ಭಾಗಮಂಡಲದಲ್ಲಿ ಮಳೆಗಾಗಿ ಯಜ್ಞ: ಸ್ಥಳೀಯರ ಅಸಮಾಧಾನ
ಭಾಗಮಂಡಲ, ಸೆಪ್ಟೆಂಬರ್ 15: ಮಳೆ ಬಾರದೆ ಕಾವೇರಿ ಕಣಿವೆಯಲ್ಲಿ ತಲೆದೋರಿರುವ ಸಮಸ್ಯೆ ಪರಿಹಾರಕ್ಕೆ ಬೆಂಗಳೂರಿನ ಪ್ರಕೃತಿ ಫೌಂಡೇಷನ್ ಭಾಗಮಂಡಲದಲ್ಲಿ ಕೈಗೊಂಡಿದ್ದ ಪರ್ಜನ್ಯ ವೃಷ್ಟಿ ಯಜ್ಞಕ್ಕೆ ಕೆಲವರು ಅಡ್ಡಿಪಡಿಸಿದ ಘಟನೆ ಬುಧವಾರ ನಡೆದಿತ್ತು. ಆ ಬಳಿಕ ಕ್ಷೇತ್ರದಲ್ಲಿ ಅಪಚಾರವಾಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದು, ಯಜ್ಞ ಮುಂದುವರೆದಿದೆ.
ಸೆ.11ರಿಂದಲೇ ಬೆಂಗಳೂರಿನ ಪ್ರಕೃತಿ ಫೌಂಡೇಷನ್ ಪರ್ಜನ್ಯ ವೃಷ್ಟಿ ಯಜ್ಞವನ್ನು ಭಾಗಮಂಡಲದಲ್ಲಿ ಆರಂಭಿಸಿ (ಸೆ.15) ಗುರುವಾರ ಮುಗಿಸುವುದರಲ್ಲಿತ್ತು. ಈ ಯಜ್ಞಕ್ಕಾಗಿ ಅರ್ಚಕರನ್ನು ಉತ್ತರ ಭಾರತದ ಕಡೆಯಿಂದ ಕರೆಸಿ, ಸುಮಾರು ಐದಾರು ಲಕ್ಷ ರು. ಖರ್ಚು ಮಾಡಲಾಗಿತ್ತು.[ಸೈಟು ಮಾರಿದ್ದ 38 ಲಕ್ಷ ದರೋಡೆ ಮಾಡಿದ್ದವರ ಬಂಧನ]
ಆದರೆ, ಬುಧವಾರ ಕೆಲವು ಸ್ಥಳೀಯರು ಯಜ್ಞ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಭಾಗಮಂಡಲಕ್ಕೆ ಕಳೆದ ವರ್ಷಾಂತ್ಯಕ್ಕೆ 210 ಇಂಚು ಮಳೆಯಾಗಿದ್ದರೆ, ಈ ವರ್ಷ ಈಗಾಗಲೇ 170 ಇಂಚು ಮಳೆಯಾಗಿದೆ. ಇನ್ನೂ ಮಳೆಯಾಗುತ್ತದೆ. ಇಲ್ಲಿ ಹೆಚ್ಚು ಮಳೆಯಾದರೆ ನಮ್ಮ ಬೆಳೆ ಕೊಚ್ಚಿ ಹೋಗಿ ನಷ್ಟವಾಗುತ್ತದೆ. ಎಲ್ಲಿ ಅಗತ್ಯವಿದೆಯೋ ಅಲ್ಲಿ ಯಜ್ಞ ಮಾಡಿ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಜ್ಞದಲ್ಲಿ ಪಾಲ್ಗೊಂಡಿದ್ದ ಸ್ಥಳೀಯರಾದ ಸೋಮಶೇಖರ್ ನಾಯಕ್ ಸೇರಿದಂತೆ ಹಲವರು ಭಾಗಮಂಡಲ ಪೊಲೀಸ್ ಠಾಣೆಗೆ ತೆರಳಿ, ಮಧ್ಯ ಪ್ರವೇಶಿಸುವಂತೆ ಕೋರಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೀರ್ಘ ಮಾತುಕತೆ ನಡೆಸಿದ ಬಳಿಕ, ಈಗಾಗಲೇ ಯಜ್ಞ ಪ್ರಾರಂಭಗೊಂಡು ಗುರುವಾರ ಮುಕ್ತಾಯ ಆಗುವುದರಿಂದ ಕ್ಷೇತ್ರದಲ್ಲಿ ಅಪಚಾರವಾಗುವದು ಬೇಡ ಎಂದು ಬುದ್ಧಿವಾದದ ಮಾತು ಹೇಳಿ ಕಳುಹಿಸಿದ್ದಾರೆ.[ಹೋಂ ಸ್ಟೇನಲ್ಲಿ ವೇಶ್ಯವಾಟಿಕೆ, ಜೆಡಿಎಸ್ ಶಾಸಕರ ಮಗ ಬಂಧನ]
ಇನ್ನು ಮುಂದೆ ಇಂತಹ ಕಾರ್ಯಗಳನ್ನು ನಡೆಸಬೇಕಾದರೆ ದೇವಾಲಯ ಆಡಳಿತದಿಂದ ಅನುಮತಿ ಪಡೆದು, ಸ್ಥಳೀಯರ ಗಮನಕ್ಕೆ ತರುವಂತೆ ಕೆಲವರು ಸಲಹೆ ನೀಡಿದ್ದಾರೆ. ಬಳಿಕ ನಾರಾಯಣಾಚಾರ್ ಅವರು ಯಜ್ಞವೇತ್ತಾರರಾದ ಪುರೋಹಿತರನ್ನು ಸಂಪರ್ಕಿಸಿ, ಪರ್ಜನ್ಯ ಯಜ್ಞವನ್ನು ಗುರುವಾರ ಮುಂದುವರಿಸುವಂತೆ ಹೇಳಿದ್ದಾರೆ.
ಯಜ್ಞದ ಬಳಿಕ ಕೊಡಗಿನಲ್ಲಿ ಮಳೆ ಸುರಿದಿದ್ದು, ಇದು ಭಾಗಮಂಡಲದಲ್ಲಿ ಮಳೆಗಾಗಿ ನಡೆದ ಪರ್ಜನ್ಯ ವೃಷ್ಟಿ ಯಜ್ಞದ ಎಫೆಕ್ಟ್ ಎಂದು ಕೆಲವರು ಹೇಳುತ್ತಿದ್ದಾರೆ. ಕೆಲವೆಡೆ ಉತ್ತಮವಾಗಿ ಮಳೆ ಸುರಿದಿದೆ. ಭಾಗಮಂಡಲ ಸುತ್ತ ಮುತ್ತ, ಮಡಿಕೇರಿ ಬಳಿಯ ತಾಳತ್ಮನೆಯಲ್ಲಿ ಕೆಂಪು ಮಳೆ ಸುರಿದಿದೆ ಎಂಬ ಮಾಹಿತಿಯನ್ನು ಕೆಲವರು ನೀಡಿದ್ದಾರೆ.[ಮಳೆ ಕಡಿಮೆ ಆಗಿದ್ದಕ್ಕೆ ತಲಕಾವೇರಿಗಾದ ಅಪಚಾರ ಕಾರಣವೇ?]
ಭಾಗಮಂಡಲದ ಸೂರ್ತಲೆ ಜಯಂತ್, ನಿಡ್ಯಮಲೆ ಪ್ರಕಾಶ್ ಅವರ ಮನೆಯ ಅಂಗಳದಲ್ಲಿದ್ದ ಪಾತ್ರೆಗಳಲ್ಲಿ ಕೆಂಪು ನೀರು ಸಂಗ್ರಹವಾಗಿದೆ. ಅಂಗಳದಲ್ಲೂ ಕೆಂಪು ನೀರಿನ ಕಲೆಗಳು ಗೋಚರಿಸಿವೆ. ಇತ್ತ ತಾಳತ್ಮನೆಯ ರಾಜ್ ಕುಮಾರ್ ಹಾಗೂ ಆನಂದ ಎಂಬವರ ಮನೆಯ ಅಂಗಳದಲ್ಲಿ ಇರಿಸಲಾಗಿದ್ದ ಡ್ರಂಗಳಲ್ಲೂ ಕೆಂಪು ನೀರು ಸಂಗ್ರಹವಾಗಿದೆ. ಹೀಗಾಗಿ ಇವೆಲ್ಲ ಯಜ್ಞದ ಪ್ರತಿಫಲ ಎಂಬ ಮಾತುಗಳು ಕೇಳಿ ಬರುತ್ತಿವೆ.