ಕೊಡಗಿನ ಜನರ ನೆಮ್ಮದಿ ಕಸಿಯುತ್ತಿರುವ ಈ ಮಹಾಮಳೆ!
ಮಡಿಕೇರಿ, ಸೆಪ್ಟೆಂಬರ್ 9: ಕೊಡಗಿನಲ್ಲಿ ಇಷ್ಟರಲ್ಲಿಯೇ ಮಳೆ ತಗ್ಗಿ ಜನಜೀವನ ಎಂದಿನ ಸ್ಥಿತಿಗೆ ಬರಬೇಕಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ಒಂದಷ್ಟು ಬಿಡುವು ನೀಡಿದ ಮಳೆ ಮತ್ತೆ ಸುರಿಯತೊಡಗಿದೆ. ಪರಿಣಾಮ, ಭಾಗಮಂಡಲದ ಸಂಗಮ ಕ್ಷೇತ್ರ ಜಲಾವೃತವಾಗಿದ್ದು, ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಕಳೆದ ವರ್ಷ ಭಾರೀ ಮಳೆ ಸುರಿದು ಆಗಸ್ಟ್ ತಿಂಗಳಲ್ಲಿ ಅನಾಹುತ ಸಂಭವಿಸಿದ್ದರೂ ಬಳಿಕ ಮಳೆ ಕಡಿಮೆಯಾಗಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಬಿಡುವು ನೀಡಿ ಇದೀಗ ಮುಂದುವರೆದಿರುವುದರಿಂದ ಆತಂಕ ಶುರುವಾಗಿದೆ.
ಕಾಫಿ ಮಿಡಿಕಚ್ಚಿ ಬೆಳೆಯುವ ಸಮಯ, ಗದ್ದೆಯಲ್ಲಿ ಭತ್ತದ ಪೈರು ಹಸಿರಾಗಿ ಹೊಡೆಯೊಡೆದು ಹುಲುಸಾಗುವ, ಕರಿಮೆಣಸು ಬೆಳವಣಿಗೆ ಹೊಂದುವ ಕಾಲವಾಗಿದೆ. ಆದರೆ ಇದೀಗ ಸುರಿಯುತ್ತಿರುವ ಮಳೆ ಅಳಿದುಳಿದ ಫಸಲನ್ನು ಸರ್ವ ನಾಶ ಮಾಡುತ್ತಿದ್ದು, ತೋಟಗಾರಿಕಾ ಬೆಳೆಯನ್ನೇ ನಂಬಿ ಬದುಕುವ ಇಲ್ಲಿನ ಬೆಳೆಗಾರರನ್ನು ಮುಂದೇನು ಮಾಡುವುದು ಎಂಬ ಚಿಂತೆಗೆ ತಳ್ಳಿದೆ.

16 ಮಂದಿ ಸಾವು, ನಾಲ್ವರು ನಾಪತ್ತೆ
ಈಗಾಗಲೇ ಸುರಿದ ಮಳೆಯಿಂದ ಸಂಭವಿಸಿದ ಅನಾಹುತಗಳಿಂದ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವುಂಟಾಗಿದೆ ಎಂದು ಹೇಳಲಾಗಿದೆ. ಜತೆಗೆ ಒಟ್ಟು 16 ಮಂದಿ ಮೃತಪಟ್ಟಿದ್ದರೆ, 4 ಮಂದಿ ನಾಪತ್ತೆಯಾಗಿದ್ದಾರೆ. ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ತಲಾ 5 ಲಕ್ಷದಂತೆ ಒಟ್ಟು 65ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದ್ದು, 3 ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರಸುದಾರರ ಬಗ್ಗೆ ಗೊಂದಲ ಇರುವ ಹಿನ್ನಲೆಯಲ್ಲಿ ಪರಿಹಾರವನ್ನು ತಡೆಹಿಡಿಯಲಾಗಿದೆ.
ವಿರಾಜಪೇಟೆ ತಾಲ್ಲೂಕಿನ ತೋರಾ ಗ್ರಾಮದಲ್ಲಿ ಮಹಾಮಳೆಯಿಂದ ಭೂ ಕುಸಿತ ಉಂಟಾಗಿ 10 ಮಂದಿ ನಾಪತ್ತೆಯಾಗಿ ಇಲ್ಲಿಯವರೆಗೆ ಒಟ್ಟು 6 ಮಂದಿಯ ಮೃತ ದೇಹಗಳು ಪತ್ತೆಯಾಗಿವೆ. ಉಳಿದ ನಾಲ್ವರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದರೂ ಇಲ್ಲಿಯವರೆಗೆ ಶವಗಳು ಪತ್ತೆಯಾಗಿಲ್ಲ. ಸದ್ಯ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಈ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿರಬಹುದು ಎಂದು ಹೇಳಲಾದ ದೇವಕ್ಕಿ (65), ಅಮೃತಾ (13), ಆದಿತ್ಯ (10), ವೀಣಾ ಅವರ ಶವಗಳು ದೊರೆತಿಲ್ಲ. ಹೀಗಾಗಿ ನಾಪತ್ತೆಯಾದವರು ಮೃತಪಟ್ಟಿದ್ದಾರೆ ಎಂದು ಘೋಷಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ಗಳನ್ನು ನೀಡುವಂತೆ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

2068 ಮನೆಗಳಿಗೆ ಹಾನಿ, ಮುಂದೇನು ಎಂಬ ಚಿಂತೆ
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಸುಮಾರು 2068 ಮನೆಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಮನೆ ಕಳೆದುಕೊಂಡು ಸಂತ್ರಸ್ತರಾದವರ ಪೈಕಿ 212 ಮಂದಿ ಇನ್ನೂ ಪರಿಹಾರ ಕೇಂದ್ರಗಳಲ್ಲಿಯೇ ಉಳಿದುಕೊಂಡಿರುವುದನ್ನು ಕಾಣಬಹುದಾಗಿದೆ. ಒಂದು ವೇಳೆ ಮತ್ತೆ ಮಳೆ ಅಬ್ಬರಿಸಿದರೆ ಪರಿಹಾರ ಕೇಂದ್ರಗಳಿಗೆ ಇನ್ನೊಂದಷ್ಟು ಮಂದಿ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಕಾವೇರಿ ನದಿ ಮತ್ತು ಲಕ್ಷ್ಮಣ ತೀರ್ಥ ನದಿ ತಟದಲ್ಲಿ ಒಂದು ಕಾಲದಲ್ಲಿ ಗದ್ದೆಗಳಾಗಿದ್ದ ಬಯಲುಗಳೆಲ್ಲವೂ ಈಗ ಬಡಾವಣೆಗಳಾಗಿ ಅಲ್ಲಿ ಮನೆಗಳು ಎದ್ದು ನಿಂತಿವೆ. ಇದೀಗ ಕಳೆದ ಎರಡು ವರ್ಷಗಳಿಂದ ಈ ಬಡಾವಣೆಗಳು ಜಲಾವೃತವಾಗುತ್ತಿರುವುದರಿಂದ ಇಲ್ಲಿ ವಾಸಿಸುತ್ತಿರುವ ಜನ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಜತೆಗೆ ಈ ಸ್ಥಳಗಳು ಸುರಕ್ಷಿತವಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಲಕ್ಷಾಂತರ ರೂ ಸಾಲ ಮಾಡಿ ಖರೀದಿ ಮಾಡಿದ ನಿವೇಶನ, ಕಟ್ಟಿಸಿದ ಮನೆಯನ್ನು ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಚಿಂತೆಯೂ ಕಾಡತೊಡಗಿದೆ. ಪ್ರತಿ ಮಳೆಗಾಲದಲ್ಲಿ ಇದೇ ರೀತಿ ಮಳೆಯಾದರೆ ಮುಂದೇನು ಎಂಬ ಭಯದಲ್ಲಿ ಬದುಕುವಂತಾಗಿದೆ.

ಭಯ ಹುಟ್ಟಿಸಿದ ಬೆಟ್ಟಗಳಲ್ಲಿನ ಬಿರುಕು
ಇದೆಲ್ಲದರ ನಡುವೆ ಜಿಲ್ಲೆಯು ಬೆಟ್ಟಗಳಿಂದಾವೃತವಾಗಿದ್ದು, ಈ ಬೆಟ್ಟಗಳ ಪೈಕಿ ಕೆಲವು ಕುಸಿದು ಬಹಳಷ್ಟು ನಷ್ಟ ಮತ್ತು ಜೀವ ಹಾನಿಮಾಡಿದ್ದರೆ ವೀರಾಜಪೇಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ನೆಹರು ಬೆಟ್ಟ ಮತ್ತು ತಲಕಾವೇರಿ ಬಳಿಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿರುವ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳಾಗಿ ಉಳಿಯಬೇಕು, ಅವು ಪ್ರವಾಸಿ ತಾಣಗಳಾಗಬಾರದು ಎಂಬ ಕೂಗು ಕೇಳಿ ಬಂದಿತ್ತು. ಆದರೂ ಕೆಲವರು ಈ ವ್ಯಾಪ್ತಿಯಲ್ಲಿ ರೆಸಾರ್ಟ್ ಮತ್ತು ಹೋಂಸ್ಟೇ ನಿರ್ಮಿಸಿ ಕ್ಷೇತ್ರಕ್ಕೆ ಧಕ್ಕೆ ತಂದಿದ್ದು ಅದರ ಪರಿಣಾಮವನ್ನು ಇದೀಗ ಎದುರಿಸುವಂತಾಗಿದೆ. ಈಗಾಗಲೇ ತಲಕಾವೇರಿ ಬೆಟ್ಟದ ಕೋರಂಗಾಲ ಬಳಿ ಗುಡ್ಡ ಕುಸಿದು ಐವರು ಮೃತಪಟ್ಟಿದ್ದರು. ಇದೀಗ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಜನವರಿಯಿಂದ ಇಲ್ಲಿಯವರೆಗೆ 2562.14 ಮಿ.ಮೀ ಮಳೆ
ಇದೆಲ್ಲದರ ಮಧ್ಯೆ ಮಳೆ ಸುರಿಯುತ್ತಲೇ ಇದೆ. ಕಳೆದೊಂದು ದಿನದಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯನ್ನು ನೋಡುವುದಾದರೆ ಸರಾಸರಿ 48.22 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.16 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ 2562.14 ಮಿ.ಮೀ ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 3788.51 ಮಿ.ಮೀ ಮಳೆ ಸುರಿದಿರುವುದನ್ನು ಕಾಣಬಹುದಾಗಿದೆ.
ಹಾಗೆ ನೋಡಿದರೆ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಇದೇ ರೀತಿ ಮುಂದುವರೆದರೆ ಮಳೆಯ ಪ್ರಮಾಣ ವರ್ಷಾಂತ್ಯದೊಳಗೆ ಮೂರು ಸಾವಿರ ಮಿಮೀ ಗಡಿದಾಟಿದರೆ ಅಚ್ಚರಿಪಡಬೇಕಾಗಿಲ್ಲ. 2859 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 2857.96 ಅಡಿಯಷ್ಟು ನೀರಿದ್ದು, 8170 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ನದಿಗೆ 5874 ಕ್ಯುಸೆಕ್, ನಾಲೆಗೆ 1000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಟ್ಟಾರೆ ಪ್ರಕೃತಿಯ ಅಟಾಟೋಪ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿರುವುದಂತೂ ನಿಜ.












Click it and Unblock the Notifications