವಾಸ್ಯೆಯ ಮಾರನೆಯ ದಿನ) ಸಂಜೆ ಸುಮೂಹೂರ್ತದಲ್ಲಿ ನಗರದ ಸೋಮವಾರಪೇಟೆ ರಸ್ತೆಯಲ್ಲಿರುವ ಪಂಪಿನಕೆರೆಯಲ್ಲಿ ನೆರೆದ ಗಣ್ಯರ ಸಮ್ಮುಖದಲ್ಲಿ ಕರಗಪೂಜೆ ನಡೆಯುತ್ತದೆ. ಆ ನಂತರ ಕರಗ ವಿದ್ಯುಕ್ತವಾಗಿ ಹೊರಡುವುದರೊಂದಿಗೆ ಮಡಿಕೇರಿ ದಸರಾಕ್ಕೆ ಚಾಲನೆಯೂ ಸಿಗುತ್ತದೆ.
ಆ ನಂತರ ಒಂಬತ್ತು ದಿನಗಳ ಕಾಲ ಕರಗವು ನಗರ ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭ ನಗರದ ಎಲ್ಲಾ ಜನರು ಜಾತಿ ಬೇಧ ಮರೆತು ಕರಗ ಬರುವ ದಾರಿಯನ್ನು ಗುಡಿಸಿ, ಸಾರಿಸಿ ರಂಗೋಲಿಯಿಟ್ಟು ಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳುತ್ತಾರೆ.
ದಸರಾ ದಿನದಂದು ನಡೆಯುವ ಮೆರವಣಿಗೆಯಲ್ಲಿಯೂ ಕರಗಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ತಮ್ಮದೇ ಆದ ಧಾರ್ಮಿಕ ವಿಧಿ ವಿಧಾನಗಳೂ ರೂಢಿಯಲ್ಲಿದೆ.