ಮದುವೆ ಸಂಭ್ರಮವನ್ನು ಮಣ್ಣುಪಾಲು ಮಾಡಿದ ಪ್ರವಾಹ!
ಮಡಿಕೇರಿ, ಆಗಸ್ಟ್ 22 : ಆ ಮನೆಯಲ್ಲಿ ವಿವಾಹಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಹಣ, ಒಡವೆ ಮಾಡಿಸಿಡಲಾಗಿತ್ತು. ಆದರೆ, ಈಗ ಕುಟುಂಬದವರೆಲ್ಲಾ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ವಿವಾಹಗಳು ಮುರಿದು ಬಿದ್ದಿವೆ. ಕಾರಣ ಭಾರಿ ಮಳೆ ಮತ್ತು ಗುಡ್ಡ ಕುಸಿತ. ಮದುವೆಗೆ ಸಿಂಗಾರಗೊಳ್ಳಬೇಕಿದ್ದ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಆ.26ರಂದು ಗ್ರಾಮದ ನಿವಾಸಿಗಳಾದ ಮಂಜುಳಾ ಮತ್ತು ಸೆ.12ರಂದು ರಂಜಿತಾ ಮದುವೆ ನಿಶ್ಚಯವಾಗಿತ್ತು. ಆದರೆ, ಗುಡ್ಡ ಕುಸಿತದಿಂದಾಗಿ ಇಬ್ಬರ ಮನೆಗಳು ಭೂ ತಾಯಿಯ ಒಡಲು ಸೇರಿವೆ. ಸಂಭ್ರಮದಿಂದ ವಿವಾಹ ಕಾರ್ಯದಲ್ಲಿ ತೊಡಗಬೇಕಿದ್ದ ಕುಟುಂಬ ನಿರಾಶ್ರಿತರ ಶಿಬಿರದಲ್ಲಿ ಕಣ್ಣೀರಿಡುತ್ತಿದೆ.

ಮಂಜುಳಾ ಅವರ ವಿವಾಹಕ್ಕಾಗಿ ಚಿನ್ನಾಭರಣಗಳನ್ನು ಮಾಡಿಸಿ ಮನೆಯಲ್ಲಿ ಇಡಲಾಗಿತ್ತು. ಮದುವೆ ಖರ್ಚಿಗಾಗಿ ಹಣವನ್ನು ಸಂಗ್ರಹಿಸಲಾಗಿತ್ತು. ಮಕ್ಕಂದೂರು ಗ್ರಾಮದ ಮನೆಗಳು ಮಣ್ಣಿನಲ್ಲಿ ಹೂತು ಹೋಗಿದ್ದು ಜನರು ಕಂಗಾಲಾಗಿದ್ದಾರೆ.
ವಿವಾಹವಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ಯುವತಿಯರು, ಭವಿಷ್ಯದ ಕಥೆ ಏನು? ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಸುಮಾರು 20 ಮನೆಗಳಿಗಳಿರುವ ಗ್ರಾಮ ಸಂಪೂರ್ಣವಾಗಿ ನಾಶವಾಗಿದೆ. ಎಲ್ಲರೂ ನಿರಾಶ್ರಿತರ ಕೇಂದ್ರದಲ್ಲಿ ಸದ್ಯಕ್ಕೆ ನೆಲೆಸಿದ್ದಾರೆ.












Click it and Unblock the Notifications