ಚಿತ್ರಗಳು : ಶಕ್ತಿ ದೇವತೆಗಳ ಕರಗದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ
ಮಡಿಕೇರಿ, ಅಕ್ಟೋಬರ್ 11 : ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆ, ಭೂ ಕುಸಿತದಿಂದ ಮಡಿಕೇರಿಯಲ್ಲಿ ಅಪಾರ ನಷ್ಟ ಉಂಟಾಗಿತ್ತು. ಈಗ ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಮೈಸೂರು ದಸರಾದಂತೆ ಮಡಿಕೇರಿ ದಸರಾವೂ ಪ್ರಸಿದ್ಧವಾಗಿದ್ದು, ಬುಧವಾರ ದಸರಾಕ್ಕೆ ಚಾಲನೆ ಸಿಕ್ಕಿದೆ.
ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭವಾಗುವುದರೊಂದಿಗೆ ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ಜನೋತ್ಸವ ದಸರಾಗೆ ಬುಧವಾರ ಚಾಲನೆ ಸಿಕ್ಕಿತ್ತು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕರಗ ಉತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಪಂಪಿನಕೆರೆಯಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 9 ದಿನಗಳ ನವರಾತ್ರಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ನಾಲ್ಕು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಮಾಡಿ ಕರಗವನ್ನು ಹೊತ್ತು ಪ್ರದಕ್ಷಿಣೆ ಮಾಡುವುದು ಸಂಪ್ರದಾಯವಾಗಿದೆ. ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಹರೀಶ್, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ದೇವಾಲಯದ ಕರಗನ್ನು ಅನೀಸ್ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಕರಗವನ್ನು ನವೀನ್ ಅವರು ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಜನರ ನಂಬಿಕೆ ಏನು?
ರಾಜರ ಕಾಲದಲ್ಲಿ ನಗರದ ನಾಲ್ಕು ದಿಕ್ಕಿನಲ್ಲಿ ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿತ್ತು ಎಂಬುದು ನಂಬಿಕೆ. ಇವು ನಗರವನ್ನು ರಕ್ಷಣೆ ಮಾಡುತ್ತವೆ. ಸಾಂಕ್ರಾಮಿಕ ರೋಗ ಹರಡಿದಾಗ ಅದರಿಂದ ಜನರನ್ನು ರಕ್ಷಿಸಿದವು ಎಂಬ ನಂಬಿಕೆ ಇದೆ.

ದುರಂತ ಆಗದಂತೆ ತಡೆಯಲು ಪ್ರಾರ್ಥನೆ
ನಗರದ ಪಂಪಿನಕೆರೆಯಲ್ಲಿ ಮಂಗಳವಾರ ಸಂಜೆ ಪ್ರಮುಖರ ಸಮ್ಮುಖದಲ್ಲಿ ಕರಗಗಳಿಗೆ ಸಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಮುಂದೆ ಕೊಡಗಿನಲ್ಲಿ ಈ ರೀತಿಯ ದುರಂತ ಆಗದಂತೆ ರಕ್ಷಣೆ ಮಾಡು ಎಂದು ಶಕ್ತಿ ದೇವತೆಯಲ್ಲಿ ಮನವಿ ಮಾಡಲಾಯಿತು.

ಸರಳ ದಸರಾ ಆಚರಣೆ
ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಸರಳವಾಗಿ ಈ ಬಾರಿಯ ದಸರಾ ಆಚರಣೆ ಮಾಡಲಾಗುತ್ತಿದೆ. ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದಂತೆ ದಸರಾ ನಡೆಸಲಾಗುತ್ತಿದೆ. ಮಡಿಕೇರಿಗೆ 50 ಲಕ್ಷ, ಗೋಣಿಕೊಪ್ಪಲುವಿಗೆ 25 ಲಕ್ಷ ರೂ.ಗಳನ್ನು ದಸರಾ ಆಚರಣೆಗಾಗಿ ಬಿಡುಗಡೆ ಮಾಡಲಾಗಿದೆ.

ಐತಿಹಾಸಿಕ ಹಿನ್ನಲೆ ಇದೆ
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ, 'ಮಡಿಕೇರಿ ದಸರಾಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ನೂರಾರು ವರ್ಷಗಳಿಂದ ಕರಗ ಉತ್ಸವ ಮೂಲಕ ಮಡಿಕೇರಿ ದಸರಾಗೆ ಚಾಲನೆ ನೀಡಿಕೊಂಡು ಬರಲಾಗಿದೆ. ನಾಲ್ಕು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಪುರಸ್ಕಾರ ಮಾಡಿ ಕರಗವನ್ನು ಹೊತ್ತು ಪ್ರದಕ್ಷಿಣೆ ಮಾಡುವುದು ವಿಶೇಷ' ಎಂದರು.












Click it and Unblock the Notifications