ಕೊಡಗು: ಪೊಲೀಸ್ ಭದ್ರತೆಯಲ್ಲಿ ಟಿಪ್ಪು ಜಯಂತಿ
ಕೊಡಗು ಜಿಲ್ಲೆಯ ಗಡಿ ಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆ, ಕರಿಕೆ ಹೀಗೆ ಒಟ್ಟು 10 ಕಡೆ ಚೆಕ್ಪೊಸ್ಟ್ಗಳನ್ನು ತೆರೆಯಲಾಗಿದೆ
ಮಡಿಕೇರಿ, ನವೆಂಬರ್ 2: ಟಿಪ್ಪು ಜಯಂತಿಗೆ ಕೊಡಗಿನಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸರಕಾರದ ಆದೇಶದಂತೆ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಕಳೆದ ವರ್ಷ ನಡೆದ ಘಟನೆಯನ್ನು ಅವಲೋಕಿಸಿ ಈ ಬಾರಿ ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿ ಜಯಂತಿ ಆಚರಣೆಗೆ ಸಿದ್ಧತೆ ಸಾಗಿದೆ.
ಈ ಸಂಬಂಧ ಜಿಲ್ಲಾಡಳಿತ ಸಭೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಆದೇಶ ನೀಡಿದ್ದಾರೆ.
ಹೋಂ ಸ್ಟೇಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಬೇಕು. ಜೊತೆಗೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.[ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವಿರೋಧದ ಅಲೆ]
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪೋಸ್ಟರ್, ಬ್ಯಾನರ್ ಅಳವಡಿಸುವಂತಿಲ್ಲ, ಹಾಗೆಯೇ ಸಾರ್ವಜನಿಕವಾಗಿ ಬಳಸುವ ಅಥವಾ ಬಳಕೆಯಾಗುವ ವಾಹನಗಳಲ್ಲಿ (ಆಟೋ, ಜೀಪು ಇತರ) ಪೋಸ್ಟರ್, ಬ್ಯಾನರ್, ಧ್ವಜ ಅಳವಡಿಸುವಂತಿಲ್ಲ, ಒಂದು ವೇಳೆ ಅಳವಡಿಸುವಂತಿದ್ದರೆ ಪೊಲೀಸ್ ಇಲಾಖೆಂ ಅನುಮತಿ ಪಡೆಯುವುದು ಕಡ್ಡಾಯ ಎಂದು ಸೂಚಿಸಿದ್ದಾರೆ.
ವಾಹನ, ಹೋಂಸ್ಟೇ, ಲಾಡ್ಜ್ ತಪಾಸಣೆ ಮಾಡಬೇಕು. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹೊರತುಪಡಿಸಿದರೆ ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜಿಸಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದರು.[ಟಿಪ್ಪು ಜಯಂತಿ ಆಚರಿಸುವ ಉದ್ದೇಶವೇನು: ಹೈಕೋರ್ಟ್ ಪ್ರಶ್ನೆ]
ಬಂದೋಬಸ್ತ್ ಬಗ್ಗೆ ತಿಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿಲ್ಲೆಯ ಗಡಿ ಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆ, ಕರಿಕೆ ಹೀಗೆ ಒಟ್ಟು 10 ಕಡೆ ಚೆಕ್ಪೊಸ್ಟ್ಗಳನ್ನು ತೆರೆಯಲಾಗಿದ್ದು, ಒಂದು ಚೆಕ್ ಪೋಸ್ಟ್ನಲ್ಲಿ ತಲಾ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಚೆಕ್ ಪೋಸ್ಟ್ಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ನಾಕಾಬಂದಿ ಮಾದರಿಯಲ್ಲಿ ವಾಹನಗಳು, ಹೋಂಸ್ಟೇಗಳು ಹಾಗೂ ಲಾಡ್ಜ್ಗಳಲ್ಲಿ ತಪಾಸಣೆ ಮಾಡಿ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಸಾರ್ವಜನಿಕರು ಕಿರಿಕಿರಿ ಎಂದು ಭಾವಿಸದೆ ತಪಾಸಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.