ಕೊಡಗಿನಲ್ಲಿ ಪ್ರಾಣಕ್ಕೆ ಎರವಾಗಿರುವ ಅಲ್ಯುಮಿನಿಯಂ ಏಣಿಗಳು!
ಮಡಿಕೇರಿ, ಜುಲೈ 3: ಕೊಡಗಿನಲ್ಲಿ ಮರಕಪಾತ್, ಕರಿಮೆಣಸು ಕೊಯ್ಲು... ಹೀಗೆ ಮರ ಹತ್ತಲು ಬಹುಪಯೋಗಿಯಾಗಿದ್ದ ಅಲ್ಯಮಿನಿಯಂ ಏಣಿಗಳು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಜನರ ಪ್ರಾಣಕ್ಕೆ ಕುತ್ತು ತರುವಂತಾಗಿವೆ.
ಮೊದಲೆಲ್ಲ ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಮರ ಹತ್ತಲು, ಇನ್ನಿತರ ಕೃಷಿ ಕೆಲಸಗಳಿಗೆ ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಆದರೆ ಕ್ರಮೇಣ ಬಿದಿರು ನಾಶವಾಗಿದ್ದರಿಂದ ಮತ್ತು ತಂತ್ರಜ್ಞಾನ ಮುಂದುವರೆದ ಪರಿಣಾಮ ಬಿದಿರು ಏಣಿಗಳ ಬದಲಾಗಿ ಅಲ್ಯುಮಿನಿಯಂ ಏಣಿಗಳು ಮಾರುಕಟ್ಟೆಗೆ ಬಂದವು. ಅವುಗಳ ಬಳಕೆ ಸುಲಭ ಮತ್ತು ಹೆಚ್ಚು ಬಾಳಿಕೆ ಬರುತ್ತವೆ ಎಂಬ ಕಾರಣಕ್ಕೆ ಹೆಚ್ಚಿನ ಬೆಳೆಗಾರರು ಅಲ್ಯುಮಿನಿಯಂ ಏಣಿಗಳ ಬಳಕೆ ಶುರು ಮಾಡಿದರು.
ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಕಾಡುಕೋಣ ಸಾವು
ಹೆಚ್ಚಿನವರು ಅಲ್ಯುಮಿನಿಯಂ ಏಣಿಗಳನ್ನು ಖರೀದಿಸಿ ತಮ್ಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳತೊಡಗಿದರು. ಆದರೆ ಇದೀಗ ಈ ಏಣಿಗಳೆಂದರೆ ಭಯಪಡುವಂತಹ ಪರಿಸ್ಥಿತಿ ಬಂದಿದೆ. ಕಾರಣ, ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುಮಾರು ಮೂವತೈದು ಮಂದಿ ಇದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಕ್ಕೂ ಅಲ್ಯುಮಿನಿಯಂ ಏಣಿಗೂ ಜನ ಪ್ರಾಣ ಕಳೆದುಕೊಳ್ಳುವುದಕ್ಕೂ ಏನು ಸಂಬಂಧ ಎಂಬ ಅಚ್ಚರಿಯ ಪ್ರಶ್ನೆ ಹುಟ್ಟುವುದು ಸಹಜ. ಅದಕ್ಕೆ ಉತ್ತರವೂ ಇಲ್ಲಿದೆ.
ಇಲ್ಲಿರುವ ಹೆಚ್ಚಿನ ಕಾಫಿ ತೋಟಗಳ ನಡುವೆ ವಿದ್ಯುತ್ ಸಂಪರ್ಕ ಹಾದು ಹೋಗಿದೆ. ತೋಟದ ಮಾಲೀಕರು ಕೆಲಸಗಾರರಿಗೆ ಈ ಬಗ್ಗೆ ಮಾಹಿತಿ ನೀಡುವುದಿಲ್ಲ. ಇನ್ನು ಕೆಲವೊಮ್ಮೆ ಕೆಲಸಗಾರರ ನಿರ್ಲಕ್ಷ್ಯ, ಬೇಜವಾಬ್ದಾರಿತನ ಕೂಡ ದುರಂತಕ್ಕೆ ಸಾಕ್ಷಿಯಾಗಿದೆ. ಬಹಳಷ್ಟು ಕೂಲಿ ಕಾರ್ಮಿಕರು ಅಲ್ಯುಮಿನಿಯಂ ಏಣಿ ಬಳಸಿ ಕರಿಮೆಣಸು ಕೊಯ್ಲು, ಮರಕಪಾತ್ ಮಾಡುವಾಗ ತೋಟದ ನಡುವೆ ವಿದ್ಯುತ್ ತಂತಿ ಹಾದು ಹೋಗಿದೆಯಾ ಎಂದು ತಲೆ ಎತ್ತಿಯೂ ನೋಡುವುದಿಲ್ಲ. ಒಂದಿಷ್ಟು ಜಾಗ್ರತೆ ವಹಿಸುವುದಿಲ್ಲ. ತಾವು ಮರಹತ್ತಲು ತಂದ ಅಲ್ಯುಮಿನಿಯಂ ಏಣಿಯನ್ನು ತಮ್ಮ ಪಾಡಿಗೆ ಎತ್ತಿಕೊಂಡು ಹೋಗುತ್ತಿರುತ್ತಾರೆ. ಈ ಸಂದರ್ಭ ಕೆಲವೊಮ್ಮೆ ಏಣಿ ತೋಟದ ನಡುವೆ ಹಾದು ಹೋದ ವಿದ್ಯುತ್ ತಂತಿಗೆ ತಗುಲಿ ಅದನ್ನು ಹೊತ್ತೊಯ್ಯುತ್ತಿದ್ದ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಾರೆ. ಈ ಸಂದರ್ಭ ಜತೆಗಿದ್ದವರು ಕೂಡ ಪ್ರಾಣ ಕಳೆದುಕೊಂಡ ನಿದರ್ಶನವಿದೆ. ಕೊಡಗಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕೂವರೆ ವರ್ಷದ ಅವಧಿಯಲ್ಲಿ ಸುಮಾರು 35 ಮಂದಿ ಸಾವನ್ನಪ್ಪಿದ್ದಾರೆ.
ಅಲ್ಯೂಮಿನಿಯಂ ಏಣಿ ಲೋಹವಾಗಿರುವುದರಿಂದ ವಿದ್ಯತ್ ವಾಹಕಗಳಾಗಿದ್ದು, ಎತ್ತರ ಸಾಮಾನ್ಯವಾಗಿ 20 ಅಡಿಗಿಂತಲೂ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ನಮಗೇ ಗೊತ್ತಿಲ್ಲದಂತೆ ತೋಟದ ನಡುವೆ ಕೊಂಡೊಯ್ಯುವಾಗ ವಿದ್ಯುತ್ ಸ್ಪರ್ಶವಾಗಿ ದುರಂತಕ್ಕೆ ದಾರಿ ಮಾಡಿಕೊಡುತ್ತಿದೆ. ಹೀಗಾಗಿ ಈ ಅಲ್ಯುಮಿನಿಯಂ ಏಣಿಗಳ ಬದಲಾಗಿ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ವಿದ್ಯುತ್ ನಿರೋಧಕ ಏಣಿಗಳನ್ನು ಬಳಸಿ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಮತ್ತು ಸೆಸ್ಕ್ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಇನ್ನಾದರೂ ತೋಟದ ಕಾರ್ಮಿಕರು ಮತ್ತು ಮಾಲೀಕರು ಅಲ್ಯುಮಿನಿಯಂ ಏಣಿ ಬಳಸುವ ಸಂದರ್ಭ ಎಚ್ಚರಿಕೆ ವಹಿಸಬೇಕಾಗಿದೆ.