ಚಾಲಕರ ಪುಂಡಾಟಕ್ಕೆ ಕಡಿವಾಣ ಹಾಕಲಿವೆ ಗಸ್ತುವಾಹನ
ಮಡಿಕೇರಿ, ಫೆಬ್ರವರಿ. 09 : ಇನ್ನು ಮುಂದೆ ಕೊಡಗಿನ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದ ಚಾಲನೆ, ಪುಂಡಾಟ, ಅಕ್ರಮ ಸಾಗಾಟ ಮೊದಲಾದವುಗಳಿಗೆ ಬ್ರೇಕ್ ಹಾಕಲು ಅಷ್ಟೇ ಅಲ್ಲದೆ ಆಕಸ್ಮಿಕವಾಗಿ ದುರಂತಗಳು ಸಂಭವಿಸಿದರೆ ಸಹಾಯಕ್ಕೆ ಹೈವೇ ಪ್ಯಾಟ್ರೋಲ್ ಗಸ್ತುವಾಹನಗಳು ಬರಲಿವೆ.
ಹೌದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಎರಡು ಗಸ್ತು ವಾಹನಗಳನ್ನು ನೀಡಲಾಗಿದ್ದು, ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.
ಇಂತಹದೊಂದು ಗಸ್ತುವಾಹನದ ಅಗತ್ಯತೆ ಕೊಡಗಿಗೆ ಇತ್ತು. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ವೇಗದ ಚಾಲನೆಯೊಂದಿಗೆ ಪುಂಡಾಟಗಳು ನಡೆಯುತ್ತಿದ್ದವು. ಇಷ್ಟೇ ಅಲ್ಲದೆ, ಅಕ್ರಮ ಮರಳು ಸಾಗಾಟ, ಸೇರಿದಂತೆ ಇನ್ನಿತರ ಘಟನೆಗಳು ನಡೆಯುತ್ತಿದ್ದವು.

ಕೆಲವೆಡೆ ಅಪಘಾತ ಸಂಭವಿಸಿದರೆ ಸ್ಥಳಕ್ಕೆ ಪೊಲೀಸರು ಬರುವುದೇ ವಿಳಂಬವಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆಗೆ ಕಡಿವಾಣ ಬೀಳಲಿದೆ. ರಸ್ತೆಗಿಳಿದಿರುವ ಎರಡು ಗಸ್ತುವಾಹನಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಟೋಯೋಟಾ ಇನೋವಾ ಕಂಪನಿಯದ್ದಾಗಿವೆ.
ಈ ವಾಹನಗಳಲ್ಲಿ ಕ್ಯಾಮೆರಾ, ಸರ್ಚ್ ಲೈಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್, ಮೆಗಾಫೋನ್, ಗಾಯಾಳುಗಳನ್ನು ಸಾಗಿಸುವ ಸ್ಟ್ರಕ್ಚರ್, ಇನ್ವರ್ಟರ್ ಹಾಗೂ ಜಿಪಿಎಸ್ ಈ ವ್ಯವಸ್ಥೆಗಳಿರಲಿವೆ.
ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವ ವಾಹನಗಳು ಚಾಲನೆಯಲ್ಲಿರುತ್ತವೆ. ವಾಹನದಲ್ಲಿ ಓರ್ವ ಚಾಲಕ, ಓರ್ವ ಸಹಾಯಕ ಠಾಣಾಧಿಕಾರಿ, ಸಿಬ್ಬಂದಿ ಇದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೊಡಗಿನ ಗಡಿಭಾಗ ಸಂಪಾಜೆವರೆಗೂ ಗಸ್ತು ತಿರುಗಲಿವೆ.
ಯಾವುದೇ ಅಪಘಾತ ಸಂಭವಿಸಿದರೂ ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಾಳುಗಳ ನೆರವಿಗೆ ಬರಲಿದ್ದು, ಪ್ರಥಮ ಚಿಕಿತ್ಸೆ, ರಕ್ಷಣೆ, ಆಸ್ಪತ್ರೆಗೆ ಸಾಗಾಟ ಹೀಗೆ ಎಲ್ಲ ಕಾರ್ಯವನ್ನು ನಿರ್ವಹಿಸಲಿದೆ. ಜತೆಗೆ ಕಂಟ್ರೋಲ್ ರೂಂ ನೊಂದಿಗೆ ನೇರ ಸಂಪರ್ಕ ಸಾಧಿಸಿ ಅಧಿಕಾರಿಗಳಿಗೆ ನೇರ ಮಾಹಿತಿ ನೀಡಲಿದೆ.
ಒಂದು ವೇಳೆ ಅಪಘಾತ ಸಂಭವಿಸಿದ ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ಸ್ಥಳಕ್ಕೆ ಗಸ್ತುವಾಹ ಬರಲಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಾದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ವೇಗವಾಗಿ ಸಾಗುವ ವಾಹನಗಳಿಗೆ ತಡೆಬಿದ್ದು ಎಲ್ಲರೂ ಸುಗಮವಾಗಿ ಸಾಗುವಂತಾದರೆ ಅಷ್ಟೇ ಸಾಕು.












Click it and Unblock the Notifications