ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ಸಿಕ್ತು ಮೊಬೈಲ್, ಹಣ
ಮಡಿಕೇರಿ, ಅಕ್ಟೋಬರ್ 05 : ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಮೊಬೈಲ್, ಸಿಮ್, ಮೊಬೈಲ್ ಚಾರ್ಜರ್ ಹಾಗೂ ಸಾವಿರಾರು ರು.ಹಣ ವಶಪಡಿಸಿಕೊಂಡಿದ್ದಾರೆ.
ಮಡಿಕೇರಿಯ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಿಯಮಬಾಹಿರವಾಗಿ ಕೆಲವು ವಸ್ತಗಳನ್ನು ಹೊಂದಿರುವುದು ಜೈಲ್ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆಸಿದ ದಿಢೀರ್ ದಾಳಿಯಲ್ಲಿ ಸಾವಿರಾರು ರು.ಹಣ ಹಾಗೂ ಹಲವು ಮೊಬೈಲ್ ಫೋನ್ ಗಳು ಪತ್ತೆಯಾಗಿವೆ.

ಜೈಲ್ ನ ಬ್ಯಾರಕ್ 1ರ ಶೌಚಾಲಯದಲ್ಲಿ ಒಂದು ಮೊಬೈಲ್ ಫೋನ್ ಹಾಗೂ 2,600 ರು ನಗದು, ಬ್ಯಾರಕ್ 2ರಲ್ಲಿ ಒಂದು ಮೊಬೈಲ್ ಹಾಗೂ 3,700 ನಗದು, ಬ್ಯಾರಕ್ 3ರಲ್ಲಿ ಒಂದು ಮೊಬೈಲ್ ಹಾಗೂ ರೂ. 440 ಮತ್ತು ಚಾರ್ಜರ್ ವಶವಾಗಿದೆ. ಬ್ಯಾರಕ್ 4ರಲ್ಲಿ ಪ್ರತ್ಯೇಕವಾಗಿ. 450 ಹಾಗೂ. 2835 ರು ನಗದು ದೊರೆತಿದ್ದರೆ, ಬ್ಯಾರಕ್ 5ರಲ್ಲಿ 2 ಮೊಬೈಲ್ ಫೋನ್ ಹಾಗೂ 8730 ನಗದು ಹಣ ಒಂದು ಎಕ್ಸಲ್ ಬ್ಲೇಡ್, ಒಂದು ಚಾಕು ಪತ್ತಯಾಗಿದೆ.
ಸ್ಯಾಮ್ಸಂಗ್ ಮೊಬೈಲ್ ಫೋನ್ ವಿಚಾರಣಾಧೀನ ಕೈದಿ ಹ್ಯಾರೀಸ್ ಎಂಬಾತನಿಗೆ ಸೇರಿದ್ದೆಂದು ಹೇಳಲಾಗಿದೆ. ಬ್ಯಾರಕ್ 5 ಮತ್ತು 6ರ ಮಧ್ಯೆ ಇರುವ ಪ್ಯಾಸೇಜ್ ನಲ್ಲಿ ಒಂದು ಮೊಬೈಲ್ ಫೋನ್, 3 ಚಾರ್ಜರ್, 2 ಮೊಬೈಲ್ ಫೋನ್ ನ ಬ್ಯಾಟರಿ ಪತ್ತೆಯಾಗಿದೆ. ಬ್ಯಾರಕ್ 6 ರಲ್ಲಿ 4270 ರು ನಗದು, 7ರಲ್ಲಿ . 980 ರು ಹಾಗೂ 9ರಲ್ಲಿ 2080 ರು ನಗದು ಹಣ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಒಳಗೊಂಡಂತೆ ತಹಶೀಲ್ದಾರ್ ಎ.ಎ. ಕುಸುಮ, ಡಿವೈಎಸ್ ಪಿ ಎಸ್.ಬಿ. ಛಬ್ಬಿ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್, ನಗರ ವೃತ್ತ ನಿರೀಕ್ಷಕ ಮೇದಪ್ಪ, ಡಿಸಿಐಬಿ ಇನ್ಸ್ ಪೆಕ್ಟರ್ ಲಿಂಗಪ್ಪ, ಜಿಲ್ಲಾ ಶಸಸ್ತ್ರದಳದ ವೃತ್ತ ನಿರೀಕ್ಷಕ ತಿಮ್ಮಪ್ಪ ಗೌಡ ಹಾಗೂ ಸಿಬ್ಬಂದಿ, ನಗರ ಠಾಣೆಯ ಎಸ್ಐ ಭರತ್, ಗ್ರಾಮಾಂತರ ಎಸ್ಐ ಶಿವಪ್ರಕಾಶ್, ಅಪರಾಧ ವಿಭಾಗದ ಎಸ್ಐ ಬೋಜಪ್ಪ, ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಮತ್ತು ಜೈಲು ಅಧೀಕ್ಷಕರು ಹಾಗೂ ಸಿಬ್ಬಂದಿಗಳು ಸುಮಾರು ಎರಡೂವರೆ ಗಂಟೆಗಳ ಕಾಲ ತಪಾಸಣೆ ನಡೆಸಿದ್ದಾರೆ.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications