ಸತತ ಮಳೆಗೆ ನಲುಗಿದ ಕೊಡಗಿನಲ್ಲಿ ಭೂ ಕುಸಿತಕ್ಕೆ ಮೂವರು ಸಾವು
ಮಡಿಕೇರಿ, ಆಗಸ್ಟ್ 16: ಕೊಡಗಿನಲ್ಲಿ ಸುರಿಯುತ್ತಿದ್ದ ಮಳೆಗೆ ಇದುವರೆಗೆ ಕೇವಲ ಆಸ್ತಿಪಾಸ್ತಿ ಮಾತ್ರ ನಷ್ಟವಾಗಿದ್ದರೆ, ಇದೀಗ ಭೂಕುಸಿತ ಸಂಭವಿಸಿದ ಕಾರಣ ಮಣ್ಣಿನಡಿಯಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ.
ಮಡಿಕೇರಿ ಸಮೀಪದ ತಾಳತ್ಮನೆಯಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿದ್ದರು, ಅದರ ಬೆನ್ನಲ್ಲೇ ಸಮೀಪದ ಕಾಟಕೇರಿಯಲ್ಲಿ ಗುಡ್ಡಕುಸಿದ ಕಾರಣ ಮಣ್ಣಿನಡಿಗೆ ಒಂದೇ ಕುಟುಂಬದ ನಾಲ್ವರು ಸಿಲುಕಿದ್ದು ತಕ್ಷಣ ಕಾರ್ಯಾಚರಣೆ ನಡೆಸಿ ಮಣ್ಣಿನಿಂದ ಹೊರತೆಗೆಯಲಾಯಿತಾದರೂ ಅಷ್ಟರಲ್ಲೇ ಮೂವರು ಮೃತಪಟ್ಟಿದ್ದರು.
ಮಲೆನಾಡಲ್ಲಿ ನಿಲ್ಲದ ಮಳೆ ಅಬ್ಬರ, ನಾಲ್ಕೈದು ಕಡೆ ಬಿರುಕುಬಿಟ್ಟ ರಸ್ತೆ
ಒಬ್ಬನನ್ನು ರಕ್ಷಿಸಲಾಗಿದ್ದು, ಈತ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ಯಶವಂತ್, ವೆಂಕಟರಮಣ ಹಾಗೂ ಪವನ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.
ಕಳೆದ ಹಲವು ದಶಕಗಳ ನಂತರ ಕುಂಭದ್ರೋಣ ಮಳೆಯು ಕೊಡಗನ್ನು ಇನ್ನಿಲ್ಲದಂತೆ ಕಾಡಿದೆ. ಕಾವೇರಿ, ಲಕ್ಷ್ಮಣತೀರ್ಥ, ಹಾರಂಗಿ, ಹಟ್ಟಿಹೊಳೆ, ಬರಾಪೊಳೆ ಹೀಗೆ ಇಲ್ಲಿರುವ ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು ತೋಟ, ಗದ್ದೆ, ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಗೆ ಭತ್ತ, ಕಾಫಿ, ಕರಿಮೆಣವು ಹೀಗೆ ಹಲವು ಬೆಳೆಗಳು ಹಾನಿಯಾಗಿದೆ. ಹಾಗೆಯೇ ವಾಸದ ಮನೆಗಳು ಹಾನಿಯಾಗಿದ್ದು, ಸೂಕ್ತ ಪರಿಹಾರ ವಿತರಿಸಲಾಗುವುದು. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸುವ ಕಾರ್ಯ ಕೈಗೊಳ್ಳಲಾಗುವು ಎಂದು ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ಮಳೆ ಪೀಡಿತರಿಗೆ ನೆರವು ನೀಡುವಂತೆ ಸಿಎಂ ಮೇಲೆ ಕಾಂಗ್ರೆಸ್ ಒತ್ತಡ
ಬೆಳೆಗಳಿಗೆ ಪರಿಹಾರ ವಿತರಣೆ ಮಾಡುವುದರ ಜೊತೆಗೆ ಮಳೆ ಹಾನಿ ಸಂಬಂಧ ರಸ್ತೆ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು. ಸದ್ಯ ಪ.ಪಂ.ಗಳ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮಳೆ ಹಾನಿ ಹೊರತುಪಡಿಸಿ ಬೇರೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿದ್ಯುತ್, ರಸ್ತೆ ಸೇರಿದಂತೆ ನೂರಾರು ಕೋಟಿಯ ಸರ್ಕಾರಿ ಸ್ವತ್ತುಗಳಿಗೆ ಹಾನಿಯಾಗಿದ್ದರೆ, ಖಾಸಗಿಯಾಗಿಯೂ ಸಾವಿರಾರು ಕೋಟಿ ನಷ್ಟ ಸಂಭವಿಸಿದೆ. ಮಳೆಯಿಂದಾಗಿ, ಕಾಫಿ, ಕರಿಮೆಣಸು, ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿವೆ. ಮನೆಗಳಿಗೂ ಹಾನಿಯಾಗಿದೆ.
ಜಿಲ್ಲೆಯಲ್ಲಿ ಆಗಿರುವ ನಷ್ಟದ ಕುರಿತು ಇನ್ನಷ್ಟೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ. ಈಗಲೂ ಪ್ರವಾಹ ಮುಂದುವರೆದಿರುವ ಕಾರಣದಿಂದಾಗಿ ಮುಂದಿನ ಪ್ರತಿಕ್ಷಣಗಳನ್ನು ಜನ ಭಯದಲ್ಲೇ ಕಳೆಯುವುದು ಅನಿವಾರ್ಯವಾಗಿದೆ.
ಮಳೆ ತಂದ ಸಾಲು ಸಾಲು ದುರಂತ
ಇನ್ನು ಸೇತುವೆಗಳ ಮೇಲೆ ನೀರು ಹರಿಯುವ ಮೂಲಕ ಸಂಚಾರ ಬಂದ್ ಆಗಿದ್ದರೆ, ಗುಡ್ಡ ಕುಸಿತ, ರಸ್ತೆ ಕುಸಿತ, ಧರೆಗುಳಿದ ಮರಗಳಿಂದಾಗಿಯೂ ರಸ್ತೆಗಳು ಮುಚ್ಚಲ್ಪಟ್ಟಿದ್ದು ಒಂದು ಕಡೆಯಿಂದ ಮತ್ತೊಂದು ಕಡೆಗಳಿಗೆ ತೆರಳಲಾಗದೆ, ಇತ್ತ ಕೆಲವೆಡೆ ಮನೆಗೆ ನೀರು ನುಗ್ಗಿದ್ದರಿಂದ ಒಳಗೆಯೂ ನಿಲ್ಲಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾಕಪ್ಪಾ ಮಳೆ ಎಂದು ದೇವರಲ್ಲಿ ಪ್ರಾರ್ಥಿಸುವಂತಾಗಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಸುಮಾರು 40 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿರುವುದರಿಂದಾಗಿ ತಗ್ಗುಪ್ರದೇಶದಲ್ಲಿರುವ ಪ್ರದೇಶ ಜಲಾವೃತವಾಗಿದ್ದು, ಕುಶಾಲನಗರ-ಸೋಮವಾರಪೇಟೆ, ಕುಶಾಲನಗರ- ಹಾಸನ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಮನೆಯ ಮೇಲೆ ಉರುಳಿ ಬಿದ್ದ ಕಲ್ಲುಬಂಡೆ
ಮೂರ್ನಾಡು ಸಮೀಪದ ಹೊದ್ದೂರು ಗ್ರಾಮದಲ್ಲಿ ಬೃಹತ್ ಬಂಡೆಕಲ್ಲು ಉರುಳಿ ಬಿದ್ದಿದೆ. ಇದರಿಂದ ಬಿ.ಎಸ್. ಶಿವಪ್ಪ ಎಂಬುವರ ಮನೆಗೆ ಹಾನಿಯಾಗಿದ್ದು, ಅದೃಷ್ಟ ವಶಾತ್ ಪ್ರಾಣ ಹಾನಿ ತಪ್ಪಿದೆ. ಸುಮಾರು ಇನ್ನೂರು ಅಡಿ ಎತ್ತರದಿಂದ ಗುಡ್ಡ ಕುಸಿದ ವೇಳೆ ಬಂಡೆಕಲ್ಲು ಉರುಳಿ ಬಂದಿದ್ದು, ಮನೆಯ ಅಡುಗೆ ಕೋಣೆ, ಶೌಚಾಲಯ, ಕೊಟ್ಟಿಗೆ ಹಾಗೂ ಕೊಠಡಿಗಳು ಜಖಂಗೊಂಡು, ಮನೆಯ ಹಂಚು ಹಾಗೂ ಸಿಮೆಂಟ್ ಶೀಟ್ಗಳಿಗೆ ಹಾನಿಯಾಗಿದೆ. ಇದರಿಂದ ಅಂದಾಜು ಐದು ಲಕ್ಷ ರೂ.ನಷ್ಟು ನಷ್ಟವಾಗಿದೆ ಎನ್ನಲಾಗಿದೆ.
ಈ ವ್ಯಾಪ್ತಿಯಲ್ಲಿ ಬಲಮುರಿ ಎಂಬಲ್ಲಿ ಕಾವೇರಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ಭೇತ್ರಿ ವ್ಯಾಪ್ತಿಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಗದ್ದೆಗಳು ಜಲಾವೃತಗೊಂಡಿವೆ.
ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆ ಮತ್ತೆ ಮತ್ತೆ ಕುಸಿಯುತ್ತಿದ್ದು, ಮಣ್ಣು ರಸ್ತೆಯನ್ನು ಆವರಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಬೊಲೇರೊ ಜೀಪ್ವೊಂದು ಬಲಬದಿಯ ಹೊಳೆಗೆ ಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ
ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು
ಹೆದ್ದಾರಿಯ ಮದೆನಾಡು ಎಂಬಲ್ಲಿ ಮೂರು ದಿನಗಳ ಹಿಂದೆ ಕುಸಿದ ಗುಡ್ಡದ ಮಣ್ಣನ್ನು ತೆರವುಗೊಳಿಸುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದೇ ವ್ಯಾಪ್ತಿಯ ತಾಳತ್ತ್ಮನೆಯ ತೋಟವೊಂದರಲ್ಲಿ ಭಾರೀ ಗಾಳಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಲ್ಲನ ಅಮ್ಮವ್ವ ಎಂಬಾಕೆ ಮೃತಪಟ್ಟಿದ್ದಾರೆ. ಮಡಿಕೇರಿ ಸೋಮವಾರಪೇಟೆ ರಸ್ತೆಯ ಹಟ್ಟಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಮಧ್ಯಭಾಗದಲ್ಲಿ ಕುಸಿದು ಬಿದ್ದಿದೆ. ಇಲ್ಲಿಗೆ ಸಮೀಪವಿರುವ ತಂತಿಪಾಲದ ಹೊಳೆ ತುಂಬಿ ಹರಿದ ಪರಿಣಾಮ ಮಕ್ಕಂದೂರಿನ ಕೆಲವು ಮನೆಗಳು ಜಲಾವೃತಗೊಂಡಿವೆ.
ಕತ್ತಲೆಯಲ್ಲೇ ಜೀವನ ಕಳೆಯುತ್ತಿರುವ ಜನ
ಭಾರೀ ಮಳೆ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಅಲ್ಲಲ್ಲಿ ಧರೆಗುರುಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನ ಕತ್ತಲೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ. ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿದ ಕಾರಣದಿಂದ ಸಂಗಮಕ್ಷೇತ್ರ ಜಲಾವೃತವಾಗಿದೆ. ತಲಕಾವೇರಿಯ ಸ್ನಾನಕೊಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಪವಿತ್ರ ತೀರ್ಥ ಕುಂಡಿಕೆಯಿಂದಲೂ ನೀರು ಹೊರ ಹರಿಯುತ್ತಿದೆ. ಭಾಗಮಂಡಲದಲ್ಲಿ ಮುಂಜಾಗೃತಾ ಮುಕ್ಕೋಡ್ಲು, ಹಮ್ಮಿಯಾಲ ಸುತ್ತಮುತ್ತಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿಯಡಿಯಿಂದ ಜಲ ಉಕ್ಕುತ್ತಿದ್ದು, ಗುಡ್ಡತೋಟಗಳ ಮಣ್ಣು ಸಡಿಲಗೊಂಡು ಕುಸಿಯುತ್ತಿದೆ. ಮುಕ್ಕೋಡ್ಲುವಿನ ನಾಪಂಡ ರವಿ ಕಾಳಪ್ಪ ಎಂಬುವವರ ಒಂದೂವರೆ ಎಕರೆಯಷ್ಟು ಕಾಫಿ ತೋಟ ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಕುಸಿದು ಬಿದ್ದಿದೆ.
ಕೊಡಗು : ತುಂಬಿ ಹರಿವ ನದಿಯಲ್ಲೇ ಹೆಣಹೊತ್ತು ಸಾಗಿದರು
ಕುಸಿಯುತ್ತಿರುವ ರಸ್ತೆಗಳು
ಮಡಿಕೇರಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆದಕಲ್ ಬಳಿ ರಸ್ತೆ ಕುಸಿಯತೊಡಗಿದೆ.ಇದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಹಾರಂಗಿಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಕೂಡಿಗೆ ಗ್ರಾಮದ ಸೋಮಾಚಾರಿ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿದ್ದ 2000ಕ್ಕೂ ಹೆಚ್ಚು ಕೋಳಿಗಳು ಹಾಗೂ ಕೋಳಿ ಆಹಾರವೂ ನೀರು ಪಾಲಾಗಿದೆ.
ಕುಶಾಲನಗರ ಬಳಿಯ ಕೂಡಿಗೆ ಸರ್ಕಲ್ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ತ್ಯಾಜ್ಯ ನೀರುಗಳೆಲ್ಲವೂ ಮನೆಯೊಳಗೆ ನುಗ್ಗಿದ ಕಾರಣ ದುರ್ವಾಸನೆ ವ್ಯಾಪಿಸಿದೆ.
ಮನೆ, ಜಮೀನು ಜಲಾವೃತ
ಹೆಬ್ಬಾಲೆ, ತೊರೆನೂರು, ಶಿರಂಗಾಲ, ಹುದುಗೂರು ಭಾಗಗಳಲ್ಲಿನ ಶುಂಠಿ, ಕೆಸ, ಕೇನೆ, ಜೋಳ, ಭತ್ತದ ಜಮೀನುಗಳು ನೀರು ಪಾಲಾಗಿದ್ದು, ಕಷ್ಟಪಟ್ಟು ಕೃಷಿ ಮಾಡಿದ ರೈತನ ಕಣ್ಣಲ್ಲಿ ನೀರು ಹರಿಯುತ್ತಿದೆ. ಕುಶಾಲನಗರದ ಸಾಯಿ ಬಡಾವಣೆಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ಸಿದ್ದಾಪುರ ರಸ್ತೆಯ ಚೆಟ್ಟಳ್ಲೀಸಮೀಪ ಭಾರೀ ಗುಡ್ಡ ಕುಸಿತವಾಗಿದೆ. ನಿಶಾನೆಮೊಟ್ಟೆ ಎಂಬಲ್ಲಿ ಬೊಲೆರೋ ವಾಹನ ಬರೆ ಕುಸಿತದ ಮಣ್ಣಿನೊಂದಿಗೆ ಹಳ್ಳಕ್ಕೆ ಬಿದ್ದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಮಡಿಕೇರಿ ನಗರದ ಹಲವೆಡೆಗಳಲ್ಲಿ ಗುಡ್ಡಕುಸಿವಾಗಿದ್ದು ಮನೆಗಳಿಗೆ ಹಾನಿಯಾಗಿದೆ. ಅಪಾಯಕಾರಿ ಸ್ಥಳಗಳಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಮಳೆಹಾನಿ: ಕೊಡಗಿಗೆ 100 ಕೋಟಿ
ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆಯಾಗುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿಯವರ ಬಳಿಗೆ ನಿಯೋಗ ತೆರಳಿ ಮಳೆ ಹಾನಿ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ತಿಳಿಸಿದ್ದು ಮಳೆ ಹಾನಿ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಕೊಡಗು ಜಿಲ್ಲೆಗೆ ಆಗಮಿಸಿ 100 ಕೋಟಿ ರೂ ಬಿಡುಗಡೆಗೆ ಘೋಷಿಸಿದ್ದಾರೆ. ಅದರಂತೆ ಪ್ರಥಮ ಹಂತದಲ್ಲಿ 20 ಕೋಟಿ ರೂ ಬಿಡುಗಡೆಯಾಗಿದ್ದು, ಈ ಹಣ ಖರ್ಚು ಮಾಡಿದ ನಂತರ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.