ಕೊಡಗಿನ ರಾಜಾ ಸೀಟ್ ಅಭಿವೃದ್ಧಿ; ಓಡಲಿದೆ ಪುಟಾಣಿ ರೈಲು
ಮಡಿಕೇರಿ, ನವೆಂಬರ್ 27; ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ರಾಜಾ ಸೀಟ್ ಸಹ ಒಂದು. ಸಾವಿರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ರಾಜಸೀಟ್ ಉದ್ಯಾನವನವನ್ನು 'ಗ್ರೇಟರ್ ರಾಜಸೀಟ್' ಆಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಮುಂದಾಗಿದೆ.
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಅಧ್ಯಕ್ಷತೆಯಲ್ಲಿ ಶುಕ್ರವಾರ ಈ ಕುರಿತು ಅಧಿಕಾರಿಗಳ ಸಭೆ ನಡೆದಿದೆ. ರಾಜಸೀಟ್ ಉದ್ಯಾನವನವನ್ನು 'ಗ್ರೇಟರ್ ರಾಜಸೀಟ್' ಆಗಿ ಅಭಿವೃದ್ಧಿಗೊಳಿಸುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ರಾಜಾಸೀಟ್ ಉದ್ಯಾನವನ ವ್ಯಾಪ್ತಿಗೆ ರೈಲ್ವೆ ಟ್ರ್ಯಾಕ್ ಸೇರ್ಪಡೆಯಾಗಿದೆ. ಈ ಹಿನ್ನೆಲೆ ರಾಜಸೀಟ್ ಉದ್ಯಾನವನ್ನು 'ಗ್ರೇಟರ್ ರಾಜಸೀಟ್' ಆಗಿ ಅಭಿವೃದ್ಧಿಗೊಳಿಸಲು ನೀಲನಕ್ಷೆ ತಯಾರಿಸುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಪುಟಾಣಿ ರೈಲು ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಮ್ಯೂಸಿಕಲ್ ಫೌಂಟೈನ್ ಕೂಡಲೇ ಸರಿಪಡಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
'ಕೂರ್ಗ್ ವಿಲೇಜ್' ಈಗಾಗಲೇ ಉದ್ಘಾಟನೆಯಾಗಿದೆ, ತಕ್ಷಣವೇ ಅದು ಕಾರ್ಯಾರಂಭವಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು. ರಾಜರ ಗದ್ದುಗೆ, ನೆಹರು ಮಂಟಪ ನಿರ್ವಹಣೆ, ರಾಜರ ಗದ್ದುಗೆ ಗೇಟಿನ ಬಳಿ ಹೈಮಾಸ್ಕ್ ಲೈಟ್ ಅಳವಡಿಸುವುದು ಸೇರಿದಂತೆ ವಿವಿಧ ವಿಚಾರದ ಬಗ್ಗೆ ಚರ್ಚೆ ನಡೆಯಿತು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಸಭೆಯಲ್ಲಿ ರಾಜಸೀಟ್ ಅಭಿವೃದ್ಧಿ ಸಂಬಂಧ ತೋಟಗಾರಿಕೆ ಇಲಾಖೆಯಿಂದ ಕೈಗೊಂಡಿರುವ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಾಫಿ ಮೇಳ ಆಯೋಜನೆ; ಡಿಸೆಂಬರ್ 25ರ ಕ್ರಿಸ್ಮಸ್ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕಾಫಿ ಮಂಡಳಿ ಸಹಕಾರದಲ್ಲಿ 'ಕಾಫಿ ಮೇಳ' ಆಯೋಜಿಸುವುದು, ರಜೆ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ಚರ್ಚಿಸಲಾಯಿತು.

ಕೂರ್ಗ್ ವಿಲೇಜ್; ರಾಜಾಸೀಟ್ ಸಮೀಪದ ಕುಂದುರುಮೊಟ್ಟೆ ದೇವಾಲಯದ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಪ್ರದೇಶದಲ್ಲಿ 'ಕೂರ್ಗ್ ವಿಲೇಜ್' ಎಂಬ ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಿ ಉದ್ಘಾಟಿಸಲಾಗಿದೆ.
ಸುಮಾರು 98 ಲಕ್ಷ ರೂ. ವೆಚ್ಚದಲ್ಲಿ ಈ ಪರಿಕಲ್ಪನೆ ಜಾರಿಗೊಳಿಸಲಾಗಿದೆ. ಸುಂದರ ವಾತಾವರಣದಲ್ಲಿ ಮೂರು ಕಡೆಗಳಲ್ಲಿ ವಿವಿಧ ಇಲಾಖೆಗಳ 15 ಶಾಪಿಂಗ್ ಸ್ಟಾಲ್ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮೂರು ಪ್ರತ್ಯೇಕ ಕಟ್ಟಡದಲ್ಲಿ ಮಳಿಗೆಗಳು ಸಿದ್ಧಗೊಂಡಿದೆ. ಒಂದೇ ಸೂರಿನಲ್ಲಿ ವಿವಿಧ ಉತ್ಪನ್ನಗಳು ಜನರಿಗೆ ಸಿಗುವಂತೆ ವ್ಯವಸ್ಥೆ ಇದೆ.
ತೋಟಗಾರಿಕಾ ಇಲಾಖೆಯ ಹಾಪ್ ಕಾಮ್ಸ್, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಟಾಲ್ಗಳು ಇಲ್ಲಿವೆ. ಮಸಾಲ ಪದಾರ್ಥ ಹಾಗೂ ಕೊಡಗಿನ ಜೇನು, ವೈನ್, ಕರಿಮೆಣಸು, ಏಲಕ್ಕಿ, ಕಾಫಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡುವ ಯೋಜನೆ ಇದಾಗಿದೆ.
ಕೂರ್ಗ್ ವಿಲೇಜ್ ಯೋಜನೆಯಿಂದ ಪರಿಸರ ನಾಶವಾಗಲಿದೆ ಎಂಬ ಆರೋಪವೂ ಇತ್ತು. ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಯೋಜನೆಗೆ ಹಸಿರು ನಿಶಾನೆ ತೋರಿಸಿತ್ತು. ಈಗ ಯೋಜನೆ ಜಾರಿಗೊಂಡಿದೆ. ತಕ್ಷಣವೇ ಅದು ಕಾರ್ಯಾರಂಭವಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟಿದ್ಧಾರೆ.
ಪ್ರವಾಸೋದ್ಯಮ ಚೇತರಿಕೆ; ಕೊಡಗು ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿವೆ. ಕೋವಿಡ್ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿತ್ತು. ಈಗ ಜಿಲ್ಲೆಯ ಪ್ರವಾಸೋದ್ಯಮಚೇತರಿಕೆ ಕಾಣುತ್ತಿದೆ.
ಈ ವರ್ಷ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ವರ್ಷಂತ್ಯದಲ್ಲಿ ಇನ್ನು ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ಕಾರಣದಿಂದಾಗಿಯೇ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಸಹ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.
ಸ್ಮಾರಕ ಅಭಿವೃದ್ಧಿಗೆ ಕ್ರಮ; ಕೊಡಗು ಜಿಲ್ಲೆಯ ಹೊಸ ತಾಣವೊಂದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವೀರ ಸೇನಾನಿ ಜನರಲ್ ಕೆ. ಎಸ್. ತಿಮ್ಮಯ್ಯ ಅವರ ಸ್ಮಾರಕ ಭವನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ.
ಶುಕ್ರವಾರ ಜನರಲ್ ತಿಮ್ಮಯ್ಯ ಮೊಮ್ಮಗ ಕೆ. ಸಿ. ಬೆಳ್ಳಿಯಪ್ಪ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ, ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, "ಭಾರತೀಯ ಸೇನಾ ಕ್ಷೇತ್ರದಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆ ದಿಸೆಯಲ್ಲಿ ಸೇನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯ ಮಹತ್ತರ ಸಾಧನೆ ಒಳಗೊಂಡ ಛಾಯಾಚಿತ್ರ ಸಹಿತ ಮಾಹಿತಿಯನ್ನು ಮತ್ತಷ್ಟು ಅಳವಡಿಸಬೇಕಿದೆ" ಎಂದು ಹೇಳಿದರು.












Click it and Unblock the Notifications