ತಾನು ಆಡಿದ ಮಾತೇ ತಲಕಾವೇರಿ ಪ್ರಧಾನ ಅರ್ಚಕರಿಗೆ ಮುಳುವಾಯಿತೇ: ಭೂಸಮಾದಿ ಶಂಕೆ
ಮಡಿಕೇರಿ, ಆ 8: ಕಳೆದ ವರ್ಷದ ಅತಿವೃಷ್ಟಿಯನ್ನು ನೆನಪಿಸುವಂತೆ ಪಶ್ಚಿಮ ಘಟ್ಟಗಳ ಭಾಗವಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆ ಧಾರಾಕಾರ ಮಳೆ ಸುರಿಯುತ್ತಿದೆ. ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
Recommended Video
ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ, ಲಕ್ಷಾಂತರ ಎಕರೆ ಕೃಷಿಭೂಮಿ ಜಲಾವೃತವಾಗಿದೆ. ತಲಕಾವೇರಿ ಭಾಗದಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದಿದ್ದು, ಪ್ರಧಾನ ಅರ್ಚಕರೂ ಸೇರಿದಂತೆ, ಕುಟುಂಬದ ಐವರ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಕೊಡಗು ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಮಡಿಕೇರಿಯಿಂದ ತಲಕಾವೇರಿಗೆ ತಲುಪಲು ಹರಸಾಹಸ ಪಟ್ಟಿದ್ದು, "ಕಾರ್ಯಾಚರಣೆ ಸದ್ಯಕ್ಕೆ ಸಾಧ್ಯವಿಲ್ಲ, ದುರ್ಘಟನೆ ನಡೆದ ಸ್ಥಳಕ್ಕೆ ತಲುಪುವುದು ಅಸಾಧ್ಯ" ಎಂದು ಹೇಳಿದ್ದಾರೆ.
ಈ ನಡುವೆ, ಎಂದೂ ಸ್ಥಗಿತಗೊಳ್ಳದ ತಲಕಾವೇರಿ ಮಾತೆ ಕಾವೇರಿಗೆ ದೈನಂದಿನ ಪೂಜೆ ಸದ್ಯಕ್ಕೆ ಸ್ಟಾಪ್ ಆಗಿದೆ. ಗುಡ್ಡ ಕುಸಿತದ ಬಗ್ಗೆ ಪ್ರಧಾನ ಅರ್ಚಕರಿಗೆ ಹಿಂದೆನೇ ಎಚ್ಚರಿಕೆ ನೀಡಲಾಗಿತ್ತು.ಅವರ ಮಾತೇ ಅವರಿಗೆ ಮುಳುವಾಯಿತೇ?

ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
ಬ್ರಹ್ಮಗಿರಿ ಬೆಟ್ಟ ಕುಸಿದ ರಭಸಕ್ಕೆ ಕಿಲೋಮೀಟರ್ ಗಟ್ಟಲೆ ಮಣ್ಣಿನ ಪ್ರವಾಹ ಹರಿದುಹೋಗಿದೆ. ಈ ಪ್ರವಾಹದಲ್ಲಿ ಪ್ರಧಾನ ಅರ್ಚಕರ ಕುಟುಂಬವೂ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಕೊಡಗು ಜಿಲ್ಲಾಡಳಿತ ಹೇಳಿದೆ. "ಮಳೆಯ ಅಬ್ಬರ ಸ್ವಲ್ಪ ಕಮ್ಮಿಯಾದರೆ, ತಲಕಾವೇರಿಯಲ್ಲಿ ರಕ್ಷಣಾ ಕಾರ್ಯ ಶುರುಮಾಡಲಾಗುವುದು"ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಾಚಾರ್
ಬ್ರಹ್ಮಗಿರಿ ಬೆಟ್ಟದಲ್ಲಿ ಅರ್ಚಕರ ಎರಡು ಕುಟುಂಬ ನೆಲೆಸಿದೆ. ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಾಚಾರ್, ಅವರ ಪತ್ನಿ ಶಾಂತ, ಅವರ ಸಹೋದರ ಆನಂದತೀರ್ಥ ಮತ್ತು ಇಬ್ಬರು ಸಹಾಯಕ ಅರ್ಚಕರಾದ ಪವನ್ ಮತ್ತು ರವಿಕಿರಣ್ ಕೂಡಾ ನಾಪತ್ತೆಯಾಗಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಇಬ್ಬರು ಸಹಾಯಕ ಅರ್ಚಕರು ಇಲ್ಲಿ ಕಾರ್ಯನಿರ್ವಹಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದರು. (ಚಿತ್ರದಲ್ಲಿ: ನಾರಾಯಾಣಾಚಾರ್)

ಕೊಡಗಿನಲ್ಲಿ ಕುಂಭದ್ರೋಣ ಮಳೆ
ಭಾರೀ ಮಳೆ ಸುರಿಯುತ್ತಿದ್ದು ಗುಡ್ಡ ಕುಸಿಯುವ ಸಾಧ್ಯತೆಯಿದೆ, ತಾತ್ಕಾಲಿಕವಾಗಿ ಬೆಟ್ಟದಿಂದ ಮನೆ ಖಾಲಿ ಮಾಡಿ, ಬೇರೆ ಕಡೆ ನೆಲೆಸಿ ಎಂದು ಜಿಲ್ಲಾಡಳಿತ ಮತ್ತು ಸ್ಥಳೀಯರು, ನಾರಾಯಾಣಾಚಾರ್ ಕುಟುಂಬವನ್ನು ಪರಿಪರಿಯಾಗಿ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಅರ್ಚಕರು ಒಪ್ಪಿರಲಿಲ್ಲ ಎಂದು ವರದಿಯಾಗಿದೆ.

ತಲಕಾವೇರಿಯ ಪವಿತ್ರ ಕುಂಡಿಕೆ
ನನ್ನ ತಂದೆ, ಪೂರ್ವಜರು ಇದ್ದ ಮನೆಯಿದ್ದು, ಇದನ್ನು ಖಾಲಿ ಮಾಡಿ ಬೇರೆ ಕಡೆ ಹೋಗಲು ನನ್ನಿಂದ ಸಾಧ್ಯವಾಗಿಲ್ಲ. ಆಗಿದ್ದಾಗಲಿ, ಕಾವೇರಿ ತಾಯಿ ಬೇಕಾದರೆ ನನ್ನನ್ನು ಅವಳ ಮಡಿಲಿಗೆ ಸೇರಿಸಿಕೊಂಡರೂ ಪರವಾಗಿಲ್ಲ ಎನ್ನುವ ಮಾತನ್ನು ನಾರಾಯಾಣಾಚಾರ್ ಹೇಳಿದ್ದರು. ಇನ್ನು ತಲಕಾವೇರಿಯ ಪವಿತ್ರ ಕುಂಡಿಕೆ ಇರುವ ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.












Click it and Unblock the Notifications