ನರ ಭಕ್ಷಕ ನಾಪತ್ತೆ: ಕೊಡಗು ಡಿಸಿ, ಎಸ್ಪಿಗೆ ರೈತ ಸಂಘದಿಂದ ದಿಗ್ಭಂಧನ
ಮಡಿಕೇರಿ, ಮಾರ್ಚ್ 18: ನರ ಭಕ್ಷಕ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಸುತ್ತಿರುವ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ, ರೈತರನ್ನು ಭೇಟಿ ಮಾಡಲು ಬಂದ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಪೋಲೀಸ್ ಅಧಿಕಾರಿ ಕ್ಷಮಾ ಮಿಶ್ರ ಅವರು ರೈತರಿಂದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು.
ಕಳೆದ ವಾರ ಮಡಿಕೇರಿಯಲ್ಲಿ ಹುಲಿಯನ್ನು ಗುಂಡಿಕ್ಕಿ ಕೊಂದು ರೈತರನ್ನು ಪಾರು ಮಾಡಬೇಕೆಂದು ಒತ್ತಾಯಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಅಲ್ಲದೆ ರೈತ ಸಂಘವು ಕಳೆದ 12 ದಿನಗಳಿಂದಲೂ ಅಹೋರಾತ್ರಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲಿಲ್ಲವೆಂದು ಆಕ್ರೋಶ ವ್ಯಕ್ತವಾಗಿತ್ತು. ಆಗ ಜಿಲ್ಲಾಧಿಕಾರಿ ಅವರು ಭರವಸೆ ನೀಡಿದ್ದಂತೆ ಇಂದು ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು.
ರೈತರನ್ನು ಭೇಟಿ ಮಾಡಿದ ನಂತರ ತಿತಿಮತಿಗೆ ತೆರಲು ಜಿಲ್ಲಾಧಿಕಾರಿ ಮುಂದಾದರು. ಎಸ್ಪಿಯೊಂದಿಗೆ ತಮ್ಮ ಕಾರಿಗೆ ತೆರಳಿದ್ದ ವೇಳೆ ಬೆಳ್ಳೂರು ಜಂಕ್ಷನ್ ನಲ್ಲಿ ಪ್ರತಿಭಟನಾರರು ಕಾರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ಹುಲಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮಾತುಗಳು ತೃಪ್ತಿದಾಯಕವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅರ್ಧ ಗಂಟೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರಸ್ತೆ ಮಧ್ಯದಲ್ಲಿದ್ದ ಕಾರಿನಲ್ಲಿ ಇರುವಂತಾಯಿತು.
ಪ್ರಸ್ತುತ ನಡೆಯುತ್ತಿರುವ ಹುಲಿ ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಹಾಲಿ ತಂಡವನ್ನು ಬದಲಾಯಿಸಿ, ಹೊಸ ತಂಡ ರಚಿಸಬೇಕೆಂದು ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಒತ್ತಾಯಿಸಿದರು.

ಹುಲಿ ಕಾರ್ಯಾಚರಣೆ ಮತ್ತಷ್ಟು ಪರಿಣಾಮಕಾರಿ ನಡೆಯುವಂತೆ ಮಾಡಲು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು, ಕಾರ್ಯಾಚರಣೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೊಎಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಮನವಿ ಮಾಡಿ ತೆರಳಿದರು.












Click it and Unblock the Notifications