ಕಾವೇರಿ ಜನಿಸುವ ಕೊಡಗಿನ ಜನರು ನೀರಿಗಾಗಿ ಪಡುವ ಪಾಡಿದು
ಮಡಿಕೇರಿ, ಫೆಬ್ರವರಿ 28: ಕರ್ನಾಟಕದ ಸ್ವರ್ಣ ನದಿ ಎಂದೇ ಕರೆಯುವ ಕಾವೇರಿ ತವರಲ್ಲೇ ನೀರಿಗೆ ಪರದಾಟ ಆರಂಭವಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಹೆಚ್ಚಿನ ಜನ ಕಾವೇರಿ ನೀರನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಕೊಡಗಿನಲ್ಲಿ ಕಾವೇರಿ ನೀರಿನ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದರೆ ಅಚ್ಚರಿಯಾಗಬಹುದು.
ಇವತ್ತು ನಾವು ಕೊಡಗಿಗೊಂದು ಸುತ್ತು ಹೊಡೆದರೆ ಕುಡಿಯುವ ನೀರಿಗಾಗಿ ಇಲ್ಲಿನ ಜನ ಹೇಗೆಲ್ಲ ಪರದಾಡುತ್ತಾರೆ ಎಂಬುದು ಮನದಟ್ಟಾಗುತ್ತದೆ. ಕೆಲವು ಪಟ್ಟಣಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಗ್ರಾಮಗಳ ಜನರು ಬಳಸುವ ನೀರನ್ನು ಆಲಂನಿಂದಾಗಲೀ, ಕ್ಲೋರಿನಿಂದಾಗಲೀ ಶುದ್ಧೀಕರಣ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸ್ಥರು ಬಾವಿ ಮತ್ತು ತೋಡು, ತೊರೆಗಳ ನೀರನ್ನೇ ಅವಲಂಭಿಸಿದ್ದಾರೆ.[ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ...]
ಮಡಿಕೇರಿ ನಗರಕ್ಕೆ ಸರಬರಾಜಾಗುವ ನೀರು ಕೂಡ ಕಾವೇರಿಯದಲ್ಲ. ಕೂಟು ಹೊಳೆ ಸೇರಿದಂತೆ ತೊರೆಗೆ ಕಟ್ಟೆ ಕಟ್ಟಿ ಅಲ್ಲಿಂದ ನೀರನ್ನು ಸಂಗ್ರಹಿಸಿ ಬಳಿಕ ಶುದ್ಧೀಕರಣಗೊಳಿಸಿ ಸರಬರಾಜು ಮಾಡಲಾಗುತ್ತದೆ. ಇದುವರೆಗೆ ಮಳೆಗಾಲದಲ್ಲಿ ಉತ್ತಮ ಮಳೆಯಾಗಿ ನೀರಿನಾಸರೆಯಿರುವ ಸ್ಥಳಗಳಲ್ಲಿ ಜಲ ಹುಟ್ಟಿ ನೀರು ಹರಿಯುತ್ತಿತ್ತು. ಹೀಗೆ ಹರಿಯುವ ನೀರು ಬೇಸಿಗೆಯ ತನಕವೂ ಸಿಗುತ್ತಿತ್ತು.
ಆದರೆ, ಕಳೆದ ವರ್ಷ ಮಳೆ ಬಾರದ ಕಾರಣದಿಂದ ತೊರೆಗಳಲ್ಲಿ ಜಲ ಹುಟ್ಟದೆ ನೀರು ಬತ್ತಿದೆ. ಇದನ್ನೇ ನಂಬಿದ್ದ ಜನ ಇದೀಗ ಆತಂಕಗೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಒಂದಷ್ಟು ತೇವಾಂಶ ಉಳಿದಿದ್ದು ಸದ್ಯದಲ್ಲೇ ಮಳೆ ಬಾರದೆ ಹೋದರೆ ಇದ್ದ ನೀರು ಕೂಡ ಆರಿ ಹೋಗುವ ಸಾಧ್ಯತೆ ಹೆಚ್ಚಾಗಿದೆ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]
ಹಾಡಿಗಳಲ್ಲಿ ವಾಸಿಸುವ ಗಿರಿಜನರಿಗೆ ಸರಕಾರ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಅವರೆಲ್ಲ ತೋಡಿನಲ್ಲಿ ಹರಿಯುವ ಕಲುಷಿತ ನೀರನ್ನೇ ಸೇವಿಸಬೇಕಾದ ಅನಿವಾರ್ಯ ಒದಗಿ ಬಂದಿದೆ. ಈ ನಡುವೆ ಕಾಫಿ ಕೊಯ್ಲು ನಡೆಯುತ್ತಿರುವುದರಿಂದ ದೊಡ್ಡ ಎಸ್ಟೇಟ್ ಗಳಲ್ಲಿ ಕಾಫಿ ಪಲ್ಪಿಂಗ್ ನಡೆಯುತ್ತಿದ್ದು, ಅದರ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಜಿಲ್ಲಾಡಳಿತ ಕಾಫಿ ಪಲ್ಪಿಂಗ್ ಮಾಡಿದ ನೀರನ್ನು ಹೊರಕ್ಕೆ ಬಿಡಬಾರದು ಎಂದು ಕಠಿಣ ಸೂಚನೆ ನೀಡಿದ್ದರೂ ಬಹಳಷ್ಟು ಕಡೆ ಕಾನೂನನ್ನು ಗಾಳಿಗೆ ತೂರಿ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಅದು ತೋಡು, ತೊರೆಯ ನೀರಿನ ಮೂಲಕ ಹರಿದು ಬರುತ್ತಿದೆ. ತೊರೆ ನೀರನ್ನೇ ಕುಡಿಯಲು ನಂಬಿ ಬದುಕುತ್ತಿದ್ದ ಬಹಳಷ್ಟು ಜನ ಇದರಿಂದ ತೊಂದರೆಗೀಡಾಗಿದ್ದಾರೆ.[ತೀವ್ರ ಬರ: ಮಂಗಳೂರು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ]
ಮೊದಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನಕ್ಕೆ ಕಾಫಿ ಪಲ್ಪಿಂಗ್ ನೀರು ಸೇರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಸ್ಥಳೀಯ ಪಂಚಾಯಿತಿ ಮಟ್ಟದಲ್ಲೇ ಕುಡಿಯುವ ನೀರು ಕಲುಷಿತಗೊಳ್ಳದಂತೆ ಜನಪ್ರತಿನಿಧಿಗಳು ನೋಡಿಕೊಳ್ಳಬೇಕಾಗಿದೆ. ಅಷ್ಟೇ ಅಲ್ಲದೆ ತೊರೆ, ತೋಡುಗಳಲ್ಲಿ ಸಂಗ್ರಹವಾಗುವ ನೀರನ್ನು ನೇರವಾಗಿ ಬಳಸದೆ ಕುದಿಸಿ ಬಳಸುವಂತೆ ಅರಿವು ಮೂಡಿಸಬೇಕಾಗಿದೆ ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ.