ಮಡಿಕೇರಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಸೌಲಭ್ಯ ಮರೀಚಿಕೆ!
ಮಡಿಕೇರಿ, ಆಗಸ್ಟ್ 04 : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಕೆಎಸ್ಆರ್ಟಿಸಿ ಸಿಬ್ಬಂದಿಗಳು ರಾಜ್ಯದಾದ್ಯಂತ ಮುಷ್ಕರ ನಡೆಸಿದರು. ಒಂದಷ್ಟು ವೇತನ ಹೆಚ್ಚಳ ಮಾಡಿದ್ದರಿಂದ ನೌಕರರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದೂ ಆಯಿತು.
ಚಾಲಕರು ಮತ್ತು ನಿರ್ವಾಹಕರ ಸಮಸ್ಯೆ ಒಂದೆಡೆಯಾದರೆ ಡಿಪೋಗಳ ಅವ್ಯವಸ್ಥೆ ನೋಡಿದರೆ ನಿಜಕ್ಕೂ ಇಂತಹ ದುಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆಯೇ? ಎಂಬ ಮರುಕವುಂಟಾಗದಿರದು. ರಾಜ್ಯದಲ್ಲಿರುವ ಎಲ್ಲ ಡಿಪೋಗಳಲ್ಲಿಯೂ ಸಮಸ್ಯೆ ತಾಂಡವಾಡುತ್ತಿದೆ.[ಸಾರಿಗೆ ಮುಷ್ಕರದ ಚಿತ್ರಗಳು]
ಮಡಿಕೇರಿಯಲ್ಲಿರುವ ಅವ್ಯವಸ್ಥೆಯನ್ನು ಹತ್ತಿರದಿಂದ ನೋಡಿದರೆ ಬೇಸರವಾಗುತ್ತದೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ ಕಾರ್ಮಿಕರು ಇನ್ನೆಷ್ಟು ದಿನ ಈ ನರಕದಲ್ಲಿ ಕೆಲಸ ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳು ಒಂದರ ಮೇಲೊಂದರಂತೆ ನಮ್ಮ ಸುತ್ತ ಗಿರಕಿ ಹೊಡೆಯುತ್ತದೆ.[ಸಾರಿಗೆ ಮುಷ್ಕರ : ನೌಕರರಿಗೆ ಮೂರು ದಿನದ ವೇತನ ಕಡಿತ]
ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾರೂ ನೆಮ್ಮದಿಯಾಗಿ ಇಲ್ಲ. ನೌಕರರ ಕೊರತೆಯಿರುವ ಕಾರಣ ದಿನಕ್ಕೆ ಹತ್ತರಿಂದ ಹನ್ನೆರಡು ಗಂಟೆಕಾಲ ದುಡಿಯುವುದು ಅನಿವಾರ್ಯ. ಆದರೆ, ಅದಕ್ಕೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳು ಡಿಪೋದಲ್ಲಿ ಇಲ್ಲ.[ಚಿತ್ರಗಳು : ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ]
ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ ಡಿಪೋದಲ್ಲಿ ಕುಡಿಯಲು ನೀರಿಲ್ಲ. ತಂಗಲು ಸೂಕ್ತ ಕೊಠಡಿಯ ವ್ಯವಸ್ಥೆಯಿಲ್ಲ. ಕೆಲಸ ಮಾಡುವಾಗ ಆಯಿಲ್ ಆದರೆ ಅದನ್ನು ತೊಳೆದುಕೊಳ್ಳುವುದಕ್ಕೆ, ಸ್ನಾನ ಮಾಡುವುದಕ್ಕೆ ಯಾವುದೇ ಸೌಲಭ್ಯವಿಲ್ಲ.
ಮೊದಲೇ ತಣ್ಣಗೆಯ ಪ್ರದೇಶ ಅದರಲ್ಲೂ ಆಯಿಲ್ ಮುಟ್ಟುವುದರಿಂದ ಮೈಗೆ ಅಂಟಿದ ಆಯಿಲ್ ಹೋಗಬೇಕಾದರೆ ಬಿಸಿ ನೀರು ಬೇಕೇ ಬೇಕು. ಬಿಸಿ ನೀರಿಗಾಗಿ ಇದ್ದ ಗೀಸರ್ ಕೆಟ್ಟು ಮೂಲೆ ಸೇರಿದೆ ಅದನ್ನು ದುರಸ್ತಿ ಮಾಡಿಸುವ ಮನಸ್ಸನ್ನು ಯಾವ ಅಧಿಕಾರಿಗಳು ಮಾಡಿಲ್ಲ.
ಧೂಳು ಹಿಡಿದ ಬಸ್ಸನ್ನು ಶುಚಿಗೊಳಿಸಬೇಕು. ಅದಕ್ಕೆಂದು ಇರುವ ಪ್ರತ್ಯೇಕ ಸಿಬ್ಬಂದಿ ಇಲ್ಲಿ ಇಲ್ಲ ಹೀಗಾಗಿಯೇ ಚಾಲಕ, ನಿರ್ವಾಹಕರೇ ಬಸ್ಸನ್ನು ಶುಚಿಗೊಳಿಸಬೇಕಾಗಿದೆ. ಶುಚಿತ್ವಕ್ಕಾಗಿ ಸರಕಾರ ಅನುದಾನ ನೀಡಿದರೂ ಅದು ಇಲ್ಲಿ ಯಾವ ರೀತಿಯಲ್ಲಿ ಬಳಕೆಯಾಗುತಿದೆ ಎಂಬುದನ್ನು ಅಧಿಕಾರಿಗಳೇ ಹೇಳಬೇಕು.
ಮಡಿಕೇರಿ ಡಿಪೋದಲ್ಲಿರುವ ಬಸ್ಗಳ ಪೈಕಿ ಹೆಚ್ಚಿನವು ಡಕೋಟಾಗಾಡಿಗಳು. ಸಂಚಾರಕ್ಕೆ ಯೋಗ್ಯವಲ್ಲದ ಬಸ್ಗಳೆಲ್ಲವೂ ಇಲ್ಲಿ ಸ್ಥಾನ ಪಡೆದಿವೆ. ಸುಮಾರು 13 ಲಕ್ಷ ಕಿ.ಮೀ. ಸಂಚರಿಸಿದ ಬಸ್ಗಳು ಕೂಡ ಇಲ್ಲಿವೆ. ಗುಜರಿಗೆ ಕಳುಹಿಸಬೇಕಾದ ಬಸ್ಗಳನ್ನು ಡಿಪೋದಲ್ಲಿಟ್ಟು ಓಡಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಬಸ್ಗಳಿವೆ.
ಬೇರೆಡೆಗಳಲ್ಲಿ ಒಂದು ಗಂಟೆಗಿಂತ ಹೆಚ್ಚು ಸಮಯ ಕಾರ್ಯ ನಿರ್ವಹಿಸಿದರೆ ಅದಕ್ಕೆ ಪ್ರತ್ಯೇಕ ಸಂಬಳ ನೀಡುವ ವ್ಯವಸ್ಥೆಯಿದೆ. ಆದರೆ, ಅದು ಇಲ್ಲಿನ ಸಿಬ್ಬಂದಿಗೆ ಇಲ್ಲದಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮಡಿಕೇರಿಯ ಡಿಪೋದತ್ತ ಕಣ್ತೆರೆದು ನೋಡಬೇಕಿದೆ.