ಕೊಡಗಿನಲ್ಲಿ ವಿಯೆಟ್ನಾಂನ ಕಳಪೆ ಗುಣಮಟ್ಟದ ಕರಿಮೆಣಸು ಮಾರಾಟ
ಮಡಿಕೇರಿ, ಸೆಪ್ಟೆಂಬರ್ 6: ವಿಯೆಟ್ನಾಂನ ಕಳಪೆ ಕರಿಮೆಣಸನ್ನು ಆಮದು ಮಾಡಿಕೊಂಡು, ಅದರೊಂದಿಗೆ ಕೊಡಗಿನ ಕರಿಮೆಣಸನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಕರಿಮೆಣಸಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಡೆತ ಬಿದ್ದಿದೆ. ದರ ಕುಸಿತಕ್ಕೂ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೊಡವರಿಗೆ ಸಮಾಧಾನ ತಂತು ಈ ಬಾರಿಯ ವರ್ಷಧಾರೆ
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯೊಳಗೆ ಕಳಪೆ ಮಟ್ಟದ ವಿಯೆಟ್ನಾಂನ ಕರಿಮೆಣಸು ದಾಸ್ತಾನು ಇರಿಸಲಾಗಿದೆ ಎಂದು ಬೆಳೆಗಾರರು ಆರೋಪ ಮಾಡಿದ್ದಾರೆ. ವ್ಯಾಪಾರಿಯೊಬ್ಬ ಕರಿಮೆಣಸನ್ನು ಆಮದು ಮಾಡಿದ್ದು, ಅದರೊಂದಿಗೆ ಕೊಡಗಿನ ಕರಿಮೆಣಸನ್ನು ಬೆರೆಸಿ ಮಾರಾಟ ಮಾಡುವ ಹುನ್ನಾರ ನಡೆದಿದೆ. ಇದರಿಂದ ಕೊಡಗಿನ ಕರಿಮೆಣಸನ್ನು ಅನುಮಾನದಿಂದ ನೋಡುವಂತಾಗಿದೆ ಎಂಬುದು ಆರೋಪ.
ಜತೆಗೆ ಗುಣಮಟ್ಟ ಹೊಂದಿದ ಭಾರತದ ಕರಿಮೆಣಸಿಗೆ ಧಕ್ಕೆ ತರುವ ಕೆಲಸವಾಗಿದೆ. ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದರ ಕುಸಿತಕ್ಕೂ ಕಾರಣವಾಗಿದೆ. ಹೊರಗಿನಿಂದ ಕರಿಮೆಣಸನ್ನು ತಂದು ಮಾರಾಟ ಮಾಡುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿರುವ ಬೆಳೆಗಾರರು ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಟ್ವೀಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಒಳಗೆ ವಿಯೆಟ್ನಾಂ ದೇಶದ ಬೃಹತ್ ಪ್ರಮಾಣದಲ್ಲಿ ಕಳಪೆ ಮಟ್ಟದ ಕರಿಮೆಣಸು ದಾಸ್ತಾನಿರುವ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೆಲವು ಸದಸ್ಯರೇ ಮಾಧ್ಯಮದ ಮೂಲಕ ವಿಚಾರವನ್ನು ಬಹಿರಂಗಪಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಸಂಬಂಧ ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ.