ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಮಡಿಕೇರಿ, ಜುಲೈ 02: ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಡ್ಜರ್ ಲ್ಯಾಂಡ್ ಹೀಗೆ ವಿವಿಧ ಅನ್ವರ್ಥನಾಮಗಳಿಂದ ಕರೆಯಲ್ಪಡುವ ಕೊಡಗು ಕಳೆದೊಂದು ದಶಕದಿಂದ ಪ್ರವಾಸಿಗರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿದೆ.
ಸಾಮಾನ್ಯವಾಗಿ ವೀಕೆಂಡ್ ಬಂತೆಂದರೆ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ರಾಜ್ಯಗಳ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದು, ಹೋಂಸ್ಟೇ, ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದು, ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹೋಗುತ್ತಾರೆ. ಇನ್ನು ಇಲ್ಲಿಗೆ ಬರುವ ಪ್ರವಾಸಿಗರ ಪೈಕಿ ವಿದೇಶಿಗರು ಸೇರಿದ್ದು, ಪ್ರಸಕ್ತ ವರ್ಷ ಸುಮಾರು 10ಸಾವಿರ ವಿದೇಶಿ ಪ್ರವಾಸಿಗರು ಭೇಟಿ ನೀಡಿರುವುದು ವಿಶೇಷವಾಗಿದೆ.
ಪ್ರಸಕ್ತ ವರ್ಷದಲ್ಲಿ ಜಿಲ್ಲೆಗೆ ಸುಮಾರು 18ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ನಾಗರಹೊಳೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ, ಕಾವೇರಿ ನಿಗರ್ಸಧಾಮಕ್ಕೆ ಐದು ಲಕ್ಷದ ಮೂವತ್ತೆರಡು ಸಾವಿರ, ಇರ್ಪು ಜಲಪಾತಕ್ಕೆ ಎರಡು ಲಕ್ಷ, ಮಡಿಕೇರಿಯ ರಾಜಾಸೀಟಿಗೆ ಆರು ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಭಾಗಮಂಡಲ ಹಾಗೂ ತಲಕಾವೇರಿಗೆ ಸುಮಾರು ಮೂರು ಲಕ್ಷ ಇಪ್ಪತ್ತು ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದರೂ ಮೊದಲೆಲ್ಲ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಸಂಪರ್ಕ ಮತ್ತು ವಾಸ್ತವ್ಯದ ಸಮಸ್ಯೆಯಿಂದಾಗಿ ಪ್ರವಾಸಿಗರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವೂ ಬದಲಾವಣೆಯಾಗಿದೆ. ಕೊಡಗು ಅಭಿವೃದ್ಧಿಯಾಗಿದ್ದು, ಕಾಫಿ ತೋಟಗಳಲ್ಲಿ ಹೋಂಸ್ಟೇಗಳು, ರೆಸಾರ್ಟ್ಗಳು ನಿರ್ಮಾಣವಾಗಿವೆ. ರಸ್ತೆ ನಿರ್ಮಾಣವೂ ಆಗಿದೆ. ದೂರದಿಂದ ಬರುವ ಪ್ರವಾಸಿಗರು ನೆಮ್ಮದಿಯಾಗಿ ಒಂದಷ್ಟು ಸಮಯಗಳನ್ನು ಕಳೆದು ಹೋಗಬಹುದಾಗಿದೆ. ಐಟಿ, ಬಿಟಿಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಒತ್ತಡದ ಬದುಕಿನಿಂದ ಒಂದಷ್ಟು ಮುಕ್ತಿ ಹೊಂದಲು ವೀಕೆಂಡ್ನಲ್ಲಿ ಇಲ್ಲಿಗೆ ಬರುತ್ತಾರೆ. ಜೊತೆಗೆ ಪ್ರವಾಸಿ ತಾಣಗಳನ್ನು ನೋಡಲೆಂದು ಸಂಸಾರ ಸಮೇತವಾಗಿಯೂ ಪ್ರವಾಸಿಗರು ಬರುತ್ತಿದ್ದಾರೆ.
ಪ್ರವಾಸಿಗಳ ಸಂಖ್ಯೆ ಹೆಚ್ಚಳದಿಂದ ಸ್ಥಳೀಯ ಜನಕ್ಕೆ ಕಿರಿಕಿರಿಯಾಗುತ್ತಿರುವುದೂ ಇದೆ. ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುತ್ತದೆ. ಮೊದಲೆಲ್ಲ ಮಳೆಗಾಲದಲ್ಲಿ ಯಾರೂ ಇತ್ತ ಬರುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ ವರ್ಷದ ಎಲ್ಲ ದಿನಗಳಲ್ಲೂ ಪ್ರವಾಸಿಗರು ಬರುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದ್ದೇ ಆದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದಂತು ಖಚಿತ.












Click it and Unblock the Notifications