ಮಡಿಕೇರಿ ರಾಮಕೃಷ್ಣಮಠದ ಸ್ವಾಮಿ ಜಗದಾತ್ಮನಂದಜೀ ವಿಧಿವಶ
ಮಡಿಕೇರಿ, ನವೆಂಬರ್ 15: ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಸ್ವಾಮಿ ಜಗದಾತ್ಮನಂದಜೀ (89) ಅವರು ಗುರುವಾರ ರಾತ್ರಿ 9:15 ರ ಸುಮಾರಿಗೆ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಒಂದು ತಿಂಗಳಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು. ಅವರು ಅಪಾರ ಭಕ್ತವರ್ಗವನ್ನು ಅಗಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 10ರಿಂದ 1 ಗಂಟೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಮಧ್ಯಾಹ್ನ 1ಕ್ಕೆ ಪೊನ್ನಂಪೇಟೆಯ ಆಶ್ರಮಕ್ಕೆ ಪಾರ್ಥಿವ ಶರೀರ ತರಲಾಗುವುದು. ಸಂಜೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಆಶ್ರಮದ ಮೂಲಗಳು ತಿಳಿಸಿವೆ. ಸ್ವಾಮಿ ಜಗದಾತ್ಮನಂದಜೀ ಅವರ ಪೂರ್ವಾಶ್ರಮ ಉಡುಪಿ ಜಿಲ್ಲೆಯ ಬಾರಕೂರು ಗ್ರಾಮ.

2000ರಿಂದ ಪೊನ್ನಂಪೇಟೆ ಆಶ್ರಮದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 'ಬದುಕಲಿ ಕಲಿಯಿರಿ' ಎಂಬ ಪುಸ್ತಕವನ್ನೂ ಅವರು ರಚಿಸಿದ್ದರು. ಈ ಪುಸ್ತಕ 9 ಭಾಷೆಗಳಲ್ಲಿ ಅನುವಾದಗೊಂಡಿರುವುದು ವಿಶೇಷ.
ರಾಮಕೃಷ್ಣರು ಹಾಗೂ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳಿಂದ ಸ್ಫೂರ್ತಿ ಪಡೆದಿದ್ದ ಜಗದಾತ್ಮನಂದಜೀ ಅವರು ಬೆಂಗಳೂರಿನ ಶಾಖೆ ರಾಮಕೃಷ್ಣ ಸಂಘ ಸೇರಿದ್ದರು. ಮಂಗಳೂರು, ಮೈಸೂರು, ಷಿಲ್ಲಾಂಗ್, ಸಿಂಗಪೂರ್ ಮತ್ತು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮಗಳಲ್ಲಿ ಸೇವೆ ಸಲ್ಲಿಸಿದ್ದರು. ವೇದಾಂತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಪಾಂಡಿತ್ಯ ಪಡೆದಿದ್ದರು. ಸಾಹಿತ್ಯ ಸೇವೆಗೆ ಆರ್ಯ ಪ್ರಶಸ್ತಿಯ ಗೌರವ ಲಭಿಸಿದೆ.












Click it and Unblock the Notifications