ತೀರ್ಥೋದ್ಭವಕ್ಕೂ ಮುನ್ನ ಕೊಡಗಿನಲ್ಲಿ ಗದ್ದೆಗೆ ಬೊತ್ತು ನೆಡುವ ಆಚರಣೆ
ಕೊಡಗು, ಅಕ್ಟೋಬರ್ 17: ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ ತಿಂಗಳ ತುಲಾ ಸಂಕ್ರಮಣ(ಅ.17)ದಂದು ತೀರ್ಥೋದ್ಭವವಾಗುವುದು ಎಲ್ಲರಿಗೂ ತಿಳಿದ ವಿಚಾರವೇ. ಇದು ಕೊಡಗಿನವರ ಪಾಲಿಗೆ ಬರೀ ತೀರ್ಥೋದ್ಭವವಲ್ಲ ಜಾತ್ರೆಯೂ ಹೌದು. ಇಲ್ಲಿ ತಲಕಾವೇರಿಯಲ್ಲಿ ಉದ್ಭವವಾದ ತೀರ್ಥವನ್ನು ಮನೆಗಳಿಗೆ ಕೊಂಡೊಯ್ದು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.
ಇದರ ನಡುವೆ ಜಿಲ್ಲೆಯ ಕೆಲವೆಡೆ ಅದರಲ್ಲೂ ಮಡಿಕೇರಿ ತಾಲೂಕಿನಲ್ಲಿ ತೀರ್ಥೋದ್ಭವಕ್ಕೆ ಮೊದಲು ಕಾಡಿನಲ್ಲಿ ಸಿಗುವ ಬೊತ್ತು(ಬೆಚ್ಚು) ಎಂಬ ಸಸ್ಯದ ಕಾಂಡವನ್ನು ತಂದು ಅದಕ್ಕೆ ಕಾಡಿನಲ್ಲೇ ಸಿಗುವ ಬೆಚ್ಚು ಬಳ್ಳಿಯನ್ನು ಸಿಕ್ಕಿಸಿ ಗದ್ದೆಗೆ ನೆಡುತ್ತಾರೆ.
ಆ ನಂತರ ತೀರ್ಥ ಬಂದ ನಂತರ ಅ.18 ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಭತ್ತದ ಗದ್ದೆಯಲ್ಲಿ ದೋಸೆಯಿಟ್ಟು ದೀಪಹಚ್ಚಿ ಬೆಳೆಚೆನ್ನಾಗಿ ಬೆಳೆದು ಫಸಲು ಬರಲಿ ಎಂದು ಪ್ರಾರ್ಥಿಸುತ್ತಾ ಕಬ್ಬೆಚ್ಚು ಕಾಯಿಬಳ್ಳಿ ಕಾವೋ ಕಾವೋ ಎಂದು ಜೋರಾಗಿ ಕೂಗುವ ಸಂಪ್ರದಾಯವೂ ಇದೆ. ಇದನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದು ಮುಂದುವೆರೆಸಿಕೊಂಡು ಹೋಗಲಾಗುತ್ತಿದೆ.

ಕಾವೇರಿ ಮಾತೆಗೆ ದೋಸೆಯ ನೈವೇದ್ಯ
ಕಾಡಿನಲ್ಲಿ, ತೋಟದಲ್ಲಿ ಸಿಗುವ ಬೊತ್ತು ಎಂಬ ಮರದ ಕಾಂಡಗಳನ್ನು ಕಡಿದು ತಂದು ನಾಲ್ಕೈದು ಅಡಿಯಷ್ಟು ಉದ್ದಕ್ಕೆ ಕತ್ತರಿಸಿ ಅದರ ಮೇಲೆ ಮತ್ತು ಕೆಳಭಾಗದ ಸಿಪ್ಪೆಯನ್ನು ತೆಗೆದು ಬಳಿಕ ಕಾಡಿನಲ್ಲೆ ಹಬ್ಬಿ ಬೆಳೆಯುವ ಬೊತ್ತು ಬಳ್ಳಿಯನ್ನು ಸುರುಳಿಯಾಕಾರದಲ್ಲಿ ಸುತ್ತಿ ಕಾಂಡಕ್ಕೆ ಸಿಕ್ಕಿಸಿ ಗದ್ದೆ, ತೋಟ, ಮನೆಯ ಮುಂಭಾಗ, ದನದ ಕೊಟ್ಟಿಗೆ ಹೀಗೆ ಮುಖ್ಯ ಸ್ಥಳಗಳಲ್ಲಿ ನೆಟ್ಟು ಇದಕ್ಕೆ ಹೂವಿನ ಸಿಂಗಾರ ಮಾಡಲಾಗುತ್ತದೆ. ಇನ್ನು ಗದ್ದೆಗಳ ಪೈಕಿ ದೊಡ್ಡ ಗದ್ದೆಯಲ್ಲಿ ಅಕ್ಕಪಕ್ಕದಲ್ಲಿ ಬೊತ್ತನ್ನು ಚುಚ್ಚಿ ಅದಕ್ಕೆ ಬಳ್ಳಿಯನ್ನು ಸುತ್ತಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗಿನ ಜಾವ ದೋಸೆ, ತುಪ್ಪ, ಬೆಲ್ಲ, ಸಕ್ಕರೆ, ಬಾಳೆಹಣ್ಣು ಮೊದಲಾದವುಗಳನ್ನು ಇಟ್ಟು ದೀಪ ಹಚ್ಚಿ ಕಾವೇರಿ ಮಾತೆಯನ್ನು ಪ್ರಾರ್ಥಿಸಿ ಉತ್ತಮ ಬೆಳೆಯಾಗಲಿ ಎಂದು ಬೇಡಿಕೊಳ್ಳಲಾಗುತ್ತದೆ.

ಜಾಗ ಕೇಳಲು ಬರುವ ಪಾಂಡವರು
ಗದ್ದೆಗೆ ಬೊತ್ತು ನೆಡುವ ಸಂಪ್ರದಾಯದ ಬಗ್ಗೆ ಹಿರಿಯರು ಹಲವು ರೀತಿಯ ದಂತಕಥೆಗಳನ್ನು ಹೇಳುತ್ತಾರೆ. ಅದೇನೆಂದರೆ ದ್ವಾಪರಯುಗದಲ್ಲಿ ಪಾಂಡವರು ವನವಾಸಕ್ಕೆ ತೆರಳುವ ಮುನ್ನ ಜಾಗವನ್ನು ಕಾವೇರಮ್ಮನಿಗೆ ನೀಡಿ ಹೋಗಿದ್ದರೆಂದು, ಮರಳಿ ಬಂದಾಗ ಇಲ್ಲಿನ ಕೊಡವರು ಭತ್ತದ ನಾಟಿ ಮಾಡಿ ಬೊತ್ತು ನೆಟ್ಟಿದ್ದರಂತೆ. ಹೀಗಾಗಿ ಈ ಬಾರಿ ಬೊತ್ತು ನೆಟ್ಟಿದ್ದೇವೆ ಮುಂದಿನ ಬಾರಿ ಬನ್ನಿ ಎಂದು ಕಳುಹಿಸಿದ್ದರೆಂದೂ ಅದೇ ಪ್ರತಿಭಾರಿಯೂ ನಡೆಯುತ್ತಾ ಬಂತೆಂದೂ ಹೇಳುತ್ತಾರೆ ಮತ್ತೆ ಕೆಲವರು ವನವಾಸಕ್ಕೆ ತೆರಳುವ ಮುನ್ನ ಗುರುತಿಗಾಗಿ ಪಾಂಡವರು ಬೊತ್ತು ಚುಚ್ಚಿ ಹೋದರೆಂದೂ ಹೇಳುತ್ತಾರೆ. ಇನ್ನು ಹಬ್ಬದ ದಿನ ದೋಸೆ ಮತ್ತು ಸಿಹಿಕುಂಬಳ ಕಾಯಿ ಸಾರು ಮಾಡುವುದು. ಇಲ್ಲಿನ ವಿಶೇಷತೆಯಾಗಿದೆ.

ಎಲ್ಲೆಡೆ ನಿಸರ್ಗದ ಸುಂದರ ಲಾಸ್ಯ
ಹಾಗೆನೋಡಿದರೆ ಕೊಡಗಿನವರ ಕುಲದೇವಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಈ ಸಂದರ್ಭದಲ್ಲಿ ಹಸಿರಿನಿಂದ ಕಂಗೊಳಿಸುತ್ತಾ ನಿಸರ್ಗ ಸುಂದರತೆ ಎಲ್ಲೆಡೆ ಲಾಸ್ಯವಾಡುತ್ತಿರುತ್ತದೆ. ಮೊದಲೆಲ್ಲ ಮೇ ನಿಂದಲೇ ಮುಂಗಾರು ಆರಂಭವಾಗುತ್ತಿದ್ದರಿಂದ ಅಕ್ಟೋಬರ್ ವೇಳೆಗೆ ಮಳೆ ಬಿಡುವು ನೀಡುತ್ತಿತ್ತು. ಎಳೆ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಆಗೊಮ್ಮೆ ಈಗೊಮ್ಮೆ ಮಳೆ ಬರುವುದು ಬಿಟ್ಟರೆ, ಮಳೆ ಬಂದು ಆಗಿದ್ದ ಕೆಸರು, ತೇವಗಳೆಲ್ಲ ಬಿಸಿಲಿಗೆ ಒಣಗಿ ಏನೋ ಒಂದು ರೀತಿಯ ಸುಂದರ ವಾತಾವರಣ ನಿರ್ಮಾಣವಾಗಿ ಬಿಡುತ್ತಿತ್ತು. ಎಳೆ ಬಿಸಿಲ ನಡುವೆ ಸಣ್ಣಗೆ ನಡುಕ ಹುಟ್ಟಿಸುವ ಚಳಿ ಮುದ ನೀಡುತ್ತಿತ್ತು.

ಬದಲಾವಣೆಗೆ ಸೊರಗದ ಸಂಪ್ರದಾಯ
ಇತ್ತೀಚೆಗೆ ಹವಾಮಾನದ ವೈಪರೀತ್ಯದಿಂದಾಗಿ ವಾತಾವರಣದಲ್ಲೊಂದಷ್ಟು ಬದಲಾವಣೆಯಾಗಿದೆ. ಹೀಗಾಗಿ ಮೊದಲಿನಂತಿಲ್ಲ. ಈಗ ಕಣ್ಣು ಹಾಯಿಸಿದುದ್ದಕ್ಕೂ ಕಾಣುತ್ತಿದ್ದ ಭತ್ತದ ಗದ್ದೆಗಳ ಪೈಕಿ ಕೆಲವು ತೋಟಗಳಾಗಿ ಮಾರ್ಪಟ್ಟರೆ, ಮತ್ತೆ ಕೆಲವು ಕೃಷಿ ಮಾಡಲು ಸಾಧ್ಯವಾಗದೆ ಪಾಳು ಬಿದ್ದಿದೆ. ಅದೇನೆ ಬದಲಾವಣೆಯಾದರೂ ಇಲ್ಲಿನವರು ಹಿಂದಿನವರು ನಡೆಸಿಕೊಂಡು ಬಂದ ಸಂಸ್ಕøತಿ ಸಂಪ್ರದಾಯವನ್ನು ಮಾತ್ರ ಬಿಟ್ಟಿಲ್ಲ. ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.












Click it and Unblock the Notifications