ಕೊಡಗು: ಜೀಪು ಚಾಲಕ ಪೂವಯ್ಯ ಹತ್ಯೆ, ಪತ್ನಿಯೇ ಹಂತಕಿ!
ಕೊಡಗು, ಜನವರಿ 04 : ಜಿಲ್ಲೆಯ ಮಾದಾಪುರದ ಇಗ್ಗೊಡ್ಲು ಗ್ರಾಮದ ಜೀಪು ಚಾಲಕ ರಂಜನ್ ಪೂವಯ್ಯನನ್ನು ಡಿ.23ರಂದು ಮನೆ ಬಳಿಯೇ ಗುಂಡಿಟ್ಟು ಕೊಲೆಗೈದ ಘಟನೆ ಕೊಡಗಿನಲ್ಲಿ ಸಂಚಲನವನ್ನುಂಟು ಮಾಡಿತ್ತು.
ಕೊಲೆ ಮಾಡಿದವರ್ಯಾರು ಎಂಬ ವಿಚಾರದಲ್ಲಿ ಬಹಳಷ್ಟು ಸಂಶಯಗಳು ವ್ಯಕ್ತವಾಗಿದ್ದವು. ಆದರೆ, ಜಿಲ್ಲಾ ಅಪರಾಧ ಪತ್ತೆ ದಳ ಮೂವರು ಹಂತಕರನ್ನು ಬಂಧಿಸಿದ್ದು, ಅದರಲ್ಲಿ ಪತ್ನಿಯೇ ಹಂತಕಿಯಾಗಿರುವುದು ಬೆಚ್ಚಿ ಬೀಳುವಂತೆ ಮಾಡಿದೆ.
ಮೃತನ ಪತ್ನಿ ಇಗ್ಗೋಡ್ಲು ಗ್ರಾಮದ ಶಾಂತಿ ಪೂವಯ್ಯ(36), ಚೆಂಬೆಬೆಳ್ಳೂರು ಗ್ರಾಮದ ಮಂಡೇಪಂಡ ರಾಜೇಶ(40) ಹಾಗೂ ಅದೇ ಗ್ರಾಮದ ಮಂಡೇಪಂಡ ಅಶೋಕ(44) ಬಂಧಿತರಾಗಿದ್ದಾರೆ.
ಡಿಸೆಂಬರ್ 23 ರಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಇಗ್ಗೋಡ್ಲುವಿನ ಬಾಡಿಗೆ ಮನೆ ಸಮೀಪ ಕಾಳಚಂಡ ರಂಜು ಪೂವಯ್ಯ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಡಿಸಿಐಬಿ ತಂಡಕ್ಕೆ ಸಿಕ್ಕ ಸುಳಿವಿನ ಆಧಾರದಲ್ಲಿ ತನಿಖೆ ನಡೆಸಿದಾಗ ಮೃತನ ಪತ್ನಿಯೇ 1.50ಲಕ್ಷ ರು. ನೀಡುವುದಾಗಿ ಹೇಳಿ ಪ್ರಿಯತಮ ರಾಜೇಶನಿಗೆ ಸುಫಾರಿ ನೀಡಿದ್ದು, ಅದರಂತೆ ರಾಜೇಶ ತನ್ನೊಂದಿಗೆ ಅಶೋಕ ಎಂಬಾತನನ್ನು ಕರೆತಂದು ಗುಂಡು ಹಾರಿಸಿ ಕೊಲೆಗೈದಿರುವುದು ಬೆಳಕಿಗೆ ಬಂದಿದೆ.
ಕೊಲೆ ನಡೆದ ಬಳಿಕ ಯಾವುದೇ ರೀತಿಯಲ್ಲಿ ಸಂಶಯ ಬಾರದಂತೆ ನಡೆದುಕೊಂಡಿದ್ದ ಶಾಂತಿ, ಗಂಡನ ಹೆಣದ ಮೇಲೆ ಹೊರಳಾಡಿ ಅತ್ತಿದ್ದಳು. ಘಟನೆ ನಡೆದ ಸಮಯ ನಂತರ ಶಾಂತಿಗೆ ಬರುತ್ತಿದ್ದ ಕರೆಗಳನ್ನು ಕಲೆ ಹಾಕಿದ ಪೊಲೀಸರು ಆಕೆಗೆ ಮೇಲೆಯೇ ಅನುಮಾನ ಬಂದಿತ್ತು.
ಅದರ ಬೆನ್ನು ಹತ್ತಿ ಹೋದ ತನಿಖಾ ತಂಡಕ್ಕೆ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ ಮೃತನ ಪತ್ನಿ ಶಾಂತಿಗೆ ರಾಜೇಶ್ ಎಂಬಾತ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.
ಹೀಗಾಗಿ ಆಕೆ ಆತನ ಸಹಕಾರದೊಂದಿಗೆ ಗಂಡನ ಕೊಲೆ ಮಾಡಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದು, ಇದೀಗ ಶಾಂತಿ ಸೇರಿ ಮೂವರು ಹಂತಕರು ಜೈಲ್ ಪಾಲಾಗಿದ್ದಾರೆ. ಶಾಂತಿಯ ಅನೈತಿಕ ಸಂಬಂಧದ ಕಾರಣ ಈಗ ಮಕ್ಕಳಿಬ್ಬರು ತಬ್ಬಲಿಗಳಾಗಿದ್ದಾರೆ.