ಮಡಿಕೇರಿ ಜಿಲ್ಲಾ ಬಸ್ ನಿಲ್ದಾಣಗಳಲ್ಲಿ ನೀರವ ಮೌನ
ಮಡಿಕೇರಿ, ಜುಲೈ 26 : ಖಾಸಗಿ ಬಸ್ಗಳೇ ಪ್ರಮುಖ ಸಂಚಾರ ವ್ಯವಸ್ಥೆಯಾಗಿರುವ ಕೊಡಗಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರದಿಂದ ಸಾರಿಗೆ ಬಸ್ಗಳು ರಸ್ತೆಗಿಳಿಯದ ಕಾರಣ ದೂರದ ಊರುಗಳಿಗೆ ತೆರಳುವವರಿಗೆ ಸ್ವಲ್ಪ ಮಟ್ಟಿಗೆ ಬಿಸಿ ತಟ್ಟಿದೆ.
ಜಿಲ್ಲೆಯ ಪ್ರಮುಖ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚರಿಸುತ್ತವೆಯಾದರೂ ಮಡಿಕೇರಿ-ಕುಶಾಲನಗರ, ಮಡಿಕೇರಿ-ಸಂಪಾಜೆ ಮಾರ್ಗದಲ್ಲಿ ಖಾಸಗಿ ಬಸ್ ಸಂಚರಿಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು. ಆದರೆ ಮ್ಯಾಕ್ಸಿಕ್ಯಾಬ್ಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಅನುಕೂಲವಾಗಿದೆ.
ಬಸ್ಗಳು ಡಿಪೋದಲ್ಲಿ ನಿಂತಿರುವ ಕಾರಣ ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಬಸ್ ನಿಲ್ದಾಣಗಳಲ್ಲಿ ನೀರವ ಮೌನ ಮನೆ ಮಾಡಿದೆ. [ಮಧ್ಯಾಹ್ನದಿಂದ ಸರ್ಕಾರಿ ಬಸ್ ಸೇವೆ ಆರಂಭ?]
ಜಿಲ್ಲಾಡಳಿತ ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು 35ಕ್ಕೂ ಅಧಿಕ ಮ್ಯಾಕ್ಸಿ ಕ್ಯಾಬ್ಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ, ಅಲ್ಲದೆ ಬಹಳಷ್ಟು ಮಂದಿ ತಮ್ಮ ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದರಿಂದ ಹೆಚ್ಚಿನ ಪ್ರಯಾಣಿಕರ ಪರದಾಟ ಕಂಡು ಬರುತ್ತಿಲ್ಲ.
ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ಸಂಪಾಜೆಯವರೆಗಿನ ಹೆದ್ದಾರಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗುವ ಸಂಭವವಿರುವುದರಿಂದ ಈ ರಸ್ತೆಯಲ್ಲಿ ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ಸುಗಳು ಓಡುತ್ತಿದ್ದು ಪ್ರಯಾಣಿಕರಿಗೆ ಅಷ್ಟೊಂದು ತೊಂದರೆಯಾಗಿಲ್ಲ. [ಬೆಂಗಳೂರಿಗರ ದಿನಚರಿ ಬದಲಿಸಿದ ಬಿಎಂಟಿಸಿ ಮುಷ್ಕರ]
ಕುಶಾಲನಗರದ ನಿಲ್ದಾಣದಲ್ಲಿ ನಿಂತಿದ್ದ ನಾಲ್ಕು ಬಸ್ಗಳ ಟಯರಿನ ಗಾಳಿಯನ್ನು ಕಿಡಿಗೇಡಿಗಳು ತೆಗೆದ ಬಗ್ಗೆ ವರದಿಯಾಗಿದೆ. ಸಾರಿಗೆ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದ ಕಾರಣ ಅಂಗಡಿ ಮಳಿಗೆಗಳನ್ನು ಮಾಲೀಕರು ಮುಚ್ಚಿ ಮನೆಗೆ ತೆರಳಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿವೆ.
ಕೇರಳದಿಂದ ಕೊಡಗಿನತ್ತ ಆಗಮಿಸುವ ಅಲ್ಲಿನ ಸಾರಿಗೆ ಬಸ್ಗಳು ಬರುತ್ತಿಲ್ಲ. ಆದರೆ ಖಾಸಗಿ ಬಸ್ಗಳ ಓಡಾಟ ಎಂದಿನಂತೆ ಸಾಗಿದೆ. ಒಟ್ಟಾರೆ ಸಾರಿಗೆ ಬಸ್ ಮುಷ್ಕರದಿಂದ ಕೊಡಗಿನಲ್ಲಿ ಅಂತಹ ಪರದಾಟ ಕಂಡು ಬರದೆ ಎಂದಿನಂತೆ ಜನಜೀವನ ಸಾಗಿದೆ. [ಬಸ್ ಸಿಬ್ಬಂದಿ ಸ್ಟ್ರೈಕ್ : ಶೇ 10 ಮಾತ್ರ ಹೈಕ್ ಅಂದ ಸಿದ್ದು]