ಮಡಿಕೇರಿಯಲ್ಲಿ ನಕ್ಸಲ್ ಜಿಂದಾಬಾದ್ ಎಂದ ರೂಪೇಶ್
ಮಡಿಕೇರಿ, ಜುಲೈ 22 : ಮಾವೋವಾದಿ ಗುಂಪಿನ ಪ್ರಮುಖ ನಾಯಕ ರೂಪೇಶ್ ಮಡಿಕೇರಿಯ ನ್ಯಾಯಾಲಯದ ಆವರಣದಲ್ಲಿ ನಕ್ಸಲ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಹಿಂದೆ ಕೊಡಗಿನ ಅರಣ್ಯಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ ಆರೋಪ ಎದುರಿಸುತ್ತಿರುವ ನಕ್ಸಲ್ ನಾಯಕ ರೂಪೇಶ್ ಅಲಿಯಾಸ್ ಪ್ರವೀಣ್ ಅಲಿಯಾಸ್ ಪ್ರಕಾಶ್ ಅಲಿಯಾಸ್ ಪ್ರಶಾಂತ್ನನ್ನು ಗುರುವಾರ ವಿಚಾರಣೆಗಾಗಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.[ಕೊಯಮುತ್ತೂರಿನಲ್ಲಿ ಐವರು ಶಂಕಿತ ನಕ್ಸಲರ ಬಂಧನ]
ಕೊಯತ್ತೂರು ಕೇಂದ್ರ ಕಾರಾಗೃಹದಿಂದ ಬಿಗಿ ಬಂದೋಬಸ್ತ್ನಲ್ಲಿ ಮಡಿಕೇರಿಗೆ ಆತನನ್ನು ಕರೆತಂದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ 'ನಕ್ಸಲ್ ಜಿಂದಾಬಾದ್, ಮಾವೋಯಿಸ್ಟ್ ಜಿಂದಾಬಾದ್, ಮಾವೋಯಿಸ್ಟ್ಗಳು ದೇಶಭಕ್ತರು' ಎಂದು ಘೋಷಣೆ ಕೂಗಿದರು. [ಚಿಕ್ಕಮಗಳೂರಿನಲ್ಲಿ ಇಬ್ಬರು ನಕ್ಸಲರ ಶರಣಾಗತಿ]

ನ್ಯಾಯಾಲಯದಲ್ಲಿ ರೂಪೇಶ್ ಪರವಾಗಿ ವಾದ ಮಂಡನೆ ಮಾಡಿದ ವಕೀಲ ವಿದ್ಯಾಧರ ಅವರು, ರೂಪೇಶ್ ಅವರನ್ನು ರಾಜಕೀಯ ಖೈದಿ ಎಂದು ಪರಿಗಣಿಸಲು ಮನವಿ ಮಾಡಿದರು. ನ್ಯಾಯಾಧೀಶರಾದ ಶ್ರೀಕಾಂತ್ ಅವರು ಈ ಬಗ್ಗೆ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡುವಂತೆ ಸೂಚಿಸಿದರು, ರಾಜಕೀಯ ಖೈದಿ ಎಂದು ಪರಿಗಣಿಸಿದರೆ ಆತನಿಗೆ ಕೆಲ ಸವಲತ್ತು ಕಾರಾಗೃಹದಲ್ಲಿ ದೊರೆಯಲಿದೆ.[ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಆಂಧ್ರದ ನಕ್ಸಲ್ ದಂಪತಿ]
ರೂಪೇಶ್ ಯಾರು? : ರೂಪೇಶ್ ಕೇರಳದ ಕೊಚ್ಚಿನ್ನ ರಾಮಚಂದ್ರ ಎಂಬವರ ಪುತ್ರ. ನಕ್ಸಲ್ ಗುಂಪಿಗೆ ಸೇರಿದ ಈತ ಸರ್ಕಾರದ ವಿರುದ್ಧ ಹಾಗೂ ಮೇಲ್ವರ್ಗದ ವಿರುದ್ಧ ಹೋರಾಟಕ್ಕಿಳಿದು ಕಾಡು ಸೇರಿದ. ತನ್ನದೇ ತಂಡ ಕಟ್ಟಿಕೊಂಡು ಕರಪತ್ರ ಹಂಚುತ್ತಾ ಕಾಡಿನಲ್ಲಿ ಅಲೆಯುತ್ತಿದ್ದನು.
ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2013ರ ಮೇ ತಿಂಗಳಿನಲ್ಲಿ ಕಾಣಿಸಿಕೊಂಡಿದ್ದನು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ರೂಪೇಶ್ ವಿರುದ್ಧ ಸೆಕ್ಷನ್ 143, 144, 147, 342, 506, 149 ಐಪಿಸಿ ಸೆಕ್ಷನ್ 3 ಹಾಗೂ 25 ರಂತೆ ಭಾರತೀಯ ಬಂದೂಕು ಕಾಯ್ದೆ ಸೆಕ್ಷನ್ 20, 1967ರಂತೆ ಕಾನೂನು ಬಾಹಿರ ಚಟುವಟಿಕೆ ಪ್ರಕರಣ ದಾಖಲಿಸಲಾಗಿತ್ತು.
ಕೊಡಗಿನಲ್ಲಿ ರೂಪೇಶ್ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ಈತ ಭಾಗಮಂಡಲ ಬಳಿಯ ಚೇರಂಗಾಲದಲ್ಲಿ ವ್ಯಕ್ತಿಯೊಬ್ಬರ ಮನೆಗೆ ತೆರಳಿ ಊಟ ಪಡೆದು ತಿಂದು 50 ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿದ್ದಲ್ಲದೆ, ಈ ವಿಷಯ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಆರೋಪವಿದೆ.












Click it and Unblock the Notifications