ಕೊಡಗಿನಲ್ಲಿ ವ್ಯಾಘ್ರ ಕಾಟ: ಹಸುಕರುಗಳಿಗೆ ಜೀವಭಯ!
ಮಡಿಕೇರಿ, ಫೆಬ್ರವರಿ 17: ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮುಂದುವರೆದಿದ್ದು ಜನ ಭಯದಲ್ಲೇ ದಿನ ಕಳೆಯುವಂತಾಗಿದೆ. ಇನ್ನೇನು ಹುಲಿ ಅರಣ್ಯದತ್ತ ಮುಖ ಮಾಡಿರಬೇಕು ನೆಮ್ಮದಿಯಾಗಿರೋಣ ಎನ್ನುವಾಗಲೇ ಹಸುವೊಂದನ್ನು ಕೊಂದು ಹಾಕುವ ಮೂಲಕ ತನ್ನ ಇರುವನ್ನು ಖಚಿತಪಡಿಸಿ, ಜನರನ್ನು ಮತ್ತೆ ಆತಂಕಕ್ಕೆ ತಳ್ಳಿದೆ.
ಕಳೆದ ಕೆಲವು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ಸಂಕಷ್ಟಕ್ಕೀಡಾದ ಜನ ಇದೀಗ ಹುಲಿ ಯಾವಾಗ ದಾಳಿ ಮಾಡುತ್ತದೆಯೋ ಎಂಬ ಭಯದಲ್ಲೇ ದಿನ ಕಳೆಯುವಂತಾಗಿದೆ. ಅರಣ್ಯದಂಚಿನಿಂದ ಬರುವ ಹುಲಿ ಎಲ್ಲೆಂದರಲ್ಲಿ ಅಲೆದಾಡುತ್ತಾ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಇದೀಗ ದಕ್ಷಿಣಕೊಡಗಿನ ಬೀರುಗ ಬಳಿ ವ್ಯಾಘ್ರನ ಅಟ್ಟಹಾಸಕ್ಕೆ ಮತ್ತೊಂದು ಹಸು ಬಲಿಯಾಗಿದೆ. ಐಯ್ಯಮಾಡ ಗಣೇಶ್ ದೇವಯ್ಯ ಎಂಬುವವರಿಗೆ ಸೇರಿದ ಹಸು ಬಲಿಯಾಗಿದೆ.
ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಘಟನೆ ನಡೆದಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಸಂಜೆಯ ವೇಳೆಯಲ್ಲಿ ಹಸು ಮನೆಗೆ ಬರಲಿಲ್ಲವಾದ ಕಾರಣ ಹುಡುಕಾಟ ನಡೆಸಿದ್ದರು. ಹಸು ಕಾಣದೆ ಇದ್ದಾಗ ದಟ್ಟಾರಣ್ಯದಲ್ಲಿ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ, ಐಯ್ಯಮಾಡ ಹ್ಯಾರಿ ಸೋಮೇಶ್ ಧೈರ್ಯ ತೋರಿ ಕಾಡಿನೊಳಗೆ ಸಂಚರಿಸಿ ನೋಡಿದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿರುವುದು ಗೋಚರಿಸಿದೆ.

ಕಳೆದ ಒಂದು ವಾರದ ಹಿಂದೆ ವಿರಾಜಪೇಟೆ ತಾಲೂಕು ಮಾಯಮುಡಿ ಪಂಚಾಯ್ತಿ ವ್ಯಾಪ್ತಿಯ ಧನುಗಾಲ ಗ್ರಾಮದ ನಿವಾಸಿ ಎಸ್.ಎಲ್.ಮುರುಡೇಶ್ವರ್ ಅವರಿಗೆ ಸೇರಿದ ಮೂರು ಹಸುಗಳನ್ನು ಹುಲಿ ಹಿಡಿದು ಕೊಂದಿತ್ತು. ಇದೇ ಹುಲಿಯು ಸಮೀಪದ ಕಿರುಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊದೇಂಗಡ ಪೂವಮ್ಮ ಶಾಂತಿ ಎಂಬುವರ ಹಸುವನ್ನು ಕೊಂದು ಹಾಕಿದೆ. ಮುರುಡೇಶ್ವರ್ ಅವರ ಮನೆಯ ಸಮೀಪದ ಗದ್ದೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿ ಹುಲಿಯನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಿದರಾದರೂ ಇಲ್ಲಿತನಕ ಈ ಭಾಗದಲ್ಲಿ ಹುಲಿ ಸಂಚಾರದ ಸುಳಿವು ಕಂಡುಬಂದಿಲ್ಲ.
ತೋಟದಲ್ಲಿ ಕಾಫಿ ಗಿಡಗಳಿಗೆ ನೀರು ಹಾಯಿಸುವ ಸಮಯವಾದುದರಿಂದ ಕಾರ್ಮಿಕರು ರಾತ್ರಿ ಹಗಲೆನ್ನದೆ ಕೆಲಸ ಮಾಡಬೇಕಾಗಿರುವುದರಿಂದ ಯಾವಾಗ ಹುಲಿ ದಾಳಿ ಮಾಡಿಬಿಡುತ್ತದೆಯೇ ಎಂಬ ಭಯದಲ್ಲಿ ದಿನ ಕಳೆಯುವಂತಾಗಿದೆ. ಹುಲಿಯನ್ನು ಸೆರೆಹಿಡಿಯುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ.












Click it and Unblock the Notifications