ಕುಕ್ಕೆ ವ್ಯಾಪಾರಿ ರಮೇಶ್ ಹತ್ಯೆಗೈದ ಆರೋಪಿಗಳ ಬಂಧನ
ಮಡಿಕೇರಿ, ಆಗಸ್ಟ್ 27: ಎಂ. ರಮೇಶ (32) ಎಂಬಾತನನ್ನು ಕೊಲೆಗೈದ ಇಬ್ಬರು ಸ್ಥಳೀಯ ಹಂತಕರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಗೋಣಿಕೊಪ್ಪಲಿನ ಗೂಡ್ಸ್ ವಾಹನದ ಮಾಲೀಕ, ಕುಕ್ಕೆ ವ್ಯಾಪಾರಿ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಹೋದರರಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಗೋಣಿಕೊಪ್ಪಲಿನ ಬೈಪಾಸ್ ರಸ್ತೆ ನಿವಾಸಿ ಎಸ್. ನಾರಾಯಣ(38), ಅರುವತ್ತೊಕ್ಲು ಗ್ರಾಮದ ಮೈಸೂರಮ್ಮ ನಗರದ ನಿವಾಸಿ ಕಣ್ಣಂಬಾರ ಸಿ.ಮನೋಜ್(ಮನು) (34) ಎಂಬವರುಗಳೇ ಹಂತಕರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಎಸ್. ನಾರಾಯಣನನ್ನು ಮೈಸೂರಿನಲ್ಲಿ ಹಾಗೂ ಸಿ.ಮನೋಜ್(ಮನು)ನನ್ನು ಗೋಣಿಕೊಪ್ಪದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.
ಆ. 21ರಂದು ನಡೆದ ಹತ್ಯೆ
ಎಂ. ರಮೇಶ(32) ಅವರನ್ನು ಆ.21 ರಂದು ತಡ ರಾತ್ರಿ ಗೋಣಿಕೊಪ್ಪಲಿನ ಬೈಪಾಸ್ ರಸ್ತೆಯಲ್ಲಿ ದೇಹದ ವಿವಿಧ ಭಾಗಗಳಿಗೆ ಇರಿದುದಲ್ಲದೆ, ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಂತಕರು ತಲೆ ಮರೆಸಿಕೊಂಡಿದ್ದರು. ಈ ಹಂತಕರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರ ನೇತೃತ್ವದಲ್ಲಿ ಪೊಲೀಸ್ ವಿಶೇಷ ತನಿಖಾ ತಂಡವನ್ನು ರಚಿಸಿದ ಪರಿಣಾಮ ತನಿಖಾ ತಂಡವು ವಿವಿಧೆಡೆಗಳಲ್ಲಿ ಜಾಲಾಡಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
(ಚಿತ್ರದಲ್ಲಿ ಕೊಲೆಯಾದ ರಮೇಶ್)
30 ವರ್ಷಗಳ ಕಲಹ
ಎಸ್. ನಾರಾಯಣನಿಗೂ ಮತ್ತು ಮೃತ ರಮೇಶನಿಗೂ ಇಬ್ಬರ ನಡುವೆ ಕುಕ್ಕೆ ವ್ಯಾಪಾರ ಸಂಬಂಧ ಕಳೆದ 30 ವರ್ಷಗಳಿಂದ ಪರಸ್ಪರ ವೈಮನಸ್ಸು ಇತ್ತು. ನಾರಾಯಣನು 3 ತಿಂಗಳ ಹಿಂದೆ ಬೈಪಾಸ್ ರಸ್ತೆಯಲ್ಲಿ ಸ್ಕೂಟರ್ ಮೂಲಕ ತನ್ನ ಅಂಗಡಿಗೆ ಹೋಗುವಾಗ ರಮೇಶ್ ತನ್ನ ಗೂಡ್ಸ್ ವಾಹನದಿಂದ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದ. ಆದರೆ ತಪ್ಪಿಸಿಕೊಂಡು ಪಾರಾಗಿದ್ದ.
ರಮೇಶ್ನನ್ನು ಹೀಗೆ ಬಿಟ್ಟರೆ ಒಂದು ದಿನ ತನ್ನನ್ನು ಕೊಲ್ಲುತ್ತಾನೆಂದು ಯೋಚಿಸಿ ರಮೇಶ್ನನ್ನು ಕೊಲೆ ಮಾಡಲು ಮನೋಜ್ ಬಳಿ ನೆರವು ನೀಡುವಂತೆ ಕೋರಿಕೊಂಡಿದ್ದ. ಇದಕ್ಕೆ ಮನೋಜ್ ಸಮ್ಮತಿಸಿದನು. ಆಗ ರಮೇಶನನ್ನು ನಿರ್ಜನ ಪ್ರದೇಶಕ್ಕೆ ಕೆರದುಕೊಂಡು ಬರಲು ಮನೋಜ್ ರಮೇಶ್ನೊಂದಿಗೆ ಒಂದು ತಿಂಗಳಿನಿಂದ ಆತ್ಮೀಯವಾಗಿ ವರ್ತಿಸಿದ್ದಾನೆಂದು ತನಿಖೆ ವೇಳೆ ತಿಳಿಸಿದ್ದಾರೆ.
ಆಗಸ್ಟ್ 21ರಂದು ನಡೆದ ಕೊಲೆ
ಆ. 21 ರಂದು ಪಾರ್ಟಿ ಮಾಡಲು ಗೋಣಿಕೊಪ್ಪದ ಬೈಪಾಸ್ ರಸ್ತೆಯ ಖಾಲಿ ಜಾಗಕ್ಕೆ ನಾರಾಯಣನು ರಮೇಶನೊಂದಿಗೆ ಬರುವಂತೆ ಮನೋಜನಿಗೆ ಹೇಳಿದ್ದ. ಇದನ್ನು ಒಪ್ಪಿ ರಮೇಶನು ವಿವಾಹವಾಗಲು ನಿಶ್ಚಿತಾರ್ಥವಾಗಿದ್ದ ಯುವತಿಯೊಂದಿಗೆ ತನ್ನ ವಾಹನದಲ್ಲಿ ಕುಳಿತು ಮೊಬೈಲ್ನಲ್ಲಿ ಮಾತನಾಡಿಕೊಂಡಿದ್ದ.
ಆಗ ಸಮಯ ಸಾಧಿಸಿದ ನಾರಾಯಣನು ಮನೋಜನ ನೆರವಿನಿಂದ ಏಕಾಏಕಿಯಾಗಿ ದಾಳಿ ನಡೆಸಿ ರಮೇಶನ ಕುತ್ತಿಗೆ ಮತ್ತು ದೇಹದ ವಿವಿಧ ಭಾಗಗಳಿಗೆ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಎಲ್ಲಾ ಘಟನಾವಳಿಗಳನ್ನು ತನಿಖಾ ವೇಳೆ ಒಪ್ಪಿಕೊಂಡಿದ್ದಾನೆಂದು ಎಸ್ಪಿ ಹೇಳಿದ್ದಾರೆ.
ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು, ಸ್ಕೂಟಿ, 90 ಸಾವಿರ ನಗದು ಮತ್ತು ಚೂರಿಯನ್ನು ವಶಪಡಿಸಿಕೊಂಡಿರುವುದಾಗಿ ಎಸ್ಪಿ ಹೇಳಿದ್ದಾರೆ.
ವಿರಾಜಪೇಟೆ ಡಿವೈಎಸ್ಪಿ ನಾಗಪ್ಪ ಅವರ ಮಾರ್ಗದರ್ಶನದಂತೆ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ರಾಜೇಂದ್ರ ಪ್ರಸಾದ್ ನಗದು ಬಹುಮಾನವನ್ನು ಘೋಷಿಸಿದ್ದಾರೆ.