ಮಡಿಕೇರಿಯ 'ಸನ್ನಿಸೈಡ್'ಗೆ ಬಂತು ಮಿಗ್ 20 ಯುದ್ಧ ವಿಮಾನ; ಕೊಡಗಿನ ವೀರಯೋಧನ ಸಾಹಸಗಾಥೆಗೆ ಸಾಕ್ಷಿ
ಕೊಡಗಿನ
ಮುಖ್ಯಪಟ್ಟಣ ಮಡಿಕೇರಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನನ್ನು ಎರಡು ಪ್ರಮುಖ ಪ್ರತಿಮೆಗಳು ಸೆಳೆಯುತ್ತವೆ. ಒಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಮತ್ತೊಂದು ಜನರಲ್ ಕೆ.ಎಸ್.ತಿಮ್ಮಯ್ಯನವರದ್ದು. id="toptextpromo"> id='are-slot-1' class='oiad oi-axt oiadv'>ಅದರಲ್ಲೂ
ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಹಲವು ಘಟನೆಗಳಿಗೆ ಸಾಕ್ಷಿಯಾಗಿದ್ದು, ನಗರದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ. ಇದೀಗ ಅವರ ನಿವಾಸ 'ಸನ್ನಿಸೈಡ್' ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮ್ಯೂಸಿಯಂ ಆಗಿ ಪರಿವರ್ತಿಸಿದ್ದು, ಕೊಡಗಿನ ವೀರಯೋಧನ ಸಾಹಸಗಾಥೆಗೆ ಸಾಕ್ಷಿಯಾಗುತ್ತಿದೆ. id='are-slot-2' class='oiad oi-axt oiadv'>
5.5 ಕೋಟಿ ರೂ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ
ಜನರಲ್ ತಿಮ್ಮಯ್ಯ ಅವರ ನಿವಾಸ ಸನ್ನಿಸೈಡ್, ಹಿಂದೆ ಸಾರಿಗೆ ಇಲಾಖೆಯ ಕಚೇರಿಯಾಗಿತ್ತು. ತದ ನಂತರ ಇದನ್ನು ಮ್ಯೂಸಿಯಂ ಮಾಡಬೇಕೆಂಬ ಒತ್ತಾಯಗಳು ಕೇಳಿ ಬಂದು ಹೋರಾಟಗಳೂ ನಡೆದವು. ಕೊನೆಗೂ ಸರ್ಕಾರ ಸುಮಾರು 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಅವರ ಹಳೆಯ ಮನೆಯನ್ನು ನವೀಕರಿಸಿ ಮ್ಯೂಸಿಯಂ ಮಾಡಲು ಮುಂದಾಯಿತು. ಇನ್ನು ಜನರಲ್ ತಿಮ್ಮಯ್ಯ ಫೋರಂನಲ್ಲಿನ ನಿವೃತ್ತ ಸೇನಾಧಿಕಾರಿಗಳು ಮ್ಯೂಸಿಯಂ ನಿರ್ಮಾಣದ ನೇತೃತ್ವ ವಹಿಸಿದ್ದರಲ್ಲದೆ, ಮ್ಯೂಸಿಯಂನ ರೂಪುರೇಷೆಗಳನ್ನು ತಯಾರಿಸಿ ಒಂದು ಮ್ಯೂಸಿಯಂ ಹೇಗಿರಬೇಕು ಮತ್ತು ಅಲ್ಲಿ ಏನಿರಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿ ಸಮರ್ಪಕ ರೀತಿಯಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿದ್ದು ಈ ಬಾರಿಯ ಮಾರ್ಚ್ 31ರಂದು ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬದ ದಿನದಂದು ಮ್ಯೂಸಿಯಂ ಲೋಕಾರ್ಪಣೆಗೊಳ್ಳಲಿದೆ.

ಮ್ಯೂಸಿಯಂನಲ್ಲಿ ಮಿಗ್ 20 ಯುದ್ಧ ವಿಮಾನ
ಮ್ಯೂಸಿಯಂ ಅನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಮಿಗ್ 20 ಯುದ್ಧ ವಿಮಾನವನ್ನು ತರಿಸಲಾಗಿದ್ದು, ಅದನ್ನು ಮ್ಯೂಸಿಯಂನಲ್ಲಿರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಇದನ್ನು ಇಂಡಿಯನ್ ಏರ್ ಫೋರ್ಸ್ ವಿಭಾಗದ ಅಧಿಕಾರಿಗಳು ಉಚಿತವಾಗಿ ನೀಡಿದ್ದು, ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರ ಪ್ರಯತ್ನದ ಫಲ ಇದಾಗಿದೆ. ಇದನ್ನು ಲಾರಿಯಲ್ಲಿ ತರಲಾಗಿದ್ದು, ಜನವರಿ 5ರಂದು ವಿಮಾನ ಹೊತ್ತು ಹೊರಟ ಲಾರಿ ಶನಿವಾರ (ಜ.11) ದಂದು ಮಡಿಕೇರಿ ತಲುಪಿದೆ. ಇದಲ್ಲದೆ ಭೂಸೈನ್ಯದ ಟ್ಯಾಂಕರ್ ಕೂಡ ತರಿಸಲಾಗಿದ್ದು, ಈ ಟ್ಯಾಂಕರ್ 1971ರ ಭಾರತ ಪಾಕ್ ಯುದ್ಧದಲ್ಲಿ ಭಾಗಿಯಾಗಿತ್ತು.

"ಕೈಸರ್-ಇ-ಹಿಂದ್" ಪ್ರಶಸ್ತಿಗೆ ಭಾಜನರಾದ ಜನರಲ್ ಎಸ್.ತಿಮ್ಮಯ್ಯ
ಜನರಲ್ ಎಸ್.ತಿಮ್ಮಯ್ಯ (ಟಿಮ್ಸ್) ಅವರ ಬಗ್ಗೆ ಹೇಳುವುದಾದರೆ, 1906ರ ಮಾರ್ಚ್ 31ರಂದು ಮಡಿಕೇರಿಯ ಸನ್ನಿಸೈಡ್ ನಿವಾಸದಲ್ಲಿ ಅವರು ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಕೂನೂರಿನ ಸೆಂಟ್ ಜೋಸೆಫ್ ಶಾಲೆ ಮತ್ತು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರೈಸಿದ ಅವರು 1922ರಲ್ಲಿ ಡೆಹರಾಡೂನ್ ನ ಮಿಲಿಟರಿ ಶಾಲೆಗೆ ಸೇರಿದರು. 1926ರಲ್ಲಿ ರಾಯಲ್ ಇಂಡಿಯನ್ ಆರ್ಮಿಯ ಸೆಕೆಂಡ್ ಲೆಫ್ಟಿನೆಂಟ್ ಆಗಿ ಪದವಿ ಪಡೆದರು. ತದನಂತರ ಸ್ಕಾಟಿಷ್ ಯೂನಿಟ್ನ ಐಲ್ಯಾಂಡ್ ಇನ್ಫೆಂಟ್ರಿಯಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು. ಈ ಸಂದರ್ಭ ನೀನಾ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ಪೀಕರಿಸಿದ ತಿಮ್ಮಯ್ಯ ಅವರು ಕ್ವೇಟಾದಲ್ಲಿ 1935ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭ ಪತ್ನಿಯೊಡಗೂಡಿ ಸಲ್ಲಿಸಿದ ಸೇವೆಗಾಗಿ "ಕೈಸರ್-ಇ-ಹಿಂದ್" ಪ್ರಶಸ್ತಿಗೆ ಭಾಜನರಾದರು.
1944ರ ಮಾರ್ಚ್ ನಲ್ಲಿ ಹೈದಾರಬಾದ್ ರೆಜಿಮೆಂಟಿನ ಕಮಾಡಿಂಗ್ ಆಫೀಸರ್ ಆಗಿ 1946ರಲ್ಲಿ ಜಪಾನಿನಲ್ಲಿ ಭಾರತೀಯ ಇನ್ಫೆಂಟ್ರಿ ಬ್ರಿಗೆಡನ್ನು ಮುನ್ನಡೆಸಿದರು.

1965ರ ಡಿಸೆಂಬರ್ 18ರಂದು ಹೃದಯಾಘಾತದಿಂದ ನಿಧನ
ಭೂ ಸೇನೆಯ ಪುನರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ತಿಮ್ಮಯ್ಯ ಅವರು, 1948ರಲ್ಲಿ 19ನೇ ಭಾರತೀಯ ಡಿವಿಜನ್ ಕಮಾಂಡ್ನ ನೇತೃತ್ವ ವಹಿಸಿಕೊಂಡ ಸಂದರ್ಭ ಜಮ್ಮು -ಕಾಶ್ಮೀರದಲ್ಲಿ ತೋರಿದ ಪರಾಕ್ರಮ ಭಾರತೀಯ ಸೇನಾ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯಿತು. ಸುಮಾರು 12 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಶಿಖರದ ಮೇಲೆ ಸೈನಿಕರ ಜೊತೆಯಲ್ಲಿ ಸಮರ ಟ್ಯಾಂಕ್ಗಳನ್ನು ಸಾಗಿಸಿ ಪಾಕಿಸ್ತಾನದ ಹಿಡಿತದಲ್ಲಿದ್ದ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿದ್ದರು. 1950ರಲ್ಲಿ ದೇಶದ ಖ್ಯಾತ ಮಿಲಿಟರಿ ಅಕಾಡೆಮಿ ಮತ್ತು ಮಿಲಿಟರಿ ಕಾಲೇಜಿನ ಜವಾಬ್ದಾರಿ ಹೊತ್ತುಕೊಂಡ ಜನರಲ್ ತಿಮ್ಮಯ್ಯ ಅವರು ಹಲವಾರು ದೇಶಭಕ್ತ ಸೈನಿಕರಿಗೆ ಮಾರ್ಗದರ್ಶನ ಮಾಡಿದರು. 1953ರಲ್ಲಿ ವೆಸ್ಟನ್ ಕಮಾಂಡಿನ ಅಧಿಕಾರ ವಹಿಸಿಕೊಂಡರು, 1957ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
1964ರಲ್ಲಿ ವಿಶ್ವಸಂಸ್ಥೆಯ ಶಾಂತಿಪಡೆಯ ಕಮಾಂಡರ್ ಆಗಿ ಸೈಪ್ರಸ್ ನಲ್ಲಿ ನಿಯೋಜಿತಗೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. 1965ರ ಡಿಸೆಂಬರ್ 18ರಂದು ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಸಾಹಸ, ಸೇನಾಪಡೆಗೆ ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿ ಉಳಿದಿದೆ. ಅವರ ಬದುಕಿನ ದಿನಗಳನ್ನು ಅವರು ಬಿಟ್ಟು ಹೋದ ಕೊಡುಗೆಗಳನ್ನು ನೆನಪಿಸುವ ಕಾರ್ಯವನ್ನು ಮ್ಯೂಸಿಯಂ ಮೂಲಕ ಮಾಡಲಾಗುತ್ತಿದೆ.












Click it and Unblock the Notifications