ಮಾನಸಿಕ ಅಸ್ವಸ್ಥನ ಸಾವು; ವೀರಾಜಪೇಟೆ ನಗರ ಸಬ್ ಇನ್ಸ್ಪೆಕ್ಟರ್ ಅಮಾನತು
ಮಡಿಕೇರಿ, ಜೂನ್ 13; ಮಾನಸಿಕ ಅಸ್ವಸ್ಥನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಶನಿವಾರ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತನ ತಾಯಿ ನೀಡಿರುವ ದೂರಿನ ಅನ್ವಯ ಸಬ್ಇನ್ಸ್ಪೆಕ್ಟರ್ ಜಗದೀಶ್ ಧೂಳ ಶೆಟ್ಟಿ, ಐವರು ಪೊಲೀಸ್ ಕಾನ್ಸ್ಟೇಬಲ್ ಹಾಗೂ ಇಬ್ಬರು ಹೋಂ ಗಾರ್ಡ್ಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣ ತನಿಖೆಯನ್ನು ಸಿಓಡಿಗೆ ಒಪ್ಪಿಸುವುದಾಗಿ ಐಜಿಪಿ ಹೇಳಿದ್ದಾರೆ.
8 ಮಂದಿ ಪೊಲೀಸರ ವಿರುದ್ದ ಎಫ್ಐಆರ್ ದಾಖಲಾಗಿದೆ. ಹಲ್ಲೆ ಪ್ರಕರಣದಿಂದ ವ್ಯಕ್ತಿ ಸಾವನ್ನಪ್ಪಿರುವ ಕುರಿತು ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ. ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡಯಲಾಗಿದೆ. ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ದ ಶಿಸ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೂನ್ 9 ರಂದು ರಾತ್ರಿ ಪೊಲೀಸರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿರಾಜಪೇಟೆ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜಾ (50) ಮೃತಪಟ್ಟಿದ್ದರು. ಈತ ಮಾನಸಿಕ ಅಸ್ವಸ್ಥನಾಗಿದ್ದು, ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸರ ಹಲ್ಲೆಯಿಂದ ಗಂಭೀರ ಗಾಯಗಳಾಗಿ ರಾಯ್ ಡಿಸೋಜಾ ಚಿಂತಾಜನಕ ಸ್ಥಿತಿ ತಲುಪಿದ್ದರು. ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಗಾಯಾಳುವನ್ನು ಬೆಂಗಳೂರಿಗೆ ಕರೆದೊಯ್ದು ತಾವೇ ಚಿಕಿತ್ಸೆ ನೀಡುವುದಾಗಿ ಕುಟುಂಬದವರಿಗೆ ಹೇಳಿದ್ದರು ಎಂದು ಸಹ ಸುದ್ದಿ ಹಬ್ಬಿದೆ.
ಪ್ರಕರಣದ ಬಗ್ಗೆ ಇಲಾಖೆಯ ಮಟ್ಟದಲ್ಲಿ ತನಿಖೆ ನಡೆಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಹೇಳಿದ್ದರು. ಮಾನಸಿಕ ಅಸ್ವಸ್ಥ ರಾಯ್ ತಮ್ಮ ಮನೆ ಬಳಿ ಕತ್ತಿ ಹಿಡಿದುಕೊಂಡು ತಿರುಗಾಡುತಿದ್ದ ಎಂಬ ಅರೋಪದಡಿಯಲ್ಲಿ ರಾತ್ರಿ 12 ಘಂಟೆಗೆ ಠಾಣೆಗೆ ಕರೆದೊಯ್ದು 3 ಘಂಟೆಗೆ ಬಿಟ್ಟು ಕಳಿಸಿದರೆನ್ನಲಾಗಿದೆ. ಆದರೆ ಪೋಲೀಸರ ಹೊಡೆತದಿಂದಾಗಿ ಅವರು ತೀವ್ರ ಅಸ್ವಸ್ಥಗೊಂಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದರು.
Recommended Video
ಈ ಘಟನೆಗೆ ಇಡೀ ಜಿಲ್ಲಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಮಾನಸಿಕ ಅಸ್ವಸ್ಥನ ಮೇಲೆಯೂ ದೌರ್ಜನ್ಯ ನಡೆಸಿದ ಪೊಲೀಸರ ಬಂಧನಕ್ಕೆ ಜೆಡಿಎಸ್, ಕಾಂಗ್ರೆಸ್, ಎಸ್ಡಿಪಿಐ ಮುಖಂಡರು ಒತ್ತಾಯಿಸಿದ್ದರು.












Click it and Unblock the Notifications