ಹಾರಂಗಿಗೆ ಬಾಗಿನ ಅರ್ಪಿಸಿದ ಸಚಿವ ಎಂಆರ್ ಸೀತಾರಾಂ
ಮಡಿಕೇರಿ, ಜುಲೈ 24: ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿ ಭರ್ತಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಬಾಗಿನ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯಗಳಲ್ಲಿ ಹಾರಂಗಿ ಜಲಾಶಯ ಭರ್ತಿಯಾಗಿದೆ. ಕಾವೇರಿ ಕಣಿವೆ ಸೇರಿದಂತೆ ನಾಡಿನಲ್ಲಿ ಉತ್ತಮ ಮಳೆಯಾಗಿ ನಾಗರಿಕರಲ್ಲಿ ಸುಖ-ಸಮೃದ್ಧಿ ತರುವಂತಾಗಲಿ ಎಂದು ಆಶಿಸಿದರು.
ಹಾರಂಗಿ ಜಲಾಶಯದ ಉದ್ಯಾನವನ ವೀಕ್ಷಣೆಗೆ ಇಂದಿನಿಂದಲೇ ಅವಕಾಶ ನೀಡಲಾಗಿದೆ. ಉದ್ಯಾನವನಕ್ಕೆ ಆರು ತಿಂಗಳವರೆಗೆ ಉಚಿತ ಪ್ರವೇಶಾವಕಾಶ ನೀಡಲಾಗುವುದು. ನಂತರ ಶುಲ್ಕ ನಿಗದಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಹಾರಂಗಿ ಜಲಾಶಯ ಸಲಹಾ ಸಮಿತಿ ಸಭೆಯು ಸೋಮವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ಆ ಸಭೆಯಲ್ಲಿ ಕಂಬಿಬಾಣೆ ರಸ್ತೆ ಅಭಿವೃದ್ಧಿ, ಚಿಕ್ಲಿಹೊಳೆ ಜಲಾಶಯದಿಂದ ಕಾಲುವೆಗೆ ನೀರು ಹರಿಸುವುದು ಮತ್ತಿತರ ನಾನಾ ಅಭಿವೃದ್ಧಿ ಕಾರ್ಯಗಳ ಸಂಬಂಧ ಚರ್ಚೆ ನಡೆಯಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೃಷಿಕರು, ಕಾರ್ಮಿಕರು, ಹೀಗೆ ಎಲ್ಲರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ ಅವರು ಕೂಡ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದರು. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ ಸಿ.ಇ.ಓ ಚಾರುಲತಾ ಸೋಮಲ್, ಉಪ ವಿಭಾಗಧಿಕಾರಿ ಡಾ.ನಂಜುಂಡೇ ಗೌಡ, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಲತೀಫ್, ಪ್ರಮುಖರಾದ ಬಿ.ಟಿ.ಪ್ರದೀಪ್, ಕೆ.ಎಂ.ಲೋಕೇಶ್ ಮತ್ತಿತರ
ು ಇದ್ದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications