ಮಡಿಕೇರಿಯಲ್ಲಿ ಗಾಂಜಾ ದಂಧೆಗೆ ಸ್ವತಃ ಧಾರ್ಮಿಕ ಮುಖಂಡರ ಬ್ರೇಕ್
ಮಡಿಕೇರಿ , ಮೇ 30: ಕೊಡಗಿನ ಶಾಲೆ-ಕಾಲೇಜುಗಳ ಬಳಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಯುವಕರ ವಿರುದ್ಧ ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಮಾಅತ್ ನ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸುವ ಮೂಲಕ ವಿನೂತನ ಕ್ರಮ ಕೈಗೊಂಡಿದೆ.
ಮುಸ್ಲಿಂ ಸಮುದಾಯದ ಯುವಕರು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆ ಗಮನಿಸಿದ ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಸಮಿತಿ ಇಂತಹ ದಂಧೆಗೆ ಕಡಿವಾಣ ಹಾಕಲು ಆಡಳಿತ ಮಂಡಳಿಯು ವ್ಯಾಪಕ ಚರ್ಚೆ ನಡೆಸುವ ಮೂಲಕ ಇಂತಹ ದಿಟ್ಟ ನಿರ್ಧಾರ ಕೈಗೊಂಡಿದೆ. ಆಡಳಿತ ಮಂಡಳಿಯ ಕ್ರಮಕ್ಕೆ ಮುಸ್ಲಿಂ ಹಾಗೂ ಇತರ ಸಮುದಾಯದಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಯುವಕರ ಪೋಷಕರಿಗೆ ಜಮಾಅತ್ ಸಮಿತಿಯಿಂದ ನೋಟಿಸ್
ಇತ್ತೀಚಿಗೆ ಕೊಡಗು ಜಿಲ್ಲಾ ಪೊಲೀಸರು ಕೆಲವು ಯುವಕರನ್ನು ಬಂಧಿಸುವ ಮೂಲಕ ದೊಡ್ಡ ಪ್ರಮಾಣದ ಗಾಂಜಾ ದಂಧೆಯನ್ನು ಬಯಲಿಗೆ ತಂದಿದ್ದರು. ಈ ತಂಡದಲ್ಲಿ ಗೋಣಿಕೊಪ್ಪಲುವಿನ ಇಬ್ಬರು ಯುವಕರು ಗುರುತಿಸಿಕೊಂಡ ಕಾರಣ ಗಾಂಜಾ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಗೋಣಿಕೊಪ್ಪ ಜಮಾಅತ್ ಸಮಿತಿ ಅಂತಿಮವಾಗಿ ಇಂತಹ ನಿರ್ಧಾರಕ್ಕೆ ಬಂದಿದೆ.
ಯುವಕರ ಪೋಷಕರಿಗೆ ಜಮಾಅತ್ ಸಮಿತಿಯಿಂದ ನೋಟಿಸ್ ಜಾರಿ ಗೊಳಿಸಲಾಗಿದ್ದು, ಜಮಾಅತ್ ನ ಎಲ್ಲ ಕಾರ್ಯಕ್ರಮಕ್ಕೆ ನಿಷೇಧ ಹೇರಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್
ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ತಮ್ಮ ವ್ಯಾಪಾರ ಕುದುರಿಸುತ್ತಿದ್ದ ಯುವಕರು ಶ್ರಮಪಟ್ಟು ದುಡಿಯಲಾರದೆ ಗಾಂಜಾ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ವಿದ್ಯಾರ್ಥಿ ಸಮೂಹವನ್ನು ಹಾದಿ ತಪ್ಪಿಸುತ್ತಿದ್ದ ಇಂತಹ ಯುವಕರು ಇದರಲ್ಲಿಯೇ ಜೀವನ ಸಾಗಿಸುತ್ತಿದ್ದರು.

ಪೋಷಕರು ಸಮಾಜದಲ್ಲಿ ತಲೆತಗ್ಗಿಸುವ ಕೆಲಸ
ಮೈಸೂರು ಸೇರಿದಂತೆ ಇತರ ಪ್ರದೇಶಗಳಿಂದ ಗಾಂಜಾವನ್ನು ಕಾನೂನು ಬಾಹಿರವಾಗಿ ಸಗಟು ರೂಪದಲ್ಲಿ ತರುವ ಮೂಲಕ ಇವುಗಳನ್ನು ಸಣ್ಣ ಪ್ಯಾಕೆಟ್ಗಳನ್ನಾಗಿಸಿ ಮಾರಾಟ ಮಾಡುತ್ತಿದ್ದರು. ಈ ದುಷ್ಕೃತ್ಯಕ್ಕೆ ಕೆಲವು ಯುವಕರು ನೇರವಾಗಿ ಬಲಿಯಾಗುತ್ತಿದ್ದರು. ಗಾಂಜಾ ವ್ಯಸನಿಗಳ ಪೋಷಕರು ಇಂತಹ ಮಕ್ಕಳಿಂದ ಸಮಾಜದಲ್ಲಿ ತಲೆ ತಗ್ಗಿಸಿ ನಡೆದಾಡುವಂತ ಪರಿಸ್ಥಿತಿ ಎದುರಾಗಿತ್ತು.

12 ಜನರ ದೊಡ್ಡ ತಂಡವೇ ಬಂಧಿತವಾಗಿತ್ತು
ಯುವಕರು ಗಾಂಜಾ ಖರೀದಿಸಲು ಮನೆಯಲ್ಲಿರುವ ವಸ್ತುಗಳನ್ನು ಅಪಹರಿಸಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡಿ, ಆ ಮೂಲಕ ಬಂದ ಹಣದಿಂದ ಗಾಂಜಾ ಖರೀದಿಸುತ್ತಿದ್ದರು. ಶಾಲಾ-ಕಾಲೇಜುಗಳಿಗೆ ತೆರಳದೆ ಗಾಂಜಾ ವ್ಯಸನಿಗಳಾಗಿ ನಗರದಲ್ಲಿ ಅಡ್ಡಾಡುವುದು ಸಾಮಾನ್ಯವಾಗಿತ್ತು. ಗಾಂಜಾ ಮಾರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸ್ ಇಲಾಖೆ ಕಳೆದ ಮೂರು ವಾರಗಳ ಹಿಂದೆ 12 ಜನರ ದೊಡ್ಡ ತಂಡವನ್ನೇ ಬಂಧಿಸಿ ಜೈಲಿಗಟ್ಟಿತ್ತು.












Click it and Unblock the Notifications