ಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳು
ಮಡಿಕೇರಿ, ಮೇ 15 : ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿತ್ತು.
ಜನರು ಉಹಾಪೋಹಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೆಂದ್ರವು ನಿರಂತರವಾಗಿ ಹವಾಮಾನದ ಬಗ್ಗೆ ನಿಗಾವಹಿಸಿದ್ದು, ಯಾವುದೇ ರೀತಿಯ ಹವಾಮಾನ ವೈಪರೀತ್ಯದ ಮುನ್ಸೂಚನೆ ಇದ್ದಲ್ಲಿ ಮುಂಚಿತವಾಗಿ ಮುನ್ನೆಚ್ಚರಿಕೆ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ಮಳೆಗಾಲ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ತುರ್ತು ನಿರ್ವಹಣಾ ಕೇಂದ್ರವನ್ನು ಆರಂಭಿಸಲಾಗಿದೆ. ಜನರು 1077 ನಂಬರ್ಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬಹುದಾಗಿದೆ. ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡಲಿದೆ.
ಮೇ ತಿಂಗಳ ಅಂತ್ಯಕ್ಕೆ ಎನ್ಡಿಆರ್ಎಫ್ನ 1 ತಂಡ ಮಡಿಕೇರಿಗೆ ಆಗಮಿಸಲಿದೆ. ಮಳೆಗಾಲ ಮುಗಿಯುವ ತನಕ ತಂಡ ಜಿಲ್ಲೆಯಲ್ಲಿಯೇ ಇರಲಿದ್ದು, ಯಾವುದೇ ತೊಂದರೆ ಉಂಟಾದರೆ ತಕ್ಷಣ ಸಹಾಯಕ್ಕೆ ಬರಲಿದೆ. ಅಗ್ನಿಶಾಮಕ. ಗೃಹ ರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುವಂತೆ ಸೂಚಿಸಲಾಗಿದೆ.

ಸಂತ್ರ್ತರಿಗೆ ಮನೆ ನಿರ್ಮಾಣ ಕಾರ್ಯ
ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜನರ ಪುನರ್ವಸತಿಗಾಗಿ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಮನೆ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರ ಮಾಡಲಾಗುತ್ತದೆ.

ನೀರು ಹರಿದು ಹೋಗಲು ವ್ಯವಸ್ಥೆ
ಮಡಿಕೇರಿ ನಗರ ಸಭಾ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆಯ ಮುಂಭಾಗದಲ್ಲಿರುವ ತೋಡಿನ (ರಾಜಕಾಲುವೆ) ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ.

ವಿವಿಧ ಪ್ರದೇಶಗಳಿಗೆ ಭೇಟಿ
ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಮುಂತಾದ ಅಧಿಕಾರಿಗಳು ಮಡಿಕೇರಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಂಭವನೀಯ ಪ್ರಕೃತಿ ವಿಕೋಪವನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುತ್ತಿದ್ದಾರೆ.

ಮರ, ಹೂಳು ತೆರವು
ಮದೆ ಮತ್ತು ಜೋಡುಪಾಲ ಗ್ರಾಮಗಳಲ್ಲಿ ಮುಂಬರುವ ಮಳೆಗಾಲದಲ್ಲಿ ನೀರಿನ ಹರಿವಿಗೆ ಅನುಕೂಲವಾಗುವಂತೆ 2018ರ ಪ್ರಕೃತಿಕ ವಿಕೋಪದಿಂದಾಗಿ ಹೊಳೆ ಮತ್ತು ತೋಡುಗಳಲ್ಲಿ ಬಿದ್ದಿರುವಂತಹ ಮರಗಳನ್ನು ತೆರವು ಮಾಡುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ.

ಸಂತ್ರಸ್ತರಿಗೆ ಹಣದ ನೆರವು
ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ 427 ಸಂತ್ರಸ್ತರಲ್ಲಿ ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಇಚ್ಚಿಸಿರುವ 54 ಕುಟುಂಬಗಳಿಗೆ ಮೊದಲನೆಯ ಹಂತದಲ್ಲಿ ಮುಂಗಡ ಹಣವಾಗಿ 2 ಲಕ್ಷ ರೂಪಾಯಿಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ.,












Click it and Unblock the Notifications