ಮಾಲಂಬಿ ಮಳೆಮಲ್ಲೇಶ್ವರನಿಗೆ ಮಳೆಗಾಗಿ ಪ್ರಾರ್ಥಿಸಿ ಪಾದಯಾತ್ರೆ!
ಮಳೆಗಾಗಿ ಪ್ರಾರ್ಥಿಸಿ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟಕ್ಕೆ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯಲ್ಲಿ ಹಿಂದೆ ಒಳ್ಳೆ ಮಳೆಯಾಗುತ್ತಿತ್ತು. ಈಗ ಮಳೆಗೆ ಪ್ರಾರ್ಥಿಸುವಂತಾಗಿದೆ
ಮಡಿಕೇರಿ, ಏಪ್ರಿಲ್ 11: ಕೊಡಗಿನಲ್ಲಿ ಮಳೆ ಬಾರದಿದ್ದಾಗ ಬೇಸಿಗೆಯಲ್ಲಿ ಊರ ದೇವರಿಗೆ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸುವುದು ಹೊಸದೇನೂ ಅಲ್ಲ. ಕೊಡಗಿನ ಆರಾಧ್ಯ ದೈವ ಇಗ್ಗುತ್ತಪ್ಪ. ಕಾವೇರಮ್ಮ ಸೇರಿದಂತೆ ಹಲವು ದೇವರಿಗೆ ಮೊರೆಯಿಡುವುದು ಹಿಂದಿನಿಂದಲೂ ನಡೆದು ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಕಾಡಿನ ನಡುವೆ, ಬೆಟ್ಟದ ಮೇಲೆ ಹಲವಾರು ದೇವರು ನೆಲೆಸಿದ್ದು, ಬೊಟ್ಲಪ್ಪಮ ಮಳೆಮಲ್ಲೇಶ್ವರ, ಮಹದೇಶ್ವರ ಹೀಗೆ ಹಲವು ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ನಿತ್ಯ ಪೂಜೆ-ಕೈಂಕರ್ಯಗಳು ನಡೆದರೂ ವರ್ಷಕ್ಕೊಮ್ಮೆ ಬೇಸಿಗೆಯ ದಿನಗಳಲ್ಲಿ ಊರವರು ದೇವಾಲಯದಲ್ಲಿ ಸೇರಿ, ಪೂಜೆ ಸಲ್ಲಿಸಿ ಮಳೆ- ಬೆಳೆಯಾಗಿ ಸುಭಿಕ್ಷವುಂಟಾಗಲಿ ಎಂದು ಪ್ರಾರ್ಥಿಸುವುದು ಸಾಮಾನ್ಯವಾಗಿದೆ.[ಕೊಡಗಿನಲ್ಲಿ ಗುಡುಗು ಸಹಿತ ಮಳೆ: ಧರೆಗುರುಳಿದ ಮರ]

ಕೆಲವು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹೊರಬರುತ್ತಿದ್ದಂತೆ ಮಳೆ ಸುರಿದ ನಿದರ್ಶನಗಳನ್ನು ಹಿರಿಯ ಜೀವಗಳು ನೆನಪು ಮಾಡಿಕೊಳ್ಳುತ್ತವೆ. ಕೊಡಗಿನಲ್ಲಿ ಈ ಹಿಂದೆ ಮಳೆ ಸುರಿದು, ಅದರಿಂದಾದ ಅನಾಹುತಗಳನ್ನು ತಡೆಯಲಾರದೆ ದೇವಾಲಯಗಳಿಗೆ ತೆರಳಿ ಮಳೆ ನಿಲ್ಲಲು ಪ್ರಾರ್ಥಿಸಿದ ನಿದರ್ಶನಗಳೂ ಇವೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆ ಸುರಿಯುವ ಪ್ರಮಾಣ ಕಡಿಮೆಯಾಗಿದ್ದು, ಪ್ರತಿ ವರ್ಷವೂ ಮಳೆ ಬರಲೆಂದು ಪ್ರಾರ್ಥಿಸಬೇಕಾದ ಪರಿಸ್ಥಿತಿ ಬಂದೊದಗಿರುವುದು ಮಾತ್ರ ವಿಷಾದದ ಸಂಗತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಮಳೆ ಕರುಣಿಸುವ ದೇವರಿಗೆ ಪೂಜೆ ಸಲ್ಲಿಸುವ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಸೋಮವಾರಪೇಟೆ ತಾಲೂಕಿನ ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ನೆಲೆಸಿರುವ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿ ಪೂಜೆ ಸಲ್ಲಿಸುವ ಸಂಪ್ರದಾಯ ಮೂರು ವರ್ಷಗಳಿಂದ ಆರಂಭಿಸಲಾಗಿದೆ.[ಹಾಸನದಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ಬಲಿ]
ಶನಿವಾರಸಂತೆ ಪಟ್ಟಣದ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟ ಸಮುದ್ರ ಮಟ್ಟದಿಂದ 5778 ಅಡಿ ಎತ್ತರದಲ್ಲಿದ್ದು, ಇಲ್ಲಿಗೆ ಪಾದಯಾತ್ರೆಯಲ್ಲಿ ತೆರಳಿ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಸುಮಾರು 350 ವರ್ಷಗಳ ಇತಿಹಾಸವಿದ್ದು, ಇಲ್ಲಿ ಮಳೆಗಾಗಿ ಪೂಜೆ ಸಲ್ಲಿಸುವುದು ಹಿಂದಿನ ಕಾಲದಿಂದಲೂ ನಡೆದುಬಂದಿದೆ. ಈ ಬಾರಿ ವಿವಿಧ ಗ್ರಾಮಗಳಿಂದ 50ಕ್ಕೂ ಹೆಚ್ಚು ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಆಲೂರು ಸಿದ್ದಾಪುರ ಪಟ್ಟಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.[ಪುತ್ತೂರಿನ ಹಿರೇಬಂಡಾಡಿಯಲ್ಲಿ ಆಲಿಕಲ್ಲು ಮಳೆ]
ಆ ಬಳಿಕ ವಾದ್ಯಗೋಷ್ಠಿಯೊಂದಿಗೆ ಗುಡುಗಳಲೆ ಜಂಕ್ಷನ್ ಮೂಲಕ ಗೋಪಾಲಪುರ, ರಾಮನಹಳ್ಳಿ, ನಂದಿಗುಂದ ಮಾರ್ಗವಾಗಿ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳಲಾಯಿತು. ಮಧ್ಯಾಹ್ನ ಬೆಟ್ಟ ತಲುಪಿ ಅಲ್ಲಿರುವ ಮಳೆಮಲ್ಲೇಶ್ವರ ದೇವಾಲಯದಲ್ಲಿ ಭಜನೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ಹಲವು ಬಗೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸದ್ಯ ಕೊಡಗಿನ ಹಲವೆಡೆ ಮಳೆ ಸುರಿಯುತ್ತಿದ್ದು ಜನ ಖುಷಿಯಾಗಿದ್ದಾರೆ.












Click it and Unblock the Notifications