KRS Dam: ಕೊಡಗಿನಲ್ಲಿ ಸಾಧಾರಣ ಮಳೆ..ಕೆಆರ್ಎಸ್ ಭರ್ತಿ ಯಾವಾಗ ?
ಮಡಿಕೇರಿ, ಜುಲೈ 10: ಕರಾವಳಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದರೂ ಕೊಡಗಿನಲ್ಲಿ ಮಂಕಾಗಿದೆ. ಮಳೆಗಾಲದ ವಾತಾವರಣವಿದ್ದರೂ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿಲ್ಲ. ಹೀಗಾಗಿ ಕಾವೇರಿನದಿಯಲ್ಲಿ ನೀರಿನ ಪ್ರಮಾಣ ತಗ್ಗಿದೆ. ಒಂದು ವೇಳೆ ಕರಾವಳಿ ಭಾಗದಲ್ಲಿ ಸುರಿಯುವಂತೆ ಮಳೆ ಸುರಿದಿದ್ದರೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿತ್ತು.
ಈ ಬಾರಿ ಮುಂಗಾರು ಆರಂಭವಾದಲ್ಲಿಂದ ಇಲ್ಲಿವರೆಗೆ ಹೆಚ್ಚಿನ ಬಿಡುವು ನೀಡದೆ ಅಲ್ಪ ಪ್ರಮಾಣದಲ್ಲಾದರೂ ಮಳೆ ಸುರಿಯುತ್ತಿರುವುದರಿಂದ ಮುಂದೆ ಮಳೆ ಸುರಿದಾಗಲೆಲ್ಲ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ನದಿಯನ್ನು ಸೇರಲಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುವ ಸಾಧ್ಯತೆ ಇರುವುದರಿಂದಾಗಿ ಕೆಆರ್ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿದ್ದು, ಕೆಲವೇ ದಿನಗಳಲ್ಲಿ ಭರ್ತಿಯಾದರೂ ಅಚ್ಚರಿಯಿಲ್ಲ.

ಕೆಆರ್ ಎಸ್ ಜಲಾಶಯ ಭರ್ತಿಯಾಗಬೇಕಾದರೆ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿ ಮಳೆ ಸುರಿಯಬೇಕಾಗಿದೆ. ಅದರಲ್ಲೂ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದರೆ ಮಾತ್ರ ಕೆಆರ್ಎಸ್ ಜಲಾಶಯ ಭರ್ತಿಯಾಗಲಿದೆ. ಈ ಬಾರಿ ಬೇಸಿಗೆಯಲ್ಲಿ ತಳ ಸೇರಿದ್ದ ನೀರಿನ ಪ್ರಮಾಣ ಈಗ ನೂರರ ಗಡಿ ದಾಟಿರುವುದೇ ಎಲ್ಲರೂ ನೆಮ್ಮದಿ ಪಡಬೇಕಾದ ವಿಚಾರವಾಗಿದೆ.
ಭಾರೀ ಮಳೆಯ ಅವಧಿ ಇನ್ನೂ ಇದೆ
ಕೊಡಗಿನಲ್ಲಿ ಜುಲೈ ತಿಂಗಳ ಕೊನೆಯ ವಾರದಿಂದ ಆಗಸ್ಟ್ ತಿಂಗಳ ಎರಡನೇ ವಾರದ ತನಕದ ದಿನಗಳನ್ನು ಭಾರೀ ಮಳೆಯ ದಿನಗಳೆಂದು ಹಿಂದೆ ಪರಿಗಣಿಸಲಾಗುತ್ತಿತ್ತು. ಈ ದಿನಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ಒಂದೆರಡು ದಶಕಗಳ ಹಿಂದೆ ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದ ತನಕ ಸುಮಾರು ಹದಿನೈದು ದಿನಗಳ ಕಾಲ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಮಳೆ ಸಕಾಲದಲ್ಲಿ ಬಾರದೆ ಕಣ್ಣು ಮುಚ್ಚಾಲೆ ಆಡುತ್ತಿದ್ದರಿಂದ ಅದನ್ನು ರದ್ದು ಪಡಿಸಿ ಮಳೆ ಸುರಿದಾಗ ರಜೆ ನೀಡಲಾಗುತ್ತಿದೆ.

ಇನ್ನು ಕೊಡಗಿನಲ್ಲಿ ಪ್ರವಾಹ, ಭೂಕುಸಿತ ಮುಂತಾದ ಅನಾಹುತಗಳು ನಡೆದಿರುವುದನ್ನು ಗಮನಿಸಿದ್ದೇ ಆದರೆ ಇದೇ ಅವಧಿಯಲ್ಲಿ ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಈ ಸಮಯದಲ್ಲಿ ಒಂದು ದಿನದ ಅವಧಿಯಲ್ಲಿ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಸರಾಸರಿಯಾಗಿ 30ಮಿ.ಮೀ ಗಿಂತಲೂ ಹೆಚ್ಚು ಮಳೆ ಸುರಿದರೆ ಆಶಾದಾಯಕ ಮುಂಗಾರು ಎನ್ನಬಹುದಾಗಿದೆ. ಆದರೆ ಸದ್ಯ ಹತ್ತು ಮಿಲಿಮೀಟರ್ ದಾಟುತ್ತಿಲ್ಲ. ಹೀಗಾಗಿ ಮಳೆ ಕ್ಷೀಣವಾಗುತ್ತಿರುವುದು ಆತಂಕ ತಂದಿದೆ. ಇದರ ನಡುವೆ ಒಟ್ಟಾರೆ ಮಳೆ ಸುರಿದಿರುವ ಪ್ರಮಾಣವನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಮಳೆ ಆಗಿರುವುದು ನೆಮ್ಮದಿ ತಂದಿದೆ.
ಕೊಡಗಿನಲ್ಲಿ ಸುರಿದ ಮಳೆ ಪ್ರಮಾಣ ಹೇಗಿದೆ ?
ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಸರಾಸರಿ 1016.59 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 535.96 ಮಿ.ಮೀ ಮಳೆಯಾಗಿತ್ತು. ತಾಲೂಕುವಾರು ನೋಡುವುದಾದರೆ, ಮಡಿಕೇರಿ ತಾಲೂಕಿನಲ್ಲಿ ಇಲ್ಲಿಯವರೆಗಿನ 1496.53 ಮಿ.ಮೀ ವಿರಾಜಪೇಟೆ ತಾಲ್ಲೂಕಿನಲ್ಲಿ 1047.55 ಮಿ.ಮೀ. ಪೊನ್ನಂಪೇಟೆ 1009.44 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ 821.71 ಮಿ.ಮೀ. ಕುಶಾಲನಗರ ತಾಲ್ಲೂಕಿನಲ್ಲಿ 707.70 ಮಿ.ಮೀ. ಮಳೆಯಾಗಿದೆ.

ಮಳೆ ಕಡಿಮೆಯಾಗಿರುವುದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಸದ್ಯ 2,859 ಅಡಿಯ ಜಲಾಶಯದಲ್ಲಿ ಇಂದಿ 2850.03 ಅಡಿಯಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2838.40 ಅಡಿಗಯಷ್ಟು ನೀರಿತ್ತು. ಈಗ ಒಳ ಹರಿವು 2377 ಕ್ಯುಸೆಕ್ ಇದ್ದರೆ ಜಲಾಶಯದಿಂದ ನದಿಗೆ 466 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಮುಂಗಾರು ವೇಗ ಪಡೆದುಕೊಳ್ಳಬೇಕಿದೆ
ಕಳೆದ ವರ್ಷ ಮುಂಗಾರು ಕ್ಷೀಣವಾಗಿತ್ತಾದರೂ ಈ ವೇಳೆಗೆ ಪುನರ್ವಸು ಮಳೆ ಅಬ್ಬರಿಸಿ ಬೊಬ್ಬಿರಿದಿತ್ತು. ಹೀಗಾಗಿ ತ್ರಿವೇಣಿ ಸಂಗಮ ಜಲಾವೃತವಾಗಿತ್ತು. ಆದರೆ ಈ ಬಾರಿ ಪುನರ್ವಸು ಮಳೆಯ ಅಬ್ಬರ ಕಾಣಿಸುತ್ತಿಲ್ಲ. ಇನ್ನು ಎಂಟು ದಿನಗಳ ಕಾಲ ಈ ಮಳೆ ಇರಲಿದ್ದು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿರಲು ಸಾಧ್ಯವಾಗಲಿದೆ.












Click it and Unblock the Notifications