National Consumer Day: ಗ್ರಾಹಕರೇ ಮೋಸ, ವಂಚನೆಗೆ ತುತ್ತಾಗಬೇಡಿ: ಗೌರಮ್ಮಣ್ಣಿ
ಮಡಿಕೇರಿ, ಜ.11 : ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, 'ಗ್ರಾಹಕರೇ ದೊರೆಗಳು' ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಗೌರಮ್ಮಣ್ಣಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಗರದ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ 'ರಾಷ್ಟ್ರೀಯ ಗ್ರಾಹಕರ ದಿನಾಚರಣೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರಮ್ಮಣ್ಣಿ ಮಾತನಾಡಿದ್ದಾರೆ.
ಕೊಡಗು ಜಿಲ್ಲಾ ಪಂಚಾಯತಿಯಲ್ಲಿ ಕೆಲಸ ಖಾಲಿ ಇದೆ. ಜ.23ರ ತನಕ ಅರ್ಜಿ ಹಾಕಿ
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ವಸ್ತುಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಗ್ರಾಹಕರಿಗೆ ಮೋಸ, ವಂಚನೆ ಉಂಟಾದಲ್ಲಿ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜಾಹೀರಾತು ನೋಡಿ ವಸ್ತುಗಳನ್ನು ಖರೀದಿ ಮಾಡಬಾರದು. ಅದರ ಗುಣಮಟ್ಟ ಪರಿಶೀಲಿಸಿ ಕೊಳ್ಳುವಂತಾಗಬೇಕು. ಜಾಹೀರಾತಿಗೆ ಯಾರೂ ಸಹ ಮರಳಾಗಬಾರದು ಎಂದು ಅವರು ಹೇಳಿದ್ದಾರೆ.
ಯಾವ ಸ್ಥಳದಲ್ಲಿಯೇ ವಸ್ತುಗಳನ್ನು ಕೊಂಡಿದ್ದರೂ ಸಹ, ತಾವು ವಾಸಿಸುವ ಸ್ಥಳದಲ್ಲಿಯೇ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದು. ಗ್ರಾಹಕರು ಎಷ್ಟೇ ಜಾಗೃತರಾಗಿದ್ದರೂ ಸಹ ಮೈಮರೆಯುತ್ತಾರೆ. ಆದ್ದರಿಂದ ವಸ್ತುಗಳ ಬೆಲೆ ನಿಖರವಾಗಿ ನಮೂದು ಆಗಿರುವ ಬಗ್ಗೆ ಗಮನಿಸಬೇಕು. ಜೊತೆಗೆ ಬಳಕೆ ಅವಧಿ ಪರಿಶೀಲಿಸಬೇಕು. ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು ಎಂದು ಗೌರಮ್ಮಣ್ಣಿ ಸಲಹೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ಗ್ರಾಹಕರ ವೇದಿಕೆಗೆ ಇದುವರೆಗೆ 4,164 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 64 ಪ್ರಕರಣಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಇದೆ. ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕರ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಪರಿಹಾರ ಪಡೆಯಬಹುದಾಗಿದೆ. ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂ. ವರೆಗೆ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರೇಣುಕಾಂಭ ಅವರು ಮಾತನಾಡಿ ವೈದ್ಯ ವೃತ್ತಿಯನ್ನು ಹಣ, ಅಂತಸ್ತಿನಿಂದ ಅಳೆಯುವಂತದ್ದಲ್ಲ, ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ನೋವು ಬಂದಾಗ ವೈದ್ಯರ ಬಳಿ ಹೋಗುತ್ತೇವೆ. ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ಆದ್ದರಿಂದ ಸಮಾಜಕ್ಕೆ ಪ್ರತಿಯೊಬ್ಬರೂ ಒಳಿತು ಮಾಡಬೇಕು. ಯಾರೂ ಸಹ ವಂಚಿಸಬಾರದು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೋಸ ಹೋಗುವವರು ಇರುತ್ತಾರೆ. ಅದನ್ನು ತಪ್ಪಿಸಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಇರಬೇಕು. ಪದಾರ್ಥಗಳನ್ನು ಕೊಳ್ಳುವಾಗ ಎಚ್ಚರವಹಿಸಬೇಕು. ಅನ್ಯಾಯ ಸಹಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ವಕೀಲರಾದ ಎಂ.ಎ.ನಿರಂಜನ ಮಾತನಾಡಿ ಎಲ್ಲಾ ಹಂತದಲ್ಲಿಯೂ, ಎಲ್ಲಾ ಕ್ಷೇತ್ರದಲ್ಲಿಯೂ ಗ್ರಾಹಕರ ಸ್ನೇಹಿಯಾಗಿರಬೇಕು. ನಮ್ಮ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಮತ್ತೊಬ್ಬರ ಗ್ರಾಹಕ ಹಕ್ಕು ಸಂರಕ್ಷಣೆ ಮಾಡಬಹುದಾಗಿದೆ. ಗ್ರಾಹಕರ ವೇದಿಕೆಯಲ್ಲಿ ಗ್ರಾಹಕರಿಗೆ ನ್ಯಾಯ ಒದಗಿಸಲಾಗುತ್ತದೆ. ಉಚಿತ ಸೇವೆ ಅಥವಾ ದಾನ ಪಡೆಯುವ ಪದಾರ್ಥಗಳಿಗೆ ಗ್ರಾಹಕರ ಹಕ್ಕು ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರೂ ಜಾಗೃತಿಯಿಂದ ಕೆಲಸ ಮಾಡಿದರೆ ಗ್ರಾಹಕರಿಗೆ ಮೋಸ, ವಂಚನೆ ಕಡಿಮೆಯಾಗುತ್ತದೆ. ಯಾವುದೇ ವಸ್ತು ಕೊಳ್ಳುವಾಗ ವಾರಂಟಿ ಮತ್ತು ಗ್ಯಾರಂಟಿಯನ್ನು ಗಮನಿಸಬೇಕು. ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ಎರಡು ವರ್ಷದವರೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ತಿಳಿದೋ, ತಿಳಿಯದೆಯೋ ಮೋಸ ವಂಚನೆಗೆ ತುತ್ತಾಗುತ್ತೇವೆ. ಮೋಸ ವಂಚನೆಗೆ ತುತ್ತಾದಲ್ಲಿ, ಗ್ರಾಹಕರ ವೇದಿಕೆಗೆ ದೂರು ನೀಡಿ ಪರಿಹಾರ ಪಡೆಯುವಂತಾಗಬೇಕು ಎಂದಿದ್ದಾರೆ.
ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ.ಚಂಗಪ್ಪ ಅವರು ಮಾತನಾಡಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವು ಜಿಲ್ಲೆಯ 51 ಪ್ರೌಢಶಾಲೆಗಳಲ್ಲಿ ಗ್ರಾಹಕರ ಕ್ಲಬ್ಗಳನ್ನು ಆರಂಭಿಸಿ, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.