ಮಡಿಕೇರಿ-ಕೇರಳ ರಸ್ತೆ ದುರಸ್ಥಿ: ನಿರಾಳರಾದ ಜನರು
ಮಡಿಕೇರಿ, ಆಗಸ್ಟ್ 10: ಜುಲೈನಲ್ಲಿ ಸುರಿದ ಮಳೆಯಿಂದಾಗಿ ವೀರಾಜಪೇಟೆ ಮತ್ತು ಕೇರಳ ನಡುವಿನ ಪೆರುಂಬಾಡಿ ಎಂಬಲ್ಲಿ ರಸ್ತೆ ಕುಸಿದು ಸಂಪರ್ಕ ಕಡಿದು ಹೋಗಿ ಅತಂತ್ರ ಪರಿಸ್ಥಿತಿ ಏರ್ಪಟ್ಟು, ಕೇರಳ ಮತ್ತು ಮಡಿಕೇರಿ ನಡುವಿನ ಸಂಪರ್ಕ ಕೊಂಡಿಯೇ ಕಳಚಿದಂತಾಗಿತ್ತು. ಇದೀಗ ರಸ್ತೆ ದುರಸ್ತಿಪಡಿಸಿದ ಕಾರಣ ಮತ್ತೆ ಸಂಪರ್ಕ ಸಾಧ್ಯವಾಗಿದ್ದು, ಕೇರಳ ಮತ್ತು ಕೊಡಗಿನ ನಡುವಿನ ವಹಿವಾಟು ಸುಗಮವಾಗಿ ಸಾಗುತ್ತಿದೆ.
ರಸ್ತೆ ಕುಸಿತಗೊಂಡ ಕಾರಣ ಸುಮಾರು 15ದಿನಗಳ ಕಾಲ ಕೊಡಗು ಮತ್ತು ಕೇರಳದ ಸಂಪರ್ಕವೇ ಕಡಿದು ಹೋಗಿತ್ತು. ಇದರಿಂದಾಗಿ ಅಲ್ಲಿಂದ ಯಾವುದೇ ವಾಹನಗಳು ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇರಳ ಮತ್ತು ಕೊಡಗಿನ ನಡುವೆ ವ್ಯಾಪಾರ ಮತ್ತು ವಹಿವಾಟು ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಸಮಸ್ಯೆಯಾಗಿತ್ತು. ಕೇರಳದಿಂದ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ ಗಳ ಓಡಾಟಕ್ಕೂ ಅಡಚಣೆಯಾಗಿತ್ತು.

ಇದೀಗ ರಸ್ತೆ ದುರಸ್ತಿ ಕಾರ್ಯ ಮುಗಿದಿದ್ದರೂ ಅತಿ ಭಾರದ ಭಾರೀ ವಾಹನಗಳಿಗೆ ತಡೆಯೊಡ್ಡಲಾಗುತ್ತಿದೆ. ಸರ್ಕಾರಿ ಬಸ್ ಗಳು ಹಾಗೂ ಖಾಸಗಿ ಬಸ್, ಲಘುವಾಹನಗಳು ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿವೆ.
ಹಾಗೆನೋಡಿದರೆ ವಾಹನಗಳ ಸಂಪರ್ಕಕ್ಕೆ ಅನುಕೂಲವಾಗುವಂತೆ ದುರಸ್ತಿ ಕಾರ್ಯ ಮಾಡಿ ಸಂಚಾರಕ್ಕೆ ಅವಕಾಶ ಮಾಡಲಾಗಿದ್ದು, ಉಸ್ತುವಾರಿ ಸಚಿವ ಸೀತಾರಾಂ ಅವರ ಸೂಚನೆ ಮೇರೆಗೆ ಅವಕಾಶ ನೀಡಲಾಗಿದೆ. ಆದರೆ ರಸ್ತೆಯ ದುರಸ್ತಿ ಕಾರ್ಯ ಮಾತ್ರ ನಡೆಯುತ್ತಲೇ ಇದೆ.

ಇನ್ನೊಂದೆಡೆ ವಾಹನಸಂಚಾರ ಆರಂಭವಾಗುತ್ತಿದ್ದಂತೆಯೇ ಚೆಕ್ ಪೋಸ್ಟ್ ಗಳಲ್ಲಿ ವಸೂಲಿ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಭಾರೀ ವಾಹನಗಳಿಂದ ಹಣ ವಸೂಲಿ ಮಾಡಿ ಬಿಡಲಾಗುತ್ತಿದೆ ಎನ್ನಲಾಗಿದೆ. ಈ ನಡುವೆ ಅತಿ ತೂಕದ ವಾಹನಗಳನ್ನು ಸದ್ಯದ ಮಟ್ಟಿಗೆ ಬಿಡದಂತೆ ಸೂಚನೆ ಇದ್ದರೂ ಬಿಡಲಾಗುತ್ತಿದೆ ಎಂಬ ಆರೋಪವೂ ಇದೆ. ಅದೇನೆ ಇದ್ದರೂ ಸದ್ಯ ಸಂಪರ್ಕಕ್ಕೆ ರಸ್ತೆ ತೆರೆದುಕೊಂಡಿದ್ದರಿಂದ ಎಲ್ಲರೂ ಖುಷಿಯಾಗಿದ್ದಾರೆ.
ಕೊಡಗಿನ ಹೆಚ್ಚಿನ ವ್ಯಾಪಾರ ವಹಿವಾಟು ಕೇರಳದ ಮೂಲಕವೇ ನಡೆಯುತ್ತದೆ. ಹೀಗಿರುವಾಗ ರಸ್ತೆ ಸಂಪರ್ಕ ತೆರೆದುಕೊಂಡಿದ್ದು ವ್ಯಾಪಾರಸ್ಥರು, ಕೂಲಿಕಾರ್ಮಿಕರು ಸೇರಿದಂತೆ ಹಲವರಿಗೆ ಮರುಜೀವ ಬಂದಂತಾಗಿದೆ.












Click it and Unblock the Notifications