ನೆನಪಾಗಿ ಕಾಡುವ ಕೊಡಗಿನ ಆ ಸುಂದರ ಮಳೆಗಾಲ

ಮಡಿಕೇರಿ, ಜೂನ್ 01: ಎಡೆಬಿಡದೆ ಸುರಿಯುವ ಮಳೆ. ಆ ಮಳೆಗೆ ಅಂಜದೆ ತಲೆಗೆ ಕೊರಂಬು(ಗೊರ್ಗ) ಹಾಕಿಕೊಂಡು ದುಡಿಯುವ ರೈತಾಪಿ ವರ್ಗ. ತುಂಬಿ ಹರಿಯುವ ತೋಡು, ತೊರೆ, ಹೊಳೆಗಳು. ಬೆಟ್ಟಗುಡ್ಡ ಎಲ್ಲೆಂದರಲ್ಲಿ ಜಲ ಹುಟ್ಟಿ ಹರಿದು ಬರುವ ನೀರು..

ಇದು ಕೊಡಗಿನ ಈಗಿನ ದೃಶ್ಯವಂತೂ ಅಲ್ಲವೇ ಅಲ್ಲ. ಇಂತಹ ದೃಶ್ಯಗಳು ಕಂಡು ಬರುತ್ತಿದ್ದದ್ದು ಮೂರ್ನಾಲ್ಕು ದಶಕಗಳ ಹಿಂದೆ. ಆಗಿನ್ನೂ ಜನರ ಬದುಕು ಆಧುನಿಕತೆಗೆ ತೆರೆದುಕೊಂಡಿರಲಿಲ್ಲ. ಹೆಚ್ಚಿನ ಜನರು ಕೃಷಿಯನ್ನೇ ನಂಬಿದ್ದರು. ಅದನ್ನೇ ಮಾಡಿ ಬದುಕು ಕಂಡು ಕೊಂಡಿದ್ದರು. ಭತ್ತ ಇಲ್ಲಿನ ಪ್ರಧಾನ ಬೆಳೆಯಾಗಿತ್ತು. ಕಣ್ಣಾಯಿಸಿದುದ್ದಕ್ಕೂ ಭತ್ತದ ಗದ್ದೆಗಳು ಕಂಡು ಬರುತ್ತಿದ್ದವು. ಭತ್ತದ ಗದ್ದೆ ಹೆಚ್ಚು ಇದ್ದವನೇ ಶ್ರೀಮಂತ ಎಂದು ಪರಿಗಣಿಸಲಾಗುತ್ತಿತ್ತು.

ಕಷ್ಟವೋ? ಸುಖವೋ ತಮಗಿದ್ದ ಅಷ್ಟು ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದರು. ತಿಂಗಳಾನುಗಟ್ಟಲೆ ಸುರಿಯುವ ಮಳೆ, ಕೊರೆಯುವ ಚಳಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದರು. ಆಗಿನ ಮಳೆ ಅಂದರೆ ಅದು ಸಾಮಾನ್ಯ ಮಳೆಯಾಗಿರುತ್ತಿರಲಿಲ್ಲ. ಕೊಡಗಿನ ಇಡೀ ಪ್ರದೇಶ ಚಳಿಯಿಂದ ಥರಗುಟ್ಟುತ್ತಿತ್ತು. ಆ ಚಳಿ ಮಳೆಗೆ ಸೆಡ್ಡು ಹೊಡೆದು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಜನ ಕತ್ತಲಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುತ್ತಿದ್ದರು. ಬಿಸಿ ನೀರಿನ ಸ್ನಾನ ಮಾಡಿ ಬಳಿಕ ಬೆಂಕಿ ಕೆಂಡವನ್ನು ಅಗಷ್ಠಿಕೆಯಲ್ಲಿಟ್ಟುಕೊಂಡು ಚಳಿ ಕಾಯಿಸುತ್ತಿದ್ದರು.

ಒಂದಾನೊಂದು ಕಾಲದಲ್ಲಿ ಹೀಗಿತ್ತು ಮಳೆಗಾಲ!

ಒಂದಾನೊಂದು ಕಾಲದಲ್ಲಿ ಹೀಗಿತ್ತು ಮಳೆಗಾಲ!

ಪಟ್ಟಣದ ಕಡೆಗೆ ಮುಖ ಮಾಡದ ಜನ ಮಳೆಗಾಲಕ್ಕೆ ಮುನ್ನವೇ ಬೇಕಾದ ಪದಾರ್ಥಗಳನ್ನೆಲ್ಲ ತಂದು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳುತ್ತಿದ್ದರು. ತಿನ್ನಲು ಕುರುಕು ತಿಂಡಿಗಳು ಇರುತ್ತಲೇ ಇರಲಿಲ್ಲ. ಆಗೆಲ್ಲ ಬಾಯಿ ಆಡಿಸಲು ಹಲಸಿನ ಬೀಜವನ್ನು ಹುರಿದು ತಿನ್ನುತ್ತಿದ್ದರು. ಹೆಚ್ಚಿನ ಕುಟುಂಬಗಳು ಬಡತನದಲ್ಲಿಯೇ ಇದ್ದವು. ಹೊಟ್ಟೆಗೆ ಇದ್ದರೆ ಬಟ್ಟೆಗಿಲ್ಲದ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಮಾತಿನಂತೆ ಇರೋದ್ರಲ್ಲೇ ಜೀವನ ಸಾಗಿಸುತ್ತಿದ್ದರು. ತರಕಾರಿಗಾಗಿ ಪೇಟೆಗೆ ತೆರಳುತ್ತಿದ್ದದ್ದು ಅಪರೂಪ. ಮನೆಯ ಸುತ್ತಮುತ್ತ ಸಿಗುವ ಬಿದಿರು ಕಣಿಲೆ, ಕೆಸವಿನ ಸೊಪ್ಪು, ಅಣಬೆ, ಏಡಿ, ಮೀನು ಹೀಗೆ ಅದನ್ನೇ ಬಳಸಿಕೊಂಡು ಕಾಲ ಕಳೆಯುತ್ತಿದ್ದರು. ಇನ್ನು ಮಕ್ಕಳು ಶಾಲೆಗೆ ನಾಲ್ಕೈದು ಕಿ.ಮೀ. ದೂರ ನಡೆದುಕೊಂಡು ಹೋಗಬೇಕಿತ್ತು. ದಾರಿ ನಡುವೆ ಸಿಗುವ ನದಿಗಳಿಗೆ ಸೇತುವೆಗಳು ಇರುತ್ತಿರಲಿಲ್ಲ. ಗ್ರಾಮಸ್ಥರೇ ಮರದ ತುಂಡುಗಳನ್ನು ಹಾಕಿ ಮಾಡಿದ ಪಾಲದ ಮೇಲೆ ಎಚ್ಚರದ ಹೆಚ್ಚೆಯನ್ನಿಟ್ಟು ದಾಟಬೇಕಿತ್ತು. ಹೆತ್ತವರಿಗೆ ಬೆಳಿಗ್ಗೆ ಶಾಲೆಗೆ ಹೋದ ಮಕ್ಕಳು ಮನೆಗೆ ಬಂದು ತಲುಪುವ ತನಕ ನೆಮ್ಮದಿಯಿರುತ್ತಿರಲಿಲ್ಲ.

ಬದಲಾದ ಕಾಲದಲ್ಲಿ ಮಳೆಗಾಲ

ಬದಲಾದ ಕಾಲದಲ್ಲಿ ಮಳೆಗಾಲ

ಈಗ ಎಲ್ಲವೂ ಬದಲಾಗಿದೆ. ಮಳೆಗಾಲ ಎನ್ನವುದು ಮೊದಲಿನಂತಿಲ್ಲ. ಇವತ್ತು ಮಳೆಗಾಲವನ್ನು ಎದುರಿಸಲು ಜನರು ಕೂಡ ಸಜ್ಜಾಗಿದ್ದಾರೆ. ಭತ್ತದ ಗದ್ದೆಗಳು ಮಾಯವಾಗಿವೆ. ಜನರ ಬದಲಿಗೆ ಯಂತ್ರಗಳಲ್ಲಿ ಕೆಲಸ ಮಾಡುವುದು ಆರಂಭವಾಗಿದೆ. ಅದಕ್ಕಿಂತ ಹೆಚ್ಚಾಗಿ ಮೊದಲಿನಂತೆ ವಾರಗಟ್ಟಲೆ ಹನಿ ತುಂಡಾಗದಂತೆ ಮಳೆಯೂ ಸುರಿಯುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯೇ ಕಡಿಮೆಯಾಗಿದೆ. ವಾಡಿಕೆಯ ಮಳೆಯಾಗದೆ ಜನರ ಮುಖದಲ್ಲಿ ನೆಮ್ಮದಿಯಿಲ್ಲದಂತಾಗಿದೆ. ಅದರಲ್ಲೂ 2016ರಲ್ಲಿ ಬರ ಜಿಲ್ಲೆಯನ್ನು ಆವರಿಸಿತ್ತು. ಕಾವೇರಿ ಧುಮ್ಮಿಕ್ಕಿ ಹರಿಯದ ಕಾರಣ ಕೆ.ಆರ್.ಎಸ್. ಜಲಾಶಯ ಭರ್ತಿಯಾಗದೆ ರೈತಾಪಿ ವರ್ಗ ಕೃಷಿ ಚಟುವಟಿಕೆ ಮಾಡಲಾಗದೆ ಕೈಕಟ್ಟಿ ಕೂರುವಂತಾಗಿತ್ತು.

ರೈತರಲ್ಲಿ ಮೂಡಿದ ಹರ್ಷ

ರೈತರಲ್ಲಿ ಮೂಡಿದ ಹರ್ಷ

2017ರಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯ ಮಳೆಯಾಗಿತ್ತು. ಆದರೆ ಈ ಬಾರಿ ತಡವಾಗಿ ಮಳೆಯಾದರೂ ಕೊಡಗಿನಲ್ಲಿ ಆಶಾದಾಯಕ ಮಳೆಯಾಗುವುದರೊಂದಿಗೆ ಹರ್ಷ ತಂದಿದೆ. ಆಗಾಗ್ಗೆ ಮಳೆಯಾಗುವುದರೊಂದಿಗೆ ಎಲ್ಲರೂ ನೆಮ್ಮದಿಯುಸಿರು ಬಿಡುವಂತೆ ಮಾಡಿದೆ. ಈ ಸಲ ಕೊಡಗಿನಲ್ಲಿ ಆಶಾದಾಯಕ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿರುವುದರಿಂದ ಜನ ಪಟ್ಟಣಗಳಿಗೆ ತೆರಳಿ ಮಳೆಗಾಲಕ್ಕೆ ಅಗತ್ಯವಾದ ಕೊಡೆ, ಗಂಬೂಟ್, ಪ್ಲಾಸ್ಟಿಕ್ ಹ್ಯಾಟ್, ಇನ್ನಿತರ ವಸ್ತುಗಳನ್ನು ಖರೀದಿಸಿ ತರುವುದು ಕಂಡು ಬರತೊಡಗಿದೆ.

ಜಿಲ್ಲಾಡಳಿತದಿಂದ ಸುರಕ್ಷತಾಕ್ರಮ

ಜಿಲ್ಲಾಡಳಿತದಿಂದ ಸುರಕ್ಷತಾಕ್ರಮ

ಜಿಲ್ಲೆಯ ಭಾಗಮಂಡಲ, ಬಲಮುರಿ, ನೆಲ್ಯಹುದಿಕೇರಿ ಮುಂತಾದ ನದಿ ತೀರದ ಪ್ರದೇಶಗಳಲ್ಲಿ ವಾಸವಿರುವ ಜನರಲ್ಲಿ ಆತಂಕವೂ ಆರಂಭವಾಗಿದೆ. ಏಕೆಂದರೆ ಮಳೆ ಬಂದು ಕಾವೇರಿ ನದಿ ಉಕ್ಕಿ ಹರಿದಾಗ ನದಿ ತೀರದಲ್ಲಿರುವ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗುತ್ತವೆ. ಈ ವೇಳೆ ತಾವು ಕಷ್ಟಪಟ್ಟು ದುಡಿದುದೆಲ್ಲವನ್ನೂ ಬಿಟ್ಟು ಗಂಜಿ ಕೇಂದ್ರ ಸೇರಬೇಕಾಗುತ್ತದೆ. ಹೀಗಾಗಿ ತಮ್ಮ ಬದುಕು ನೀರು ಪಾಲಾಗುತ್ತದೆಯಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈಗಿನಿಂದಲೇ ಜಿಲ್ಲಾಡಳಿತ ಮಳೆಗಾಲದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+