ಕೊಡಗಿನಲ್ಲಿ ಆತಂಕದ ನಡುವೆಯೇ ಗದ್ದೆಗಿಳಿದ್ದಾರೆ ರೈತರು
ಮಡಿಕೇರಿ, ಜೂನ್ 1: ಈ ಬಾರಿ ಮುಂಗಾರು ಪೂರ್ವದಲ್ಲಿ ಮಳೆ ಜತೆಗೆ ಸಿಡಿಲು-ಗುಡುಗಿನ ಆರ್ಭಟ ಕಂಡು ಬರುತ್ತಿದ್ದು, ಮುಂಗಾರು ಕಾಲಿಟ್ಟ ಬಳಿಕ ಹೇಗಿರಬಹುದು ಎಂಬ ಚಿಂತೆಯೂ ಕೊಡಗಿನ ಜನರನ್ನು ಕಾಡುತ್ತಿದೆ.
ಮುಂಗಾರು ಆರಂಭದ ಈ ದಿನಗಳಲ್ಲಿ ತೋಟ, ಗದ್ದೆ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲೇಬೇಕಾಗಿರುವ ಬೆಳೆಗಾರರು ಅದರತ್ತ ತಮ್ಮ ಚಿತ್ತ ಹರಿಸಿದ್ದಾರೆ. ಈಗಾಗಲೇ ಮಳೆ ಸುರಿದು ಭೂಮಿ ತೇವಗೊಂಡಿರುವುದರಿಂದ ಕಾಫಿ ತೋಟದಲ್ಲಿರುವ ಮರಗಳ ನೆರಳು ತೆಗೆಯುವ ಮರಕಪಾತ್ ಕೆಲಸ, ಕಾಫಿಗಿಡಗಳ ಕಪಾತ್, ಗೊಬ್ಬರ ಹಾಕುವುದು ಹೀಗೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.

ಪಾಳು ಬಿದ್ದ ಭತ್ತದ ಗದ್ದೆಗಳು
ಕೆಲವರು ಗದ್ದೆಗಳ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. ಆದರೆ ಮೊದಲಿಗೆ ಹೋಲಿಸಿದರೆ ಇಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಗೊಂಡಿದೆ. ಒಂದೆರಡು ದಶಕಗಳ ಹಿಂದೆ ಇದೇ ಸಮಯದಲ್ಲಿ ರೈತರು ಗದ್ದೆ ಬಯಲಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಗದ್ದೆ ಉಳುಮೆ ಮಾಡುವುದು, ಗೊಬ್ಬರ ಹರಡುವುದು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಭತ್ತದ ಕೃಷಿಯತ್ತ ನಿರಾಸಕ್ತಿ ತಾಳಿರುವ ಬೆಳೆಗಾರರು, ಅವುಗಳನ್ನು ಕಾಫಿ ತೋಟಗಳನ್ನಾಗಿ ಪರಿವರ್ತಿಸಿದ್ದರೆ, ಇನ್ನು ಕೆಲವೆಡೆ ಗದ್ದೆಗಳು ನಿವೇಶನಗಳಾಗುತ್ತಿವೆ. ಜತೆಗೆ ಹೆಚ್ಚಿನವರು ಭತ್ತ ಕೃಷಿಯನ್ನು ಮಾಡಲಾಗದೆ ಗದ್ದೆಯನ್ನು ಪಾಳುಬಿಟ್ಟಿದ್ದಾರೆ. ಇದಕ್ಕೆ ಕಾರಣಗಳು ಹತ್ತಾರು ಇರುವುದನ್ನು ಅಲ್ಲಗಳೆಯುವಂತಿಲ್ಲ.
ಈ ಹಿಂದೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ನದಿ ತಟದಲ್ಲಿದ್ದ ಗದ್ದೆಗಳು ಜಲಾವೃತವಾಗುತ್ತಿದ್ದವು. ಭತ್ತದ ಬೆಳೆ ನಾಶವಾಗುತ್ತಿತ್ತು. ಈ ವೇಳೆ ಮಳೆ ಕಡಿಮೆಯಾದ ಬಳಿಕ ಗದ್ದೆಯಲ್ಲಿ ನಾಟಿ ನೆಡುತ್ತಿದ್ದರು. ಆದರೆ ಗದ್ದೆಗಳು ನಿವೇಶನಗಳಾಗಿ ಮನೆಗಳಾಗಿರುವುದರಿಂದ ಇದೀಗ ಹೆಚ್ಚಿನ ಅನಾಹುತಗಳಾಗುತ್ತಿವೆ. ಕಳೆದ ಬಾರಿ ಮಳೆಯಿಂದ ಹೆಚ್ಚಿನ ಅನಾಹುತವಾಗಿತ್ತು. ಈ ಬಾರಿ ಆ ರೀತಿಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ರೈತರಿಗೆ ಸಹಾಯವಾಣಿ
ಗ್ರಾಮ ಪಂಚಾಯಿತಿ ಮಟ್ಟದ ಮಳೆ ಮಾಪನ ಕೇಂದ್ರಗಳು ಹಾಗೂ ಹೋಬಳಿ ಮಟ್ಟದ ಹವಾಮಾನ ಮಾಪನ ಕೇಂದ್ರಗಳಿಂದ ಸಂಗ್ರಹಿಸಲ್ಪಟ್ಟ ಹವಾಮಾನ ಸಂಬಂಧಿತ ಮಾಹಿತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಗಣಕೀಕೃತ ಮಾದರಿಗಳ ಮೂಲಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹವಾಮಾನ ಮುನ್ಸೂಚನೆಯನ್ನು ನೇರವಾಗಿ ತಲುಪಿಸಲು ವರುಣ ಮಿತ್ರ 9243345433(24x7) ಸಹಾಯವಾಣಿ ತೆರೆಯಲಾಗಿದೆ.
ಜಿಲ್ಲೆಯ ರೈತರು ಈ ವರುಣ ಮಿತ್ರ ಸಹಾಯವಾಣಿಯಿಂದ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ತಮ್ಮ ಕೃಷಿ ಚಟುವಟಿಕೆ ರೂಪಿಸಿಕೊಳ್ಳುವುದರ ಮೂಲಕ ಹವಾಮಾನ ವೈಪರೀತ್ಯದಿಂದ ಆಗಬಹುದಾದ ಬೆಳೆ ನಾಶವನ್ನು ತಡೆಗಟ್ಟಲು ಹಾಗೂ ಸಮರ್ಪಕ ಬೆಳೆ ನಿರ್ವಹಣೆಯ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ. ವರುಣ ಮಿತ್ರ ಮೂಲಕ ಕ್ಷಣದ ಹವಾಮಾನ ಸಂಬಂಧಿತ ಮಾಹಿತಿ, ಮುನ್ಸೂಚನೆ ಮತ್ತು ಸಲಹೆಗಳನ್ನು ಎಸ್ಎಂಎಸ್ ಮೂಲಕ ರೈತರಿಗೆ ನೀಡಲಾಗುತ್ತದೆ.

ಸಿಡಿಲು ಆಪ್ ಅಭಿವೃದ್ಧಿ
ಜತೆಗೆ ಸಿಡಿಲು ಬಡಿತದ ಬಗ್ಗೆ ಎಚ್ಚರಿಕೆ ನೀಡಲು ಸಿಡಿಲು ಎಂಬ ಮೊಬೈಲ್ ಆಪ್ ಅಭಿವೃದ್ದಿಪಡಿಸಲಾಗಿದ್ದು, ಇದನ್ನು ಗೂಗಲ್ ಪ್ಲೇ ಸ್ಟೋರ್ಯಿಂದ ಉಚಿತವಾಗಿ ಪಡೆಯಬಹುದಾಗಿದೆ, ಈ ಆಪ್ ಮೂಲಕ ಸಿಡಿಲು ಬಡಿತದ ಮುನ್ಸೂಚನೆ ಹಾಗೂ ಸಂಬಂಧಿತ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.

ಕೊಡಗಿನೆಲ್ಲೆಡೆ ಮುನ್ನೆಚ್ಚರಿಕೆ
ಈ ನಡುವೆ ಪ್ರಕೃತಿ ವಿಕೋಪ ಸೂಕ್ಷ್ಮ ಪ್ರದೇಶಗಳಾದ ಕೆ.ನಿಡುಗಣೆ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟಗೇರಿ, ದೇವಸ್ತೂರು, ಕಾಲೂರು ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಮತ್ತು ಎಸ್ಪಿ ಸುಮನ್ ಡಿ.ಪನ್ನೇಕರ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾತ್ರಿ ಹಗಲೆನ್ನದೆ ಯಾವುದೇ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಅತಿ ಸುಲಭವಾಗಿ ನಿಭಾಯಿಸುವ ಧೈರ್ಯ ಹೊಂದಿರುವ ಈ ಮಹಿಳಾ ಅಧಿಕಾರಿಗಳನ್ನು ಜನ ಕೊಂಡಾಡುತ್ತಿದ್ದಾರೆ. ಒಂದೆಡೆ ಜಿಲ್ಲೆಯ ಜನತೆಗೆ ಧೈರ್ಯ ತುಂಬುತ್ತಾ ಮತ್ತೊಂದೆಡೆ ಪ್ರಕೃತಿ ವಿಕೋಪವನ್ನು ಎದುರಿಸುವ ಕುರಿತಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸರ್ವ ಸನ್ನದ್ಧವಾಗುತ್ತಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ.












Click it and Unblock the Notifications