ಟಿಪ್ಪು ಜಯಂತಿ ಆಚರಿಸದಿರಲು ಕೊಡಗು ಜಿ.ಪಂ ನಿರ್ಣಯ
ಮಡಿಕೇರಿ, ಅಕ್ಟೋಬರ್ 12: ಮತ್ತೆ ನವೆಂಬರ್ ಬಂದಿದೆ. ಟಿಪ್ಪು ಜಯಂತಿ ದಿನವು ಮತ್ತೆ ನೆನಪಾಗುತ್ತದೆ. ಅದರ ಜತೆಗೆ ಕೊಡಗು ಜಿಲ್ಲೆ ನೆನಪಾಗುತ್ತದೆ. ಅಂದ ಹಾಗೆ ಈ ಬಾರಿ ನವೆಂಬರ್ ಹತ್ತರಂದು ಟಿಪ್ಪು ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಬಾರದು ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಅದನ್ನು ಸರಕಾರಕ್ಕೆ ಕಳಿಸಲು ತೀರ್ಮಾನ ಕೂಡ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರದಲ್ಲಿ ಇರುವುದು ಬಿಜೆಪಿ. ಅಧ್ಯಕ್ಷ ಬಿ.ಎ.ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಸರಕಾರಿ ಕಾರ್ಯಕ್ರಮವಾಗಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಹೋದ ವರ್ಷ ಹತ್ತು ಜನರ ಮುಂದೆ ಟಿಪ್ಪು ಜಯಂತಿ ಆಚರಿಸುವುದಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡಲಾಯಿತು. ಅದಕ್ಕೂ ಹಿಂದಿನ ವರ್ಷ ನಡೆದ ದುರ್ಘಟನೆಯಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಜಿಲ್ಲೆಯ ಜನರಿಗೆ ಆಸಕ್ತಿ ಇಲ್ಲದ ವ್ಯಕ್ತಿಯ ಜಯಂತಿ ಆಚರಿಸುವುದರಲ್ಲಿ ಏನು ಅರ್ಥವಿದೆ? ಸರಕಾರ ಯಾಕಿಂಥ ಹಟಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯಲ್ಲಿ ಇರುವ ಮೂವರು ಕಾಂಗ್ರೆಸ್ ಸದಸ್ಯರು ಟಿಪ್ಪು ಜಯಂತಿ ಆಚರಣೆ ಪರವಾಗಿ ಮಾತನಾಡಿದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ಆಯಿತು.












Click it and Unblock the Notifications