ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ಯಶಸ್ವಿ
ಮಡಿಕೇರಿ, ನವೆಂಬರ್ 10 : ಟಿಪ್ಪು ಜಯಂತಿಯನ್ನು ವಿರೋಧಿಸಿ ಶುಕ್ರವಾರ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಕೊಡಗು ಬಂದ್ ಯಶಸ್ವಿಯಾಗಿದೆ. ಬೆಳಗ್ಗೆ ಸಾರಿಗೆ ಬಸ್ ಹೊರತು ಪಡಿಸಿ ಖಾಸಗಿ ಬಸ್, ಆಟೋ ಸೇರಿದಂತೆ ಖಾಸಗಿ ವಾಹನಗಳು ಬೆಳಗ್ಗೆಯಿಂದಲೂ ರಸ್ತೆಗಿಳಿಯಲಿಲ್ಲ.
ಕಳೆದೆರೆಡು ವರ್ಷ ಹೊತ್ತಿ ಉರಿದಿದ್ದ ಕೊಡುಗು ಜಿಲ್ಲೆ ಈ ಬಾರಿಯ ಟಿಪ್ಪು ಜಯಂತಿ ದಿನದಂದು ಪೊಲೀಸರು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಿಲ್ಲ. ಮಡಿಕೇರಿ ಮತ್ತು ಚೆಟ್ಟಳ್ಳಿ ರಸ್ತೆಯ ಕಡಗದಾಳದ ಬಳಿ ಮರಗಳನ್ನು ಕಡಿದು ನೆಲಕ್ಕುರುಳಿಸಿ ವಾಹನ ಸಂಚಾರಕ್ಕೆ ಅಡಚಣೆ ಮಾಡಿದ್ದರಾದರೂ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನೊಂದೆಡೆ ಮಡಿಕೇರಿಯಿಂದ ಕಾಲೂರಿಗೆ ತೆರಳಿಗೆ ಸಾರಿಗೆ ಬಸ್ ಗೆ ಕಿಡಿಗೇಡಿಗಳು ಕಲ್ಲು ಹೊಡೆದು ಗಾಜು ಪುಡಿಗೈದಿದ್ದಾರೆ.

ಮತ್ತೊಂದೆಡೆ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದ ಬಸ್ಸನ್ನೇ ಆಕ್ರೋಶಿತರು ಕುಳಿತು ಕೊಳ್ಳುವ ಸೀಟು ಮತ್ತು ಮೇಲ್ಭಾಗವನ್ನು ಹರಿದು ನಾಶಗೊಳಿಸಿದ್ದಾರೆ. ಬೆಳಿಗ್ಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಓಂಕಾರೇಶ್ವರ ದೇವಾಲಯದಲ್ಲಿ ಹುತಾತ್ಮ ಕುಟ್ಟಪ್ಪ ಅವರಿಗೆ ಶಾಂತಿ ಪೂಜಾ ಕಾರ್ಯಕ್ರಮ ನಡೆಸಿದರು. ಬಳಿಕ ಮೆರವಣಿಗೆಯಲ್ಲಿ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತೆರಳುತ್ತಿದ್ದವರನ್ನು ಪೊಲೀಸರು ತಡೆದು ಬಂಧಿಸಿದರು.

ಮಡಿಕೇರಿಯ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಬೇಕಾಗಿದ್ದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಮುಖ್ಯ ಅತಿಥಿಗಳಾಗಿದ್ದ ಎಂಎಲ್ ಸಿ ಸುನಿಲ್ ಸುಬ್ರಮಣಿ ಇನ್ನಿತರ ನಾಯಕರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುತ್ತುವರಿದ ಪೊಲೀಸರು ಶಾಸಕರು ಸೇರಿದಂತೆ ಬಿಜೆಪಿ ಮುಖಂಡರನ್ನು ಬಂಧಿಸಿ ಕರೆದೊಯ್ದರು. ಬಳಿಕ ಬಿಡುಗಡೆ ಮಾಡಿದರು. ವಿರಾಜಪೇಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು. ಒಟ್ಟಾರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಇದುವರೆಗೆ ನಡೆದ ವರದಿಯಾಗಿಲ್ಲ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ.












Click it and Unblock the Notifications