ಫೀ.ಮಾ ಕಾರ್ಯಪ್ಪ, ಜ.ತಿಮ್ಮಯ್ಯಗೆ 'ಭಾರತ ರತ್ನ' ಗೌರವಕ್ಕೆ ಮನವಿ: ರಾಷ್ಟ್ರಪತಿ ಕಾರ್ಯಾಲಯ ಸ್ಪಂದನೆ
ಮಡಿಕೇರಿ ಮಾರ್ಚ್ 12: ಕೊಡಗಿನ ಹೆಮ್ಮೆಯ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ "ಭಾರತ ರತ್ನ' ಗೌರವ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾಡಿರುವ ಮನವಿಗೆ ರಾಷ್ಟ್ರಪತಿಗಳ ಕಾರ್ಯಾಲಯ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ.
ಕಳೆದ ಫೆ.6ರಂದು ಜನರಲ್ ತಿಮ್ಮಯ್ಯ ಸ್ಮಾರಕ ಭವನ ಉದ್ಘಾಟನೆಗೆಂದು ರಾಷ್ಟ್ರಪತಿಗಳು ಮಡಿಕೇರಿಗೆ ಆಗಮಿಸಿದ್ದಾಗ ಎಂಎಲ್ಸಿ ವೀಣಾ ಅಚ್ಚಯ್ಯ ಅವರು "ಭಾರತ ರತ್ನ'ಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದರು.

ರಾಷ್ಟ್ರಪತಿಗಳ ಕಾರ್ಯಾಲಯದ ವಿಶೇಷ ಅಧಿಕಾರಿ ಜಗನ್ನಾಥ್ ಶ್ರೀನಿವಾಸನ್ ಅವರು ಈ ಪತ್ರವನ್ನು ಪ್ರಧಾನಮಂತ್ರಿಗಳ ಕಚೇರಿಗೆ ಕಳುಹಿಸಿಕೊಟ್ಟಿರುವುದಾಗಿ ಎರಡು ದಿನಗಳ ಹಿಂದೆ ವೀಣಾ ಅಚ್ಚಯ್ಯ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯರಿಗೆ "ಭಾರತರತ್ನ' ಸಿಗಲಿದೆ ಎಂದು ವೀಣಾ ಅಚ್ಚಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ರಾಷ್ಟ್ರಪತಿಗಳಿಗೆ ಹಾಗೂ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.












Click it and Unblock the Notifications